ಪರೀಕ್ಷೆ ಹಾಗೂ ಪ್ರವೇಶ ಶುಲ್ಕ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪರಿವರ್ತನಾ ಸಂಘ ನೇತೃತ್ವದಲ್ಲಿ ಬೀದರ್ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಯಿತು.
ಬೀದರ್ ವಿಶ್ವವಿದ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ಬಳಿಕ ವಿವಿ ಕುಲಪತಿ ಪ್ರೊ.ಬಿ.ಎಸ್.ಬಿರಾದರ್, ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸದೆ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಎರಡರಷ್ಟು ಹೆಚ್ಚಿಸಿರುವುದರಿಂದ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಉಂಟಾಗಿದ್ದು, ಕೂಡಲೇ ಶುಲ್ಕವನ್ನು ಕಡಿತಗೊಳಿಸಬೇಕು” ಎಂದು ಒತ್ತಾಯಿಸಿದರು.
“ಪರೀಕ್ಷೆ ವೆಚ್ಚಕ್ಕೆ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸದೇ, ಕೆಲವು ಕಾಲೇಜುಗಳಿಗೆ ಗುಣಮಟ್ಟದ ಉತ್ತರ ಪತ್ರಿಕೆಗಳ ಬದಲಿಗೆ ಬಿಳಿ ಹಾಳೆ ಹಾಗೂ ಝೆರಾಕ್ಸ್ ಹಾಳೆಗಳನ್ನು ನೀಡಲಾಗುತ್ತಿದೆ. ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾದರೂ, ಮುದ್ರಿತ ಪ್ರಶ್ನೆ ಪತ್ರಿಕೆಗಳು ಕಾಲೇಜುಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು.
“ಕ್ರೀಡಾ ವಿಭಾಗಕ್ಕೆ ಅಗತ್ಯ ಸೌಲಭ್ಯ ಮತ್ತು ಪ್ರೋತ್ಸಾಹದ ಕೊರತೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದರು.

“ವಿಶ್ವವಿದ್ಯಾಲಯದ ವ್ಯಾಪ್ತಿಯ ಸುಮಾರು 24 ಬಿ.ಇಡ್ ಕಾಲೇಜುಗಳಲ್ಲಿ ಹಲವು ಕಾಲೇಜು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ನಿಯಮಿತ ತರಗತಿಗಳಿಗೆ ಹಾಜರಾಗದೆ ನೇರವಾಗಿ ಪರೀಕ್ಷೆ ಬರೆಯುತ್ತಿರುವ ಕುರಿತು ತನಿಖೆ ನಡೆಸಬೇಕು” ಎಂದರು.
“ಬಿ.ಇಡ್ ಪರೀಕ್ಷೆಗಳಲ್ಲಿ ಕೆಲವು ಕಾಲೇಜುಗಳಲ್ಲಿ ಗೈರುಹಾಜರಾಗಿದ್ದ ವಿದ್ಯಾರ್ಥಿಗಳ ಹೆಸರಿನಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಲಾಗಿದೆ.
“ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಎರಡು ದಿನಗಳಲ್ಲಿ ಬಗೆಹರಿಸಬೇಕು. ಇಲ್ಲದಿದ್ದರೆ ವಿಶ್ವವಿದ್ಯಾಲಯ ಎದುರುಗಡೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ನೂತನ ಅಪರ ಜಿಲ್ಲಾಧಿಕಾರಿಯಾಗಿ ಸುರೇಖಾ ನೇಮಕ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪವನ ಮಿಠಾರೆ, ಸಂಘಟನೆ ಸಲಹೆಗಾರ ಸೂರ್ಯಕಾಂತ ಸಾಧುರೆ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾವ ಮಾಲಗತ್ತಿ ಸೇರಿದಂತೆ ಪ್ರಮುಖರಾದ ಗೋಪಾಲ ಸಾಗರ್, ನಾಗಸೇನ್ ಗಾಯಕವಾಡ, ಸಂತೋಷ ಏಣಕುರೆ, ಶಿವುಸಾಗರ, ಜೈಪಾಲ್, ಹರ್ಷಿತ್ ದಾಂಡೇಕರ್, ರಾಹುಲ್ ಡಾಂಗೆ, ಪ್ರಕಾಶ್ ರಾವಣ್, ಸಿದ್ಧಾರ್ಥ ಭಾವಿದೊಡ್ಡಿ, ಹರೀಶ ಖಂಡೆ, ನಿತೀಶ ಶಿಂಧೆ, ಮಹೇಶ ಭಾವಿದೊಡ್ಡಿ, ಗೌತಮ್ಮ ಮುತ್ತಂಗಿರ್, ಗೋಪಾಲ್ ದೊಡ್ಡಿ, ಲೋಕೇಶ ಕಾಂಬಳೆ, ಉತ್ತಮ ಕೆಂಪೇ, ಶ್ರೀಕಾಂತ, ಹರೀಶ ಚಕ್ರವರ್ತಿ, ರಾಜಶೇಖರ್ ವರ್ಮಾ , ಸುನೀಲ್ ಕುಮಾರ, ಕೃಷ್ಣ, ನೀಲಕಂಠ ಕಾಂಬಳೆ, ಸಾಯಿನಾಥ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.




