ವಿದ್ಯಾಕಾಶಿ ಧಾರವಾಡದಲ್ಲಿದ್ದ ದೂರದರ್ಶನ ಕೇಂದ್ರವು ಕಳೆದ ಮೂರು ವರ್ಷಗಳಿಂದ ಮುಚ್ಚಿದ್ದು ಇದರಿಂದ ಉತ್ತರ ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಅನ್ನುತ್ತಾರೆ ಧಾರವಾಡದ ಜನ.
ಯಾವುದಾದರೂ ಒಂದು ರೀತಿಯಿಂದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯವನ್ನು ಮಾಡುತ್ತಲೇ ಬಂದಿದೆ. ಬಿಎಸ್ಎನ್ಎಲ್, ರೈಲ್ವೆಯಂತಹ ಇಲಾಖೆಗಳನ್ನು ಖಾಸಗೀಕರಣಗೊಳಿಸಿದರೆ, ಇತ್ತ ಧಾರವಾಡದಲ್ಲಿದ್ದ ದೂರದರ್ಶನ ಕೇಂದ್ರವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಆಕಾಶವಾಣಿ ಕೇಂದ್ರವೂ ಮುಚ್ಚಬಹುದು ಎಂಬ ಮಾತಗಳೂ ಅಲ್ಲಲ್ಲಿ ಕೇಳಿಬರುತ್ತಿವೆ.
ಈ ಕುರಿತು ಕೇಂದ್ರದಲ್ಲಿ ಆಪ್ತರಾಗಿಯೂ, ಸ್ಥಳೀಯರೇ ಅಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ದೂರದರ್ಶನ ಕೇಂದ್ರದ ಕುರಿತಾಗಿ ಇದರಿಂದ ಉತ್ತರ ಕರ್ನಾಟಕದ ಜನತೆಗೆ ಆಗುತ್ತಿರುವ ಅನ್ಯಾಯದ ಕುರಿತಾಗಿ ಲೋಕಸಭೆಯಲ್ಲಾಗಲಿ, ಯಾವುದೇ ಕಾರ್ಯಕ್ರಮಗಳಾಗಲಿ ಧ್ವನಿಯೆತ್ತಿದ್ದು ಕಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡದ ದೂರದರ್ಶನ ಕೇಂದ್ರ ಸಂಪೂರ್ಣ ಮುಚ್ಚಿದ್ದು, ಯಾವುದೇ ಉಪಯೋಗಕ್ಕೂ ಬರುತ್ತಿಲ್ಲ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಾಗಿಯೇ ನಿರ್ಮಾಣಗೊಂಡಿದ್ದ ಉತ್ತಮ ಗುಣಮಟ್ಟದ ಕಟ್ಟಡಗಳೂ ಕೂಡ ಹಾಳು ಬಿದ್ದಿವೆ. ಈ ಕುರಿತು ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇನ್ನು ದೂರದರ್ಶನ ಕೇಂದ್ರಗಳು ಶುರುವಾದರೆ ಇಡೀ ರಾಜ್ಯಾದ್ಯಂತ ಸುಮಾರು 20 ಸಾವಿರ ಜನತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಧಾರವಾಡದ ದೂರದರ್ಶನ ಕೇಂದ್ರ ಶುರುವಾದರೆ ಸುಮಾರು 1500 ಜನ ಉದ್ಯೋಗವನ್ನು ಪಡೆಯುತ್ತಾರೆ.
This video cannot be played in your browser. Open the video directly
ಉತ್ತರ ಕರ್ನಾಟಕದಲ್ಲಿ ನಡೆಯುವಂತಹ ಎಲ್ಲಾ ಸಾಂಸ್ಕೃತಿಕ ಸಾಹಿತಿಕ ಚಟುವಟಿಕೆಗಳನ್ನು ಧಾರವಾಡ ದೂರದರ್ಶನದಿಂದಲೇ ಪ್ರಸಾರ ಮಾಡಬಹುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಧಾರವಾಡದ ಜನ ದೂರುತ್ತಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜೊತೆಗೆ ರಂಗಕರ್ಮಿ ಐ.ಬಿ.ಈಳಿಗೇರ ಮಾತನಾಡಿ, “ಧಾರವಾಡದ ದೂರದರ್ಶನ ಕೇಂದ್ರವನ್ನು ಸಂಪೂರ್ಣವಾಗಿ ಮತ್ತೆ ಶುರು ಮಾಡಬೇಕು. ಕಾರಣ ಇಲ್ಲಿ ನಡೆಯುವಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಇಲ್ಲಿಂದಲೇ ಪ್ರಸಾರಗೊಳಿಸಬೇಕು. ಪ್ರಸ್ತುತ ಬೆಂಗಳೂರು ಕೇಂದ್ರ ಕಚೇರಿಯನ್ನೇ ಅನಿವಾರ್ಯವಾಗಿ ಅವಲಂಬಿತಗೊಳಿಸಲಾಗಿದೆ. ಇದರ ಬಗ್ಗೆ ಸ್ಥಳೀಯ ಸಚಿವ ಪ್ರಲ್ಹಾದ್ ಜೋಶಿ ಯಾಕೆ ಧ್ವನಿಯೆತ್ತಿಲ್ಲ? ಉತ್ತರ ಕರ್ನಾಟಕದ ಜನ ಬೆಳೆಯಬಾರದೇ? ಉದ್ಯೋಗಗಳನ್ನ ಅರಸಿಕೊಂಡು ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಗೆ ಉದ್ಯೋಗಗಳನ್ನು ಹೋಗಬೇಕೇ? ಇಲ್ಲಿಯೇ ಶುರು ಮಾಡಿದರೆ ಸ್ಥಳೀಯರಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಂತಾಗುತ್ತದಲ್ಲವೇ” ಎಂದು ಅಭಿಪ್ರಾಯಿಸಿದ್ದಾರೆ.

ಪತ್ರಕರ್ತ ಎಂ.ಕೆ.ನದಾಫ್ ಮಾತನಾಡಿ, “ಈ ಮೊದಲು ಧಾರವಾಡ ದೂರದರ್ಶನ ಕೇಂದ್ರ ಬಂದ್ ಆಗುತ್ತದೆ ಎಂಬ ಸುದ್ದಿ ಕೇಳಿದಾಗ ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದೆವು. ಆದರೆ ಇತ್ತೀಚಿಗೆ 2021ರಲ್ಲಿ ದೂರದರ್ಶನ ಕೇಂದ್ರವನ್ನು ಸಂಪೂರ್ಣ ಮುಚ್ಚಿ ಹಾಕಿದ್ದಾರೆ. ಇದರಿಂದ ಸ್ಥಳೀಯವಾಗಿ ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳು ಉದ್ಯೋಗಗಳನ್ನು ಅರಿಸಿಕೊಂಡು ಬೆಂಗಳೂರು, ಹೈದರಾಬಾದ್ನಂತಹ ದೊಡ್ಡ ನಗರಗಳಿಗೆ ಹೋಗುವಂತಹ ಅನಿವಾರ್ಯತೆಯನ್ನು ಕೇಂದ್ರ ಸರ್ಕಾರ ಉಂಟು ಮಾಡಿದೆ. ಆದ್ದರಿಂದ, ಈ ಕೂಡಲೇ ಈ ದೂರದರ್ಶನ ಕೇಂದ್ರವನ್ನು ಪುನರಾರಂಭ ಮಾಡಬೇಕು” ಎಂದು ಒತ್ತಾಯಿಸಿದರು.
ಪತ್ರಿಕೋದ್ಯಮ ವಿದ್ಯಾರ್ಥಿನಿ ಶಾಂಭವಿ ರಘು ಮಾತನಾಡಿ,”ನಾವು ಇದ್ದಲ್ಲಿಯೇ ಏನಾದರೂ ಒಂದು ಸಾಧನೆ ಮಾಡಬೇಕು. ನಾವು ಕಲಿತಂತ ಊರನ್ನೇ ಮತ್ತಷ್ಟು ಅಭಿವೃದ್ಧಿಗೊಳಿಸಬೇಕು ಎಂಬ ಉದ್ದೇಶದಿಂದ ವಿದ್ಯಾಭ್ಯಾಸವನ್ನು ಕಲಿಯುತ್ತೇವೆ. ಇಲ್ಲಿ ಇರುವಂತಹ ದೂರದರ್ಶನ ಕೇಂದ್ರ ಮತ್ತೆ ಶುರುವಾದರೆ ಇಲ್ಲಿಯೇ ಓದುತ್ತಿರುವ ನಮಗೆ ಅಂದರೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ” ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
ಪತ್ರಿಕೋದ್ಯಮ ವಿದ್ಯಾರ್ಥಿ ಸಮೀರ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ನಾವು ಪತ್ರಿಕೋದ್ಯಮ ಓದುತ್ತಿರುವುದು ಉದ್ಯೋಗಕ್ಕಾಗಿ ಮಾತ್ರ ಅಲ್ಲದಿದ್ದರೂ ಸ್ಥಳೀಯವಾಗಿ ನಮಗಾಗಿ ಒಂದು ದೂರದರ್ಶನವಾದರೂ ಇರಬೇಕು ಎಂಬ ಆಸೆ ಇದೆ. ಹೀಗೆ ದೂರದರ್ಶನ ಕೇಂದ್ರಗಳನ್ನು ಮುಚ್ಚುತ್ತಾ ಹೋದರೆ ವಿದ್ಯಾಭ್ಯಾಸ ಮಾಡಿದವರ ಗತಿ ಏನು?” ಎಂದು ಕೇಳಿದ್ದಾರೆ.
ಸ್ಥಳೀಯ ನಿವಾಸಿ ಮಲ್ಲು ಮಾತನಾಡಿ, “ಬೇಡದ ವಿಚಾರಗಳಿಗೆ ಮಾತನಾಡುವ ಕೇಂದ್ರ ಸಚಿವ ಪ್ರಲ್ಹಾದ್ ಜೋಸಿಯವರು, ಈ ವಿಚಾರದ ಕುರಿತು ಏಕೆ ಧ್ವನಿಯೆತ್ತುತ್ತಿಲ್ಲ” ಪ್ರಶ್ನೆ ಮಾಡಿದ್ದಾರೆ.
ಇನ್ನಾದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಗೊಳ್ಳುವವರೇ? ಧಾರವಾಡದ ಜನತೆಯ ಪ್ರಶ್ನೆಗಳಿಗೆ ಉತ್ತರಿಸುವರೆ? ದೂರದರ್ಶನ ಕೇಂದ್ರವನ್ನು ಮರಳಿ ಪ್ರಾರಂಭ ಮಾಡಲು ಜವಾಬ್ದಾರಿ ತೆಗೆದುಕೊಳ್ಳುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.





