- ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆಗೆ ವಿಳಂಬ
- ಮಹಾನಗರ ಪಾಲಿಕೆಯ ಬಜೆಟ್ ತಯಾರಿಕೆ ಸ್ಥಗಿತ
ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಅನಿಶ್ಚಿತತೆಗಳು ಸ್ಥಳೀಯ ಯೋಚಿತ ಬೆಳವಣಿಗೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಮೈಸೂರು ಮಹಾನಗರ ಪಾಲಿಕೆ ಉದಾಹರಣೆಯಾಗಿದೆ. ಹೊಸ ಹೊಸ ಹಣಕಾಸು ವರ್ಷದ ಆರಂಭದಲ್ಲಿ ಬಜೆಟ್ ಮಂಡಿಸಲಾಗುತ್ತದೆ ಎಂದು ಪಾಲಿಕೆ ಹೇಳಿತ್ತು. ಆದರೆ, ಪಾಲಿಕೆಯ ಹಲವು ಸ್ಥಾಯಿ ಸಮಿತಿಗಳಿಗೆ ಹೊಸ ಅಧ್ಯಕ್ಷರ ಆಯ್ಕೆ ಮಾಡುವಲ್ಲಿ ವಿಳಂಬವಾದ ಕಾರಣ ಬಜೆಟ್ ಮಂಡನೆಯನ್ನು ಮತ್ತಷ್ಟು ಮುಂದೂಡಲಾಗಿದೆ.
ಸದ್ಯ ಯಾವಾಗ ಬಜೆಟ್ ಮಂಚನೆಯಾಗುತ್ತದೆ ಎಂಬುದರ ಬಗ್ಗೆ ಖಾತ್ರಿ ಇಲ್ಲ. ಕಳೆದ ನಾಲ್ಕು ವರ್ಷಗಳಲ್ಲಿಯೂ ಬಜೆಟ್ ಮಂಡನೆಗೆ ತೊಡಕುಗಳು ಎದುರಾಗುತ್ತಲೇ ಇವೆ. 2019ರಲ್ಲಿ ಮಾತ್ರ, ಹೊಸ ಹಣಕಾಸು ವರ್ಷ ಆರಂಭವಾಗುವುದಕ್ಕೂ ಮುನ್ನವೇ ಬಜೆಟ್ ಮಂಚನೆಯಾಗಿತ್ತು. ಆ ವರ್ಷ 2019ರ ಫೆಬ್ರವರಿ 27ರಂದು ಬಜೆಟ್ ಮಂಡಿಸಲಾಗಿತ್ತು. ಇನ್ನು, 2020 ಮತ್ತು ನಂತರದ ವರ್ಷಗಳಲ್ಲಿ ಹೊಸ ಹಣಕಾಸು ವರ್ಷ ಆರಂಭವಾದ ಒಂದು ತಿಂಗಳ ಬಳಿಕ ಬಜೆಟ್ ಮಂಡನೆಯಾಗುತ್ತಿವೆ. 2020ರ ಮೇ 20ರಂದು,,2021ರ ಏಪ್ರಿಲ್ 29ರಂದು ಬಜೆಟ್ ಮಂಡನೆಯಾಗಿದ್ದರೆ, 2022ರಲ್ಲಿ ಮೇಯರ್ ಸುನಂದಾ ಫಲನೇತ್ರ ಅವರ ಅಧಿಕಾರಾವಧಿಯ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಆ ವರ್ಷ ಏಪ್ರಿಲ್ 28ರಂದು ವಾರ್ಷಿಕ ಬಜೆಟ್ ಮಂಡಿಸಲಾಗಿತ್ತು.
“ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ನೀಡದಿರುವ ಬಿಜೆಪಿಯ ನಿರ್ಧಾರವು ಈಗ ಬಜೆಟ್ ಮಂಡನೆ ಮುಂದೂಡಲು ಕಾರಣವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ತಪ್ಪು ಸಂದೇಶವನ್ನು ರವಾನಿಸುವ ಸಾಧ್ಯತೆ ಇರುವುದರಿಂದ ಪಾಲಿಕೆಯಲ್ಲಿ ಜೆಡಿಎಸ್ನೊಂದಿಗೆ ಬಿಜೆಪಿ ಕೈಜೋಡಿಸುವುದನ್ನು ಬಿಜೆಪಿ ರಾಜ್ಯ ನಾಯಕತ್ವ ವಿರೋಧಿಸಿದೆ. ಹಣಕಾಸು ಸ್ಥಾಯಿ ಸಮಿತಿಯ ಮುಖ್ಯಸ್ಥರಿಲ್ಲದ ಕಾರಣ, ಬಜೆಟ್ ತಯಾರಿಕೆ ಸ್ಥಗಿತಗೊಂಡಿದೆ” ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
“ಚುನಾವಣಾ ಅಧಿಸೂಚನೆಗೂ ಮುನ್ನವೇ ಪಾಲಿಕೆ ಬಜೆಟ್ ಅನುಮೋದಿಸಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಯೋಜಿಸಲು ಅನುಕೂಲವಾಗುತ್ತಿತ್ತು. ಈ ಚುನಾಯಿತ ಪಾಲಿಕೆಯ ಅವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಬಜೆಟ್ ಅನುಮೋದನೆ ಪಡೆಯುವ ಹೊತ್ತಿಗೆ ನಮ್ಮ ಅವಧಿ ಮುಗಿಯುತ್ತದೆ. ಈ ವಿಳಂಬದಿಂದ ನಗರದಲ್ಲಿ ನಮ್ಮ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ” ಎಂದು ವಾರ್ಡ್ ಸಂಖ್ಯೆ 3ರ ಜೆಡಿಎಸ್ ಕಾರ್ಪೊರೇಟರ್ ಕೆ.ವಿ.ಶ್ರೀಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬಜೆಟ್ ಮಂಡಿಸಿ ಅನುಮೋದನೆ ನೀಡಿದ್ದರೆ ಟೆಂಡರ್ ಕರೆದು ಪಾಲಿಕೆಯ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಿತ್ತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮೇಯರ್ ಶಿವಕುಮಾರ್ ಪಾಲಿಕೆಯ ಘನತೆಗೆ ಧಕ್ಕೆ ತಂದಿದ್ದಾರೆ; ಮಾಜಿ ಮೇಯರ್ ಆರೋಪ
“ಒಳಚರಂಡಿ, ಕಸ ವಿಲೇವಾರಿ, ನೀರು ಪೂರೈಕೆಯಂತಹ ತುರ್ತು ಕೆಲಸಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಜೆಟ್ ಮಂಡಿಸಿದರೂ ಯಾವುದೇ ಪ್ರಯೋಜನವಿಲ್ಲ” ಎಂದು ಮೇಯರ್ ಎಂ ಶಿವಕುಮಾರ್ ಹೇಳಿದ್ದಾರೆ.
“ಬೆಂಗಳೂರು ನಂತರ ಮೈಸೂರು ಎರಡನೇ ದೊಡ್ಡ ನಗರವಾಗಿದೆ. ಹೊಸ ಹಣಕಾಸು ವರ್ಷದ ಆರಂಭಕ್ಕೂ ಮೊದಲೇ ಬಜೆಟ್ ಅಂತಿಮಗೊಳಿಸಲು ಪಾಲಿಕೆಗೆ ಸಾಧ್ಯವಾಗದಿರುವುದು ಬೇಸರದ ಸಂಗತಿ. ಬಜೆಟ್ ಮಂಡನೆಗೆ ಕಾಲಮಿತಿ ರೂಪಿಸುವ ತುರ್ತು ಅವಶ್ಯಕತೆಯಿದೆ” ಎಂದು ಮೈಸೂರಿನ ಹೆಬ್ಬಾಳದ ನಿವಾಸಿ ಶ್ರೀದೇವಿ ಅಮೃತರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.