ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ರೈಲಿನಲ್ಲೆ ಮೂರ್ಛೆ ರೋಗಿಯೊಬ್ಬರು ನರಳಿ ಪ್ರಾಣ ಬಿಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ( 83) ಮೃತ ವ್ಯಕ್ತಿ. ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೈಲಿನಲ್ಲಿ ಅವರು ಪ್ರಯಾಣಿಸುತ್ತಿದ್ದರು. ಮೈಸೂರಿನಲ್ಲಿ ರೈಲು ಹತ್ತುತ್ತಿದ್ದಂತೆ ಮೂರ್ಛೆ ಬಂದು ಕುಸಿದು ಬಿದ್ದಿದ್ದರು. ಸಹ ಪ್ರಯಾಣಿಕರಿಂದ ಮೈಸೂರಿನಲ್ಲೆ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.
ರೋಗಿಯ ಮಾಹಿತಿ ಕೊಟ್ಟರೂ ಸಿಬ್ಬಂದಿಗಳು ಚಿಕಿತ್ಸೆ ಕೊಡಿಸಿರಲಿಲ್ಲ. ಮೈಸೂರಿನಲ್ಲಿ ಮೂರ್ಛೆ ರೋಗಿಯನ್ನು ಇಳಿಸಲೂ ಸಿಬ್ಬಂದಿ ಮುಂದಾಗಿರಲಿಲ್ಲ. ಮೈಸೂರಿನಿಂದ ಮಂಡ್ಯದವರೆಗೂ ಎಲ್ಲಿಯೂ ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ರೈಲು ಮಂಡ್ಯ ಸಮೀಪ ಬರುತ್ತಿದ್ದಂತೆ ಸ್ವಾಮಿ ಸಾವಿಗೀಡಾಗಿದ್ದಾರೆ ಎಂದು ಸಹಪ್ರಯಾಣಿಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆರ್ಟಿಐ ಕಾರ್ಯಕರ್ತ ಸಾವು ಪ್ರಕರಣ; ಇಬ್ಬರು ಪೊಲೀಸರು ಅಮಾನತು
ರೈಲಿನ ಎಲ್ಲ ನಿಲ್ದಾಣಗಳಲ್ಲಿ ರೈಲ್ವೆ ಪೊಲೀಸರಿಗೆ ತಿಳಿಸಿದರೂ ಚಿಕಿತ್ಸೆ ಕೊಡಿಸಲಿಲ್ಲ. ಮೂರ್ಛೆ ರೋಗಿ ಸಾವಿಗೆ ರೈಲ್ವೆ ಅಧಿಕಾರಿಗಳು, ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸಹ ಪ್ರಯಾಣಿಕರು ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.