ಮೂರೂವರೆ ಕೆ.ಜಿಗಳಷ್ಟು ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್) ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ನಗರದ ಅರಣ್ಯ ಸಂಚಾರಿ ದಳದ ಪೊಲೀಸರು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ನಿವಾಸಿಗಳಾದ ಸಮಿ ಅಹ್ಮದ್ ಹಾಗೂ ಫೈರೋಜ್ ಖಾನ್ ಬಂಧಿತರು. ತಮಿಳುನಾಡಿನ ಸೇಲಂನ ಕಾಳಸಂತೆಯಲ್ಲಿ ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡುವುದಕ್ಕಾಗಿ ಹೊರಟಿದ್ದು, ಮೈಸೂರಿನಿಂದ ಬಂದಿದ್ದ ಅವರು ನಗರದ ಮುಡಿಗುಂಡ ಬಸ್ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಮಹಿಳಾ ಪಿಎಸ್ಐ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಅಪಾರ ಹಾನಿ
ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ವಿಜಯರಾಜು ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸಲಾಗಿದೆ. ಅವರ ಬಳಿ ಇದ್ದ ತಿಮಿಂಗಲ ವಾಂತಿ, ಎರಡು ಮೊಬೈಲ್ ಹಾಗೂ ₹1,210 ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಸವರಾಜು, ಸ್ವಾಮಿ, ರಾಮಚಂದ್ರ, ಶಂಕರ, ಚಾಲಕ ಪ್ರಭಾಕರ, ಜೆ ಬಸವರಾಜು ಇದ್ದರು.