ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿದ್ದು, ತನ್ನ ಸೋಲಿಗೆ ಕಾರಣಗಳೇಂದು ಚರ್ಚಿಸಿದೆ. ಇಂತದ್ಧೇ ಚರ್ಚೆಯಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಸಿ ನಾರಾಯಣಗೌಡ, “ನಾನು ಕೊಟ್ಟಿದ್ದ ಹಣವನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಹಂಚಿಕೆಯಾಗದ ಹಣ ಯಾರ ಬಳಿ ಇದೆಯೋ, ಅವರು ಅದನ್ನು ಹಿಂದಿರುಗಿಸಿ” ಎಂದು ಸಭೆಯಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ. ಆ ಮೂಲಕ ತಾವು ಮತದಾರರಿಗೆ ಆಮಿಷವೊಡ್ಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಗೌಡ ಸ್ಪರ್ಧಿಸಿದ್ದ ಹೀನಾಯವಾಗಿ ಸೋಲುಂಡಿದ್ದರು. ಸೋಲಿನ ಬಳಿಕ, ತಮ್ಮ ಸೋಲಿಗೆ ಕಾರಣಗಳನ್ನು ಚರ್ಚಿಸಲು ಕೆ.ಆರ್ ಪೇಟೆಯಲ್ಲಿ ಆತ್ಮಾವಲೋಕನ ಸಭೆ ಕರೆಸಿದ್ದರು.
ಸಭೆಯಲ್ಲಿ ಮಾತನಾಡಿದ ಅವರು, “ಸರಿಯಾಗಿ ಹಣ ಹಂಚಿಕೆಯಾದ ಕಾರಣ ಸೋತಿದ್ದೇವೆ. ಚುನಾವಣೆ ವೇಳೆ ನಾನು ಕೊಟ್ಟಿದ್ದ ಹಣವನ್ನು ಕೆಲವರು ಮತದಾರರಿಗೆ ಹಂಚಿಕೆ ಮಾಡಿಲ್ಲ. ಅಂತಹವರು ಹಣ ಇಟ್ಟುಕೊಂಡಿದ್ದರೆ ನಮ್ಮ ಟ್ರಸ್ಟ್ಗೆ ಕೊಟ್ಟುಬಿಡಿ” ಎಂದು ಹೇಳಿದ್ದಾರೆ.
“ಚುನಾವಣೆಯಲ್ಲಿ ಸೋತಿದ್ದೇನೆಂದು ಕ್ಷೇತ್ರಬಿಟ್ಟು ಹೋಗುವವನು ನಾನಲ್ಲ. ನಾನು ಎಲ್ಲಿಗೂ ಓಡಿ ಹೋಗಲ್ಲ. ಇಲ್ಲಿಯೇ ಇರುತ್ತೇನೆ. ನಾನು ಸತ್ತರೂ ಇಲ್ಲೇ ಮಣ್ಣಾಗುತ್ತೇನೆ” ಎಂದು ಅವರು ಹೇಳಿದ್ದಾರೆ.
“ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಕಂಡಿದ್ದೇನೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸಗಳ ಬಗ್ಗೆ ಆತ್ಮತೃಪ್ತಿಯಿದೆ” ಎಂದಿದ್ದಾರೆ.