ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ವ್ಯವಸ್ಥಿತವಾಗಿ ನಡೆಯುತ್ತಿದ್ದು ಈವರೆಗೆ ಜಿಲ್ಲೆಯ ಒಟ್ಟು 10,63,876 ಮತದಾರರಲ್ಲಿ ಒಟ್ಟು 9,99534 ಗಣತಿ ನಮೂನೆಯನ್ನು ಡಿಜಿಟಲೀಕರಣಗೊಳಿಸಿ ಶೇ. 93.95 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷದ ವತಿಯಿಂದ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 21186 ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಕಂಡುಬಂದಿರುತ್ತದೆ. ಗೈರು, ಸ್ಥಳಾಂತರ, ಮರಣ ಹಾಗೂ ದ್ವಿ ಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 64328 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ29756 ಶಾಶ್ವತ ವಲಸೆ , 8250 ದ್ವಿ ಪ್ರತಿಗಳು, 4933 ಗೈರು, ಇತರ 203 ಸೇರಿವೆ ಎಂದರು.

ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 1112 ಮತಗಟ್ಟೆಗಳಿದ್ದು, ಹೊಸದಾಗಿ131 ಮತಗಟ್ಟೆಗಳನ್ನು ಸೃಜನಿಸಿ ಒಟ್ಟು ಜಿಲ್ಲೆಯಲ್ಲಿ 1243 ಮತಗಟ್ಟೆಗಳು ಇರಲಿವೆ ಎಂದ ಅವರು, ಮತದಾರರು 2 ಕಿಲೋ ಮೀಟರ್ ಒಳಗೆ ಮತಗಟ್ಟೆಗಳು ಇರುವ ಹಾಗೆ ಮತದಾರರ ಪಟ್ಟಿಯನ್ನು ಸೃಜಿಸಲಾಗುವುದು ಎಂದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಶೇಕಡಾ ನೂರರಷ್ಟು ಪೂರ್ಣಗೊಂಡ ಮತದಾರರ ಪಟ್ಟಿಯನ್ನು ಪರಿಶೀಲಿಸಿ ನಿರ್ದಿಷ್ಟ ಮತಗಟ್ಟೆ ಪಟ್ಟಿಯಲ್ಲಿ ಯಾವುದೇ ಹೆಸರು ಸೇರ್ಪಡೆ ಅಥವಾ ಬದಲಾವಣೆ ಗಳಿದ್ದಲ್ಲಿ ಸಂಬಂಧ ಪಟ್ಟ ಬೂತ್ ಮಟ್ಟದ ಅಧಿಕಾರಿಯಲ್ಲಿ ಹಾಗೂ ಮತದಾರರು ನೋಂದಣಿ ಅಧಿಕಾರಿಯವರ ಗಮನಕ್ಕೆ ಆಗಸ್ಟ್ 8 ರ ಒಳಗೆ ತರಬಹುದಾಗಿದೆ ಎಂದರು.
ಎನುಮರೇಷನ್ ನಮೂನೆಗಳನ್ನು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ (Enumeration Phase) ಪ್ರಕ್ರಿಯೆಯು ಆಗಸ್ಟ್ 8 ರ ವರೆಗೆ ನಡೆಯಲಿದ್ದು, ಇದುವರೆಗೆ ನಮೂನೆಗಳನ್ನು ಭರ್ತಿ ಮಾಡದ ನಾಗರಿಕರು ಕೂಡಲೇ ಭರ್ತಿ ಮಾಡಿ ಸಂಬಂಧಿಸಿದ BLO ರವರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜಕೀಯ ಪಕ್ಷಗಳ ಮುಖಂಡರುಗಳು ಮಾತನಾಡಿ, ಒಂದೇ ಕುಟುಂಬದ ಸದಸ್ಯರ ಮತದಾರರು ಹೆಸರುಗಳು ಒಂದೆಡೆ ವಾಸವಿದ್ದರೂ ಅವರ ಹೆಸರುಗಳು ಬೇರೆಡೆ ಇವೆ, ಅವರಲ್ಲಿ ಕೆಲವು ಕುಟುಂಬ ಸದಸ್ಯರ ಹೆಸರುಗಳು ಪಕ್ಕದ ವಾರ್ಡಿನ ಪಟ್ಟಿಗೆ ಸೇರಿರುತ್ತದೆ. ಇದರಿಂದ ಅನಾನುಕೂಲವಾಗುತ್ತದೆ. ಸಾಧ್ಯವಾದಷ್ಟು ಕುಟುಂಬ ಸದಸ್ಯರು ಒಂದೆಡೆ ಇರುವಂತೆ ಆಗಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ಪಕ್ಷಗಳ ಮುಖಂಡರುಗಳಾದ ಕಾಂಗ್ರೆಸ್ ನ ಹಬೀಬ್ ಅಲಿ, ಜೆ.ಡಿ.ಎಸ್ ನ ಜಯರಾಮ್ ಆಚಾರ್ಯ ಹಾಗೂ ಜಗದೀಶ್ ಆಚಾರ್ಯ, ಭಾರತೀಯ ಜನತಾ ಪಕ್ಷದ ಚಂದ್ರ ಶೇಖರ ಪ್ರಭು ಹಾಗೂ ಶ್ರೀ ಕಾಂತ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.






