- ಮಂಜು ಮುಸುಕಿದ ವಾತವರಣದಿಂದ ನಡೆದ ಅಪಘಾತ
- ಜಿಲ್ಲಾಧಿಕಾರಿ ಮನೆ ಮುಂದೆ ತಪ್ಪಿದ ಭಾರಿ ದುರಂತ
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಸರ್ಕಾರಿ ನಿವಾಸದ ಮುಂದೆ ಇದ್ದ ಹೈ ವೋಲ್ಟೇಜ್ ವಿದ್ಯುತ್ ಕಂಬಕ್ಕೆ ಹಾಲು ಸಾಗಿಸುವ ಗೂಡ್ಸ್ ವಾಹನವು ಡಿಕ್ಕಿ ಹೊಡೆದಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ಶನಿವಾರ ಮುಂಜಾನೆ ಈ ಅಪಘಾತ ನಡೆದಿದೆ. ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಇದ್ದುದ್ದರಿಂದ ಈ ಅಪಘಾತ ಸಂಭವಿಸಿತು ಎಂದು ಗೂಡ್ಸ್ ವಾಹನದ ಚಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಜಿಲ್ಲಾಧಿಕಾರಿ ಮನೆ ಇರುವ ವಿಶ್ವೇಶ್ವರಯ್ಯ ನಗರದಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಾಗಿದ್ದು, ಪ್ರತಿ ದಿನ ಮುಂಜಾನೆ ಹಿರಿಯ ನಾಗರಿಕರು ಹಾಗೂ ಮಕ್ಕಳು ವಾಯು ವಿಹಾರಕ್ಕೆಂದು ಬರುತ್ತಿರುತ್ತಾರೆ. ಇವರೆಲ್ಲರೂ ಇದ್ದಾಗ ಅಪಘಾತ ಸಂಭವಿಸಿದ್ದರೆ ಭಾರಿ ಅನಾಯುತ ಆಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಜಾರ್ಖಂಡ್ | ಗೋಮಾಂಸ ಹೊಂದಿದ್ದ ವ್ಯಕ್ತಿ ಮೇಲೆ ಗುಂಪು ಹಲ್ಲೆ; ಪೊಲೀಸರ ರಕ್ಷಣೆ
ಹಾಲಿನ ಗೂಡ್ಸ್ ವಾಹನವು ಇಲ್ಲಿಗೆ ಬರುವಷ್ಟರಲ್ಲಿ ಕೆಲವು ಘಟಕಗಳಿಗೆ ಹಾಲನ್ನು ಸರಭರಾಜು ಮಾಡಿತ್ತು. ಅಪಘಾತವಾದ ನಂತರ, ಬೇರೊಂದು ವಾಹನ ತಂದು ಗಾಡಿಯಲ್ಲಿದ್ದ ಹಾಲನ್ನು ಸ್ಥಳಾಂತ ಮಾಡಲಾಯಿತು.
ಅಪಘಾತದ ರಭಸಕ್ಕೆ ಗೂಡ್ಸ್ ವಾಹನದ ಮುಂಭಾಗವು ನಜ್ಜುಗುಜ್ಜಾಗಿದ್ದು, ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿವೆ. ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.