ವಿದ್ಯಾರ್ಥಿ ಜೀವನದಲ್ಲಿ ಎಂತಹ ದ್ವಂದ್ವ, ಏರುಪೇರು ಇದ್ದರೂ ತಾಳ್ಮೆಯಿಂದ ಕಷ್ಟಗಳನ್ನು ಮೆಟ್ಟಿ ನಿಂತು ಹೊರಬರಬೇಕು. ಜೀವನದಲ್ಲಿ ಸಹನಶೀಲತೆಯನ್ನು ರೂಢಿಸಿಕೊಳ್ಳಬೇಕು. ಆದರೆ ವಿದ್ಯಾರ್ಥಿಗಳಲ್ಲಿ ಇಂತಹ ಗುಣಗಳು ಇಂದು ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಧಾರವಾಡದ ಮೈಂಡ್ ವೇವ್ ನಿರ್ದೇಶಕ ಮಹೇಶ್ ಮಾಶಾಳ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವಿಶಾಲ ರಾಜಶೇಖರ ಹಂಚಿನಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಜೀವನದಲ್ಲಿ ಸಹನಶೀಲತೆ’ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತೀಯ ವಿದ್ಯಾರ್ಥಿಗಳು ದಿನಕ್ಕೆ ಆರು ಗಂಟೆಗಳ ಕಾಲ ಮೊಬೈಲ್ ವೀಕ್ಷಣೆಯಲ್ಲಿ ತೊಡಗಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಮನಸು ಮತ್ತು ಮೆದುಳನ್ನು ನಿಯಂತ್ರಿಸಿಕೊಳ್ಳಬೇಕು. ನಮ್ಮನ್ನು ನಾವು ಸ್ವನಿಯಂತ್ರಣಕ್ಕೆ ಒಳಪಡಿಸಿಕೊಳ್ಳದಿದ್ದರೆ ಜೀವನದಲ್ಲಿ ಸಾಧನೆ ಅಸಾಧ್ಯ ಎಂದರು.
“ಇಂದಿನ ಆಧುನಿಕ ದಿನಗಳಲ್ಲಿ ಪಾಲಕರು ಮಕ್ಕಳ ಜೊತೆ ಹೆಚ್ಚು ನಿಕಟ ಸಂಪರ್ಕ ಮತ್ತು ಸಂಬಂಧದಲ್ಲಿರಬೇಕು. ಮಕ್ಕಳ ಜೊತೆ ಪಾಲಕರ ಸಂಪರ್ಕ ಕಡಿಮೆಯಾಗಿದೆ. ಬಾಹ್ಯ ಜಗತ್ತಿನ ಸಂಬಂಧ ಹೆಚ್ಚಾಗಿ, ಪಾಲಕರ ಬಿಡುವಿಲ್ಲದ ಕೆಲಸಕಾರ್ಯಗಳಿಂದ ಮನಸು ಭಾರವಾಗುತ್ತಿದೆ. ಒಂದು ರೀತಿಯಲ್ಲಿ ಪಾಲಕರು ಮತ್ತು ಮಕ್ಕಳ ನಡುವೆ ಬಾಂಧವ್ಯ ಹಳಿ ತಪ್ಪುತ್ತಿದೆ” ಎಂದು ಅಭಿಪ್ರಾಯಿಸಿದರು.
“ಮಕ್ಕಳು ಮೊಬೈಲ್ ಹೆಚ್ಚು ವೀಕ್ಷಿಸುವ ಸಂದರ್ಭದಲ್ಲಿ ಮೆದುಳಿನಲ್ಲಿ ಡೋಪಮೈನ್ ರಾಸಾಯನಿಕ ಬಿಡುಗಡೆಯಾಗುತ್ತದೆ. ಅದು ತಾತ್ಕಾಲಿಕ ಖುಷಿ ಕೊಟ್ಟರೂ ಸಹನೆಯನ್ನು ಕಸಿದುಕೊಳ್ಳುತ್ತದೆ. ಸಮಾಧಾನ, ಸಹನಶೀಲತೆ ಮತ್ತು ಸಮಚಿತ್ತತೆಯನ್ನು ಕಾಪಾಡಿಕೊಂಡು ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕು. ಮನುಷ್ಯ ಮತ್ತು ಪ್ರಾಣಿಗಳ ಮೆದುಳಿನ ವ್ಯತ್ಯಾಸ ಹಾಗೂ ಬೆಳವಣಿಗೆಯ ಕುರಿತು ವಿವರಿಸಿ, ವೇದ, ವಚನ ಮತ್ತು ತತ್ವಜ್ಞಾನಿಗಳ ಸಂದೇಶ ನಮಗಿನ್ನೂ ಮಾದರಿ ಮತ್ತು ಎಂದಿಗೂ ಪ್ರಸ್ತುತ” ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎ.ಬಿ. ದೇಸಾಯಿ ಮಾತನಾಡಿ, “ಮೆದುಳಿನ ಪ್ರಕಾರಗಳು ಮತ್ತು ಮನಸಿನ ಸಹನಶೀಲತೆ ಹೇಗಿರಬೇಕು ಎಂಬುದನ್ನು ಅರಿಯಬೇಕು. ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ನಿಯಂತ್ರಣ ಮಾಡಲು ಅಥವಾ ಕಟ್ಟಿಹಾಕಲು ಸಾಧ್ಯವಿಲ್ಲ. ಮಗುವಿನ ಪ್ರತಿಭೆಯನ್ನು ಗುರುತಿಸಿ ಬುದ್ಧಿ ವಿಕಾಸಗೊಳಿಸಲು ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡದೇ ಹೋದರೆ ಹಿರಿಯರಾದ ನಾವು ತಪ್ಪು ಮಾಡಿದಂತಾಗುತ್ತದೆ” ಎಂದರು.
ಈ ದಿಸೆಯಲ್ಲಿ ಮೆದುಳು ಮತ್ತು ಮನಸನ್ನು ಅರಿಯಲು ಶ್ರೀ ಅರವಿಂದರು ಜ್ಞಾನ, ಕರ್ಮ ಮತ್ತು ಭಕ್ತಿ ಯೋಗದ ಮೂಲಕ ತಿಳಿಸಿಕೊಟ್ಟ ಅನೇಕ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಇದನ್ನು ಪಾಲಿಸುವಂತಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಕೆ.ಎಚ್. ಪಾಟೀಲ ಕಾಮರ್ಸ್ ಕಾಲೇಜಿನ 2025-26ನೇ ಸಾಲಿನ ಎಂ.ಕಾಮ್.ನಲ್ಲಿ ಪ್ರಥಮ ಸ್ಥಾನ ಪಡೆದ ಕು. ವಾಸಂತಿ ಗಿರಿಸಾಗರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ, “ಕಾಲೇಜಿನ ಗುರುಗಳ ಮಾರ್ಗದರ್ಶನ ಹಾಗೂ ತಂದೆ-ತಾಯಿಗಳ ಪ್ರೋತ್ಸಾಹ, ಸಹಕಾರ ನನ್ನ ಸಾಧನೆಗೆ ಕಾರಣ” ಎಂದು ಹಂಚಿನಮನಿ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.
ದತ್ತಿದಾನಿ ಚನ್ನಬಸಪ್ಪ ಮರದ ಮಾತನಾಡಿ ದತ್ತಿಯ ಆಶಯವನ್ನು ಹಂಚಿಕೊಂಡರು. ವೇದಿಕೆಯಲ್ಲಿ ವಿಶಾಲ ಹಂಚಿನಮನಿಯವರ ತಾಯಿ ವಿಜಯಲಕ್ಷ್ಮಿ ಹಂಚಿನಮನಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಪ್ರಿ. ಶಶಿಧರ ತೋಡಕರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಪ್ರೊ. ಬಿ.ಎಸ್. ಶಿರೋಳ, ಚಿಂತನ ಹತ್ತಿಕಾಳ, ಮಹೇಶ ಪರಸಣ್ಣವರ, ಶ್ರೀಧರ ಗಾಂವಕರ ಹಾಗೂ ಹಂಚಿನಮನಿ ಕುಟುಂಬದವರು ಮತ್ತಿತರರು ಭಾಗವಹಿಸಿದ್ದರು.




