- ಪ್ರಮುಖ ಪಟ್ಟಣ, ನಗರಗಳ ಪ್ರವೇಶ ದ್ವಾರಗಳಲ್ಲಿ ಚೆಕ್ಪೋಸ್ಟ್ ಆರಂಭ
- ತೇಗೂರು ಚೆಕ್ಪೋಸ್ಟ್ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 53 ಲಕ್ಷ ರೂ. ವಶ
ಚುನಾವಣೆ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದ ಹಣ, ಅಕ್ರಮ ಮದ್ಯ ಮತ್ತು ಉಚಿತ ಸಾಮಗ್ರಿಗಳ ಹರಿವನ್ನು ತಡೆಯಲು ಧಾರವಾಡ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆದಿದೆ.
ಜಿಲ್ಲೆಯಲ್ಲಿ ಏಳು ಪೊಲೀಸ್ ಚೆಕ್ ಪೋಸ್ಟ್ಗಳು ಮತ್ತು ಐದು ಜಂಟಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
“ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿ ಇರಲಿದ್ದು, ಜಂಟಿ ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್, ಕಂದಾಯ, ಆರ್ಟಿಒ, ವಾಣಿಜ್ಯ ತೆರಿಗೆ, ಅಬಕಾರಿ ಮತ್ತು ಇತರ ಇಲಾಖೆಗಳ ಸಿಬ್ಬಂದಿ ಇರುತ್ತಾರೆ. ಅವರು ಜಿಲ್ಲೆಯ ಪ್ರಮುಖ ಪಟ್ಟಣಗಳು ಮತ್ತು ನಗರಗಳ ಪ್ರವೇಶ ದ್ವಾರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರ ಸ್ಥಳವು ಕಾಲಕಾಲಕ್ಕೆ ಬದಲಾಗುತ್ತದೆ” ಎಂದು ಎಸ್ಪಿ ಹೇಳಿದರು.
“ಚೆಕ್ಪೋಸ್ಟ್ಗಳ ಮೂಲಕ ಹಾದುಹೋಗುವ ವಾಹನಗಳನ್ನು ಪರಿಶೀಲಿಸಲು ಈಗಾಗಲೇ ಸಿಬ್ಬಂದಿಗಳು ಕಾರ್ಯ ಪ್ರಾರಂಭಿಸಿದ್ದು, ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಶುಕ್ರವಾರ ರಾತ್ರಿ ತೇಗೂರು ಚೆಕ್ಪೋಸ್ಟ್ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 53 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಗೆ ಅಧಿಕೃತವಾಗಿ ಚುನಾವಣೆಗಳನ್ನು ಘೋಷಿಸಿದ ನಂತರ ಎಲ್ಲ ವಾಹನಗಳನ್ನು ಪರಿಶೀಲಿಸಲಾಗುವುದು. ಬಳಿಕ ಈ ಅಭಿಯಾನವನ್ನು ತೀವ್ರಗೊಳಿಸಲಾಗುವುದು” ಎಂದು ಎಸ್ಪಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಜೆಡಿಎಸ್ ಯಾತ್ರೆಯಲ್ಲಿ ಉಳಿದ ಆಹಾರ ಸೇವಿಸಿ…
“ಅಬಕಾರಿ ನಿಯಮಗಳು ವೈಯಕ್ತಿಕ ಬಳಕೆಗಾಗಿ ಹಲವು ಬ್ರಾಂಡ್ಗಳ ಮದ್ಯವನ್ನು ಸಾಗಿಸಲು ನಿರ್ದಿಷ್ಟ ಪ್ರಮಾಣವನ್ನು ಸೂಚಿಸುತ್ತವೆ. ನಿಗದಿತ ಪ್ರಮಾಣದ ಮಿತಿಯನ್ನು ಮೀರಿದ್ದರೆ, ಅಂತಹ ಸರಕನ್ನು ವಶಪಡಿಸಿಕೊಕೊಳ್ಳಲಾಗುತ್ತದೆ” ಎಂದು ಎಸ್ಪಿ ಸ್ಪಷ್ಟಪಡಿಸಿದರು.
“ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಚುನಾವಣೆಗೆ ಅಧಿಸೂಚನೆ ಹೊರಡಿಸಿದ ನಂತರ, ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಚೆಕ್ಪೋಸ್ಟ್ ಸಿಬ್ಬಂದಿ ಹದ್ದಿನಂತೆ ಕಣ್ಣಿಡುತ್ತಿದ್ದಾರೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಸಿವಿಜಿಲ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಲು ಸಾರ್ವಜನಿಕರಿಗೆ ಅಧಿಕಾರ ನೀಡಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿರುವುದು ವರದಿಯಾಗಿದೆ.