- ಒಳಮೀಸಲಾತಿ ವರ್ಗೀಕರಣದಲ್ಲಿ ಶೇ. 1ರಷ್ಟು ಮೀಸಲಾತಿ ನೀಡಿರುವುದು ಅವೈಜ್ಞಾನಿಕ
- ಅಲೆಮಾರಿಗಳ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿಧಾನಸಭಾ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಶೇ. 2ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಎಸ್ಸಿ – ಎಸ್ಟಿ ಅಲೇಮಾರಿ ಬುಡಕಟ್ಟು ಮಹಾಸಭ ಮತ್ತು ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ನೇತೃತ್ವದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಕುರಿತು ರಾಜ್ಯ ಎಸ್ಸಿ – ಎಸ್ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿ ಸಣ್ಣ ಅಜ್ಜಯ್ಯ ಈದಿನ.ಕಾಮ್ ಜೊತೆಗೆ ಮಾತನಾಡಿ, “ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಎಸ್ಸಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವಂತೆ ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಸ್ಪಂದಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿರುವುದು ಅಭಿನಂದನೀಯ” ಎಂದರು.
“ಆದರೆ, ಇದುವರೆಗೂ ಸಮಾಜದ ಮುಖ್ಯ ವಾಹಿನಿಯಿಂದ ವಂಚಿತವಾಗಿ ಗುಡಿಸಲುಗಳಲ್ಲಿ ವಾಸಿಸುತ್ತಾ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿರುವ, ಇದುವರೆಗೂ ಶಾಲೆಯ ಮುಖವನ್ನೇ ನೋಡದ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆಗಳಿಲ್ಲದೆ, ವಿಳಾಸವಿಲ್ಲದೆ, ಶಿಕ್ಷಣವಿಲ್ಲದೆ ಊರಿಂದ ಊರಿಗೆ ಅಲೆಯುವ ಅಲೆಮಾರಿ ಮತ್ತಿತರ ಸಮುದಾಯಗಳೆಂದು 4ನೇ ವರ್ಗದಲ್ಲಿ ಗುರುತಿಸಿ ಕೇವಲ ಶೇ. 1 ರಷ್ಟು ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮೀಸಲಾತಿ ರದ್ದು ವಿರೋಧಿಸಿ ಬೀದಿಗಿಳಿದ ಮುಸ್ಲಿಮ್ ಮುಖಂಡರು
“ಪರಿಶಿಷ್ಟ ಜಾತಿಗೆ ಇದ್ದ ಶೇ. 15ರಷ್ಟು ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಲಾಗಿದೆ. ಕೇವಲ ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಮಾಡದೆ, ಇದುವರೆಗೂ ಯಾವ ವರ್ಗಗಳು ಈ ಶೇ. 15ರಷ್ಟು ಮೀಸಲಾತಿಯನ್ನು ಬಳಸಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿ ಹೊಂದಿವೆಯೋ ಅಂತಹ ಜಾತಿಗಳಿಗೆ ಸ್ವಲ್ಪ ಕಡಿಮೆ ಮೀಸಲು ನೀಡಿ, ಇದುವರೆಗೂ ಮೀಸಲಾತಿ ವಂಚಿತರಾಗಿರುವ ಹಿಂದುಳಿದ ಅಲೆಮಾರಿ ಮತ್ತಿತರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳೆಂದು ಗುರುತಿಸಿ ಶೇ. 1 ಮೀಸಲಾತಿ ನೀಡಿರುವುದು ಮೂಗಿಗೆ ತುಪ್ಪ ಸವರಿದಂತಿದೆ” ಎಂದು ದೂರಿದರು.
“ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆಯಬೇಕೆಂದರೆ ಕನಿಷ್ಠ ಶೇ. 2ರಷ್ಟು ಮೀಸಲಾತಿ ನೀಡಬೇಕು. ಅಲೆಮಾರಿಗಳ ಧ್ವನಿ ಕೇಳದೆ ಕಡೆಗಣಿಸಿದರೆ ಮುಂದೆ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಮುಖಂಡರಾದ ಸಣ್ಣ ಮಾರೆಪ್ಪ, ಕಿನ್ನರಿ ಶೇಕಪ್ಪ, ಭದ್ರಿ, ಗಾಳೆಪ್ಪ, ಶಿವಕುಮಾರ್, ಹನುಮಂತ, ಪಕ್ಕೀರಪ್ಪ ಬಾದಿಗಿ, ಬಾಲಾಜಿ, ರಾಜಕುಮಾರ್ ಹಾಗೂ ಇತರರು ಇದ್ದರು.