ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್ಬುಕ್ ವಿಡಿಯೋವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕೆ (ಡಿಲೀಟ್) ಸಂಬಂಧಿಸಿದಂತೆ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಜುಕರ್ಬರ್ಗ್ ಕ್ಷಮೆಯಾಚಿಸಲು ಸಂಸದೀಯ ಸ್ಥಾಯಿ ಸಮಿತಿ 3 ದಿನಗಳ ಕಾಲಾವಕಾಶ ನೀಡಿತ್ತು. ಒಂದು ವೇಳೆ ಕ್ಷಮೆ ಕೇಳದಿದ್ದರೆ ಕಂಪನಿಯು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಮಿತಿ ಎಚ್ಚರಿಸಿತ್ತು.
ಪ್ರಧಾನಿ ಮೋದಿ ಅವರು ಮೊದಲು ಇನ್ಸ್ಟಾಗ್ರಾಮ್ ಮತ್ತು ನಂತರ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದ ಸೆಲ್ಫಿ ವಿಡಿಯೋ ಸುಮಾರು 5 ಗಂಟೆಗಳ ಕಾಲ ಫೇಸ್ಬುಕ್ನಿಂದ ಕಣ್ಮರೆಯಾಗಿತ್ತು. ಈ ವಿಡಿಯೋದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ಬಗ್ಗೆ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಕುರಿತು ವಿವರಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ಕಿತ್ತೆಸೆದಿದ್ದ ಫೇಸ್ಬುಕ್; ಜುಕರ್ಬರ್ಗ್ ಕ್ಷಮಾಪಣೆಗೆ 3 ದಿನಗಳ ಗಡುವು ನೀಡಿದ ಸಂಸದೀಯ ಸಮಿತಿ
ನಂತರ ವಿಡಿಯೋವನ್ನು ಮರುಸ್ಥಾಪಿಸಿದ ಮೆಟಾ, ‘ಇದು ತಾಂತ್ರಿಕ ಅಥವಾ ಆಲ್ಗರಿದಮ್ ದೋಷದಿಂದ ಆಗಿರುವ ತಪ್ಪು’ ಎಂದು ಹೇಳಿತ್ತು. ಲೋಪಕ್ಕಾಗಿ ಕ್ಷಮೆಯಾಚಿಸಿತ್ತು. ಆದರೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಸ್ಪಷ್ಟನೆಯನ್ನು ತಿರಸ್ಕರಿಸಿದ್ದು, ತಾಂತ್ರಿಕ ದೋಷವೇ ಆಗಿದ್ದರೂ ಮೆಟಾ ತನ್ನ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, “ಪ್ರಧಾನಿಯವರ ಪೋಸ್ಟ್ ಅನ್ನೇ ಮೆಟಾ ಡಿಲೀಟ್ ಮಾಡಿದೆ. ಮೆಟಾ ಹೀಗೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ತೆಗೆದುಹಾಕಿದ್ದಕ್ಕಾಗಿ ಮಾರ್ಕ್ ಜುಕರ್ಬರ್ಗ್ ವೈಯಕ್ತಿಕವಾಗಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದರು. ಇದೀಗ ಜುಕರ್ಬರ್ಗ್ ಕ್ಷಮೆಯಾಚಿಸಿರುವುದಾಗಿ ವರದಿಯಾಗಿದೆ.
ಅಂದಹಾಗೆ, ತಮ್ಮಿಷ್ಟದಂತೆ ಪ್ರತಿಪಕ್ಷಗಳ ಧ್ವನಿ ಅಡಗಿಸಲು ಇದೇ ಮೆಟಾ ಸಂಸ್ಥೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ತಮ್ಮ ವಿರೋಧಿಗಳ ಪೋಸ್ಟ್ಗಳನ್ನು ಬ್ಯಾನ್ ಮಾಡುವ, ಡಿಲೀಟ್ ಮಾಡುವ ಅಥವಾ ನಿರ್ಬಂಧಿಸುವ ಕೃತ್ಯವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮಾಡಿದೆ. ಇದೀಗ, ತಾಂತ್ರಿಕ ದೋಷದ ಕಾರಣವೂ ಅಥವಾ ಮತ್ತಾವುದೋ ಕಾರಣಕ್ಕಾಗಿ ಮೋದಿ ಅವರ ಪೋಸ್ಟ್ ಡಿಲೀಟ್ ಆಗಿದ್ದಕ್ಕೆ ಇದೇ ಬಿಜೆಪಿ ಮತ್ತು ಕೇಂದ್ರ ಸರ್ಕಾರಗಳು ಮೆಟಾ ವಿರುದ್ಧ ಸೆಟೆದು ನಿಂತಿವೆ. ಜುಕರ್ಬರ್ಗ್ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತಿವೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ.
ಸ್ವಂತ ಹಿತಾಸಕ್ತಿಗೆ ಧಕ್ಕೆಯಾದಾಗ ಮಾತ್ರ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಕಾನೂನಿನ ಚಾವಟಿ ನೆನಪಾಗುತ್ತದೆ. ಆದರೆ, ವಿರೋಧಿ ದನಿಗಳ ಉಸಿರುಕಟ್ಟಿಸುವಾಗ ಕಾಣದ ‘ಸೇಫ್ ಹಾರ್ಬರ್’ ಕಳಕಳಿ, ತಮ್ಮದೇ ವಿಡಿಯೋ ಮಾಯವಾದಾಗ ಮಾತ್ರವೇ ನೆನಪಿಗೆ ಬರುತ್ತದೆ. ಇದು ಈ ದೇಶದ ರಾಜಕೀಯ ವ್ಯವಸ್ಥೆಯ ವಿಪರ್ಯಾಸ! ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




