ಬೀದರ್ ಜಿಲ್ಲೆಯ ಹುಲಸೂರು ತಾಲೂಕು ಕೇಂದ್ರವಾಗಿ ಐದು ವರ್ಷಗಳು ಕಳೆಯುತ್ತಾ ಬಂದರೂ ತಾಲೂಕಿನಲ್ಲಿ ಒಂದೇ ಒಂದು ಸರ್ಕಾರಿ ಪಿಯು ಕಾಲೇಜು ತೆಗೆದಿಲ್ಲ. ಇದರಿಂದ ತಾಲೂಕಿನ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ದೂರದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ.
ಎರಡು ದಶಕಗಳ ಹೋರಾಟದ ಫಲವಾಗಿ ಹುಲಸೂರು ತಾಲೂಕು ಘೋಷಣೆಯಾಗಿದೆ. 2018ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ತಾಲೂಕಿನಲ್ಲಿ ಹೊಸ ಬದಲಾವಣೆಗಳಿಗೆ ಸಾಕ್ಷಿ ಆಗಬಹುದೆಂದು ತಾಲೂಕಿನ ಜನರು ನಿರೀಕ್ಷಿಸಿದ್ದರು. ಆದರೆ, ಅಧಿಕಾರಿಗಳ ಕ್ರಿಯಾಶೀಲತೆ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ತಾಲೂಕಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪುನಾರಂಭಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ.
ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಹುಲಸೂರು ತಾಲೂಕಿನ ಬಹುತೇಕ ಜನರು ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಬಸವಕಲ್ಯಾಣವನ್ನೇ ಅವಲಂಬಿಸಿದ್ದರು. ತಾಲೂಕು ಕೇಂದ್ರವಾದ ಬಳಿಕ ಜನರಿಗೆ ದೂರದ ಪ್ರಯಾಣ ಮಾಡುವುದು ತಪ್ಪಿದೆ. ಆದರೆ, ಸ್ಥಳೀಯವಾಗಿ ಪಿಯು ಕಾಲೇಜು ಇಲ್ಲದಿರುವುದರಿಂದ ಕೆಲವು ವಿದ್ಯಾರ್ಥಿಗಳು ದೂರದ ನಗರಗಳಿಗೆ ತೆರಳದೇ ತಮ್ಮ ವಿದ್ಯಾಭ್ಯಾಸವನ್ನು ಅಂತ್ಯಗೊಳಿಸಿದ್ದಾರೆ. ಇನ್ನು ಕಾಲೇಜು ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗಿದೆ.
ಸರ್ಕಾರಿ ಸ್ನಾತಕೊತ್ತರ ಕೇಂದ್ರವಿದ್ದರೂ ಪಿಯು ಕಾಲೇಜಿಲ್ಲ :
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹುಲಸೂರು ತಾಲೂಕಿನಲ್ಲಿ ಒಟ್ಟು 7 ಗ್ರಾಮ ಪಂಚಾಯತಿ, 25 ಗ್ರಾಮಗಳನ್ನು ಒಳಗೊಂಡಿವೆ. ಹೊಸ ತಾಲೂಕು ರಚನೆಯಾಗುವ ಮೊದಲಿನಿಂದಲೂ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೆ. ಆದರೆ, ಪ್ರೌಢ ಶಾಲೆ ಮುಗಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಪಡೆಯಲು ತಾಲೂಕಿನಲ್ಲಿ ಸರ್ಕಾರಿ ಪಿಯು ಕಾಲೇಜು ಇಲ್ಲದಂತಾಗಿದೆ.
“ಇಡೀ ತಾಲೂಕಿನಲ್ಲಿ ಅನುದಾನಿತ, ಖಾಸಗಿ ಸೇರಿ ಒಟ್ಟು ನಾಲ್ಕು ಪಿಯು ಕಾಲೇಜುಗಳಿದ್ದರೂ ಮೂಲ ಸೌಕರ್ಯ ಕೊರತೆ ಹಾಗೂ ಬಹು ವಿಷಯ ಆಯ್ಕೆಗೆ ಅವಕಾಶ ಇಲ್ಲದಿರುವ ಕಾರಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಅನಿವಾರ್ಯವಾಗಿ 19 ಕಿ.ಮೀ. ದೂರದ ಬಸವಕಲ್ಯಾಣ ನಗರದ ಕಾಲೇಜುಗಳಿಗೆ ದಾಖಲಾಗುತ್ತಾರೆ. ಇನ್ನು ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ಭರಿಸಲು ಸಾಧ್ಯವಾಗದ ಕಾರಣ ಶಿಕ್ಷಣಕ್ಕೆ ತೊಡಕಾಗುತ್ತಿದೆ” ಎಂದು ಸಾಮಾಜಿಕ ಕಾರ್ಯಕರ್ತ ಸಂದೀಪ ಮುಕಿಂದೆ ಬೇಸರ ವ್ಯಕ್ತಪಡಿಸಿದರು.
ಮಂಜೂರಾದ ಕಾಲೇಜು ಸ್ಥಳಾಂತರ :
2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹುಲಸೂರು ತಾಲೂಕಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾಗಿತ್ತು. ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಾಲೇಜು ಕಟ್ಟಡವೂ ನಿರ್ಮಾಣ ಮಾಡಲಾಗಿತ್ತು. ಒಂದೆರಡು ವರ್ಷಗಳ ಕಾಲ ತರಗತಿಗಳು ನಡೆದಿದ್ದವು. ಬಳಿಕ ಹೆಚ್ಚಿನ ಮಕ್ಕಳ ದಾಖಲಾತಿಯಿಲ್ಲ ಎಂಬ ಕಾರಣವೊಡ್ಡಿ ಬೇರೆ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ. ಆದರೆ, ಕಾಲೇಜು ಸ್ಥಳಾಂತರದ ಬಗ್ಗೆ ನಿಖರ ಮಾಹಿತಿ ಗೊತ್ತಿಲ್ಲ. ಇದಕ್ಕೆ ಸ್ಥಳೀಯರು ಹೆಚ್ಚಿನ ಇಚ್ಚಾಶಕ್ತಿ ತೋರದಿರುವುದು ಕಾರಣವಿರಬಹುದು. ಅದೇ ಸ್ಥಳದಲ್ಲಿ ಈಗಲೂ ಪಿಯು ಕಾಲೇಜು ಕಟ್ಟಡ ಹಾಗೂ ನಾಮಫಲಕ ಹಾಗೇ ಉಳಿದಿದೆ ಎಂದು ಗ್ರಾಮದ ಶಿಕ್ಷಣ ಪ್ರೇಮಿ ದತ್ತಾ ಮೋರೆ ಹೇಳುತ್ತಾರೆ.
“ಹುಲಸೂರು ಪಟ್ಟಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದ್ದರೂ ತಾಲೂಕಿನಲ್ಲಿ ಒಂದೇ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲದಿರುವುದು ಬೇಸರದ ಸಂಗತಿ. ಇಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸ ದೃಷ್ಟಿಯಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಆಸಕ್ತಿವಹಿಸಿ ಈಗಲಾದರೂ ಕಾಲೇಜು ಸ್ಥಾಪನೆಗೆ ಮುಂದಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಆಕಾಶ ಖಂಡಾಳೆ ಈದಿನ.ಕಾಮ್ ಜೊತೆ ಮಾತನಾಡಿ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು
“ಸುಮಾರು 15 ವರ್ಷಗಳ ಹಿಂದೆ ತಾಲೂಕಿಗೆ ಮಂಜೂರಾಗಿದ್ದ ಕಾಲೇಜು ಬೇರೆಡೆಗೆ ಸ್ಥಳಾಂತರ ಮಾಡಿ ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಇಂದು ತಾಲೂಕಿನಲ್ಲಿ ಒಂದೂ ಸರ್ಕಾರಿ ಪಿಯು ಕಾಲೇಜು ಇಲ್ಲದಂತಾಗಿದೆ. ಈಗಲಾದರೂ ತಾಲೂಕಿನಲ್ಲಿ ಸರ್ಕಾರಿ ಕಾಲೇಜು ಪುನಾರಂಭಿಸಲು ಸರ್ಕಾರ ಕ್ರಮಕೈಗೊಳ್ಳಲಿ” ಎಂದು ಮಾಜಿ ಜಿ.ಪಂ.ಸದಸ್ಯ ಮಲ್ಲಿಕಾರ್ಜುನ್ ಧಬಾಲೆ ಈದಿನ.ಕಾಮ್ ಜೊತೆ ಮಾತನಾಡಿ ಒತ್ತಾಯಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.