ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಹಣ ಪಡೆದು ನಕಲಿ ಘಟಿಕೋತ್ಸವ ಸರ್ಟಿಫಿಕೇಟ್ ಕೊಡುತ್ತಿದ್ದ ಹಗರಣ ಬಯಲಾದ ಬೆನ್ನಲ್ಲೇ ಮತ್ತೊಂದು ದಂಧೆ ಬೆಳಕಿಗೆ ಬಂದಿದ್ದು, ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಣ ಪಡೆದು ತೇರ್ಗಡೆ ಮಾಡುತ್ತಿದ್ದ ಅವ್ಯವಹಾರ ಬೆಳಕಿಗೆ ಬಂದಿದೆ.
ಒಂದು ಪತ್ರಿಕೆಗೆ ಆರು ಸಾವಿರ ರೂಪಾಯಿ ಕೊಟ್ಟರೆ ನಪಾಸಾದ ವಿದ್ಯಾರ್ಥಿಗಳನ್ನು ವಿವಿ ಸಿಬ್ಬಂದಿ ಪಾಸ್ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸ್ ಮಾಡಲಾಗಿದ್ದು, ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ದಂಧೆ ಈಗ ಬಯಲಾಗಿದೆ. UCMC ವಿಭಾಗದ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಎನ್ನುವವರ ಮೇಲೆ ಆರೋಪ ಕೇಳಿ ಬಂದಿದ್ದು, ವೆಂಕಟ್ ಹಾಗೂ ರಿಯಾಜ್ ಎನ್ನುವ ಸಿಬ್ಬಂದಿ ಆಡಿಯೋದಲ್ಲಿ ವಿದ್ಯಾರ್ಥಿಗಳ ಬಳಿ ಹಣ ಕೇಳುವ ವಿಚಾರ ಬೆಳಕಿಗೆ ಬಂದಿದೆ.

ಈ ದಂಧೆ ಬಯಲಾದ ಬೆನ್ನಲ್ಲೇ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಅಕ್ರಮ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ದಂಧೆಯಲ್ಲಿ ವಿವಿಯ ಪ್ರತಿಷ್ಟರು ಭಾಗಿಯಾಗಿದ್ದು, ಗಂಭೀರ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು, “ವಿಶ್ವವಿದ್ಯಾಲಯದ ಹೆಸರು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಈಗ ವೈರಲ್ ಆಗಿರುವ ಆಡಿಯೋ ಹಳೆಯದ್ದು ಎಂದಿದ್ದಾರೆ. ಆಡಿಯೋದಲ್ಲಿ ಕೇಳಿ ಬಂದ ಹೆಸರಿನ ಸಿಬ್ಬಂದಿ ವಿರುದ್ಧ ಖಂಡಿತ ಕ್ರಮ ವಹಿಸುತ್ತೇನೆ. ಠಾಣೆಯಲ್ಲಿ ದೂರು ದಾಖಲಿಸುತ್ತೇನೆ. ಯಾರೇ ಆಗಲಿ ನನಗೆ ಮುಲಾಜಿಲ್ಲ. ಈ ರೀತಿಯ ಕೃತ್ಯ ಎಸಗಿದವರನ್ನು ಕೆಲಸದಿಂದ ತೆಗೆದು ಹಾಕುತ್ತೇನೆ” ಎಂದಿದ್ದಾರೆ.




