ಎರಡನೇ ನೂತನ ಸಚಿವ ಸಂಪುಟದಲ್ಲಿ ಎಚ್ ಕೆ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಗದಗ-ಬೆಟಗೇರಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಗೆ ಸಾಮೂಹಿಕವಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಗದಗ ಪಟ್ಟಣದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಎಚ್ ಕೆ ಪಾಟೀಲ್ ಬೆಂಬಲಿಗರು, ಕಾರ್ಯಕರ್ತರು ರಸ್ತೆ ತಡೆದು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹೈ ಕಮಾಂಡ್, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ 16 ಚುನಾಯಿತ ಕಾಂಗ್ರೆಸ್ ಸದಸ್ಯರು ಹಾಗೂ 5 ಮಂದಿ ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 21 ಮಂದಿ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ನೀಡಿದರು.
ಈ ವೇಳೆ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಸದಸ್ಯರು, ಉತ್ತರ ಕರ್ನಾಟಕ ಭಾಗಕ್ಕೆ ಸತತವಾಗಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ‘ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ’ಕ್ಕೆ ಬೇಡಿಕೆ ಇಡುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದರು.
ಈ ಸುದ್ದಿ ಓದಿದ್ದೀರಾ? ಮಾನವೀಯತೆಗೂ SIRಗೂ ಸಂಬಂಧವೇನು? ಪ್ರಜಾಪ್ರಭುತ್ವದ ಹಕ್ಕು, ದಾಖಲೆಗಳ ಗೊಂದಲ-ಉತ್ತರ ಸಿಗದ ಪ್ರಶ್ನೆಗಳು
ಎಚ್ ಕೆ ಪಾಟೀಲ ಅವರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ನಾಡಿನ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಹಿರಿಯ ಹಾಗೂ ಅನುಭವಿ ರಾಜಕಾರಣಿಯ ಸೇವೆಯನ್ನು ಪರಿಗಣಿಸದೆ, ಅವರಿಗೆ ಸಚಿವ ಸ್ಥಾನ ತಪ್ಪಿಸಿ ಹೈಕಮಾಂಡ್ ತೀವ್ರ ಅನ್ಯಾಯ ಎಸಗಿದೆ. ಈ ನಿರ್ಧಾರಕ್ಕೆ ಬೇಸತ್ತು ತಾವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತಿರುವುದಾಗಿ ನಗರಸಭೆ ಸದಸ್ಯರು ತಿಳಿಸಿದರು.
ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಸುರೇಶ ಕಟ್ಟಿಮನಿ, ಬರಕತಾಲಿ ಮುಲ್ಲಾ, ರವಿ ಕಮತರ, ಚಂದ್ರು ಕರಿಸೋಮನಗೌಡ್ರ, ಇಮ್ತಿಯಾಜ್ ಶಿರಹಟ್ಟಿ, ಪದ್ಮಾ ಕಟಗಿ, ಪರವೀನಬಾನು ಮುಲ್ಲಾ, ಶಕುಂತಲಾ ಅಕ್ಕಿ, ಜೈನುದ್ದೀನ ನಮಾಜಿ ಸೇರಿ ಇತರರು ಇದ್ದರು.




