ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಆರ್ ಪೇಟೆಯ ಬಿ.ಎಲ್ ದೇವರಾಜು ಅವರು ಪಕ್ಷ ತೊರೆದಿದ್ದು, ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದ ದೇವರಾಜು ಅವರು 2023ರ ವಿಧಾನಸಭಾ ಚುನಾವಣೆಗೆ ಕೆಆರ್ ಪೇಟೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡದ್ದರಿಂದ ಬಂಡಾಯವೆದ್ದಿದ್ದರು. ಇದೀಗ ಪಕ್ಷ ತೊರೆಯಲು ಸಜ್ಜಾಗಿದ್ದಾರೆ.
ಶುಕ್ರವಾರ ಕೆಆರ್ಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವರಾಜು, ಪಕ್ಷವನ್ನು ತೊರೆಯುವುದಾಗಿ ತಿಳಿಸಿದ್ದಾರೆ. “ಜನತಾ ಪಕ್ಷ ಹುಟ್ಟಿಕೊಂಡಾಗಿನಿಂದ ಜನತಾಪಕ್ಷ, ಜನತಾದಳ, ಜೆಡಿಎಸ್ನಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ. ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. 2018ರ ಚುನಾವಣೆಯಲ್ಲಿ ಕೆ.ಸಿ ನಾರಾಯಣಗೌಡ ಹಾಗೂ ನನಗೆ ಸಿ ಫಾರಂ ಕೊಟ್ಟರು. ನಂತರ ನನ್ನ ನಾಮಪತ್ರ ತಿರಸ್ಕೃತವಾಯಿತು. 2004, 2013ರ ಚುನಾವಣೆಗಳಲ್ಲೂ ನಾನು ಟಿಕೆಟ್ ವಂಚಿತನಾಗಿದ್ದೆ” ಎಂದು ಬೇಸರ ವ್ಯಕ್ತಪಡಿಸಿದರು.
“2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗ ಕೇವಲ 5 ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಆ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿ ತಮ್ಮ ಪರವಾಗಿ ಒಂದೇ ಒಂದು ದಿನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರೂ ನಾನು ಸೋಲುತ್ತಿರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇದು ನನ್ನ ಕೊನೆಯ ಚುನಾವಣೆ. ಈ ಬಾರಿ ಟಿಕೆಟ್ ನೀಡುವಂತೆ ಜೆಡಿಎಸ್ ನಾಯಕರಲ್ಲಿ ಕೇಳಿಕೊಂಡಿದ್ದೆ. ಆದರೆ, ಅವರು ನನಗೆ ಟಿಕೆಟ್ ಕೊಡಲಿಲ್ಲ. ಬದಲಾಗಿ, ಇತ್ತೀಚೆಗಷ್ಟೇ ಪಕ್ಷ ಸೇರಿದ ಎಚ್.ಟಿ ಮಂಜುಗೆ ಟಿಕೆಟ್ ನೀಡಿದ್ದಾರೆ. ಮತ್ತೆ ನನಗೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.
“ಪಕ್ಷದ ನಡೆಯಿಂದ ನನ್ನ ಬೆಂಬಲಿಗರೂ ಅಸಮಾಧಾನಗೊಂಡಿದ್ದಾರೆ. ಅವರೆಲ್ಲರ ತೀರ್ಮಾನದಂತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಮಾರ್ಚ್ 27ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರುತ್ತೇನೆ” ಎಂದು ತಿಳಿಸಿದ್ದಾರೆ.