ಜವಾಹರ್ ನವೋದಯ ವಿದ್ಯಾಲಯವು ಆಧುನಿಕ ಶಿಕ್ಷಣಕ್ಕೆ ಅಗತ್ಯವಿರುವ ತಂತ್ರಜ್ಞಾನದ ಸಂಪನ್ಮೂಲಗಳ ಸೌಕರ್ಯ ಹೊಂದಿದ್ದು, ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಅಧ್ಯಯನದೊಂದಿಗೆ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಹೇಳಿದರು.
ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಸಮೀಪದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಲಾದ ನವೋದಯ ವಿದ್ಯಾಲಯ ಸಂಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, “ತಂತ್ರಜ್ಞಾನವು ಯುವ ಪೀಳಿಗೆಯನ್ನು ಆಕರ್ಷಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಮತ್ತು ರಾಷ್ಟ್ರ ಹಿತಕ್ಕೆ ಯಾವುದು ಅಗತ್ಯವೋ ಅದನ್ನೇ ಆಯ್ಕೆ ಮಾಡಿಕೊಂಡರೆ ಬದುಕು ಸಾರ್ಥಕವಾಗುತ್ತದೆ” ಎಂದರು.
“ಜೀವನದಲ್ಲಿ ಇಷ್ಟಪಟ್ಟು ಓದುವುದನ್ನು ರೂಢಿಸಿಕೊಳ್ಳಬೇಕು. ಶಿಸ್ತು, ತಾಳ್ಮೆ, ಧೈರ್ಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ” ಕಿವಿಮಾತು ಹೇಳಿದರು.

ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್ ಮಾತನಾಡಿ, “ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟ ಶಿಕ್ಷಣದೊಂದಿಗೆ ಸ್ವಾಲಂಬನೆ ಬದುಕು ಕಟ್ಟಿಕೊಳ್ಳಲು ಉತ್ತಮ ಮಾರ್ಗದರ್ಶನ ನೀಡಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಪ್ರೇರಣೆ ನೀಡಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ವಿ.ನಾಗರಾಜನ್ ಮಾತನಾಡಿ, “ನವೋದಯ ವಿದ್ಯಾಲಯವು ದೇಶಾದ್ಯಂತ ಹರಡಿಕೊಂಡಿದ್ದು, ದೇಶದ ಪ್ರಗತಿಗೆ ಉತ್ತಮ ಪ್ರಜೆಗಳನ್ನು ಕೊಡುವುದರ ಜೊತೆಗೆ ಉತ್ತಮ ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದು ಪ್ರಶಂಸನೀಯ ಕಾರ್ಯವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಸಂತೋಷ್ ಲಾಡ್ಗೆ ಸಚಿವ ಸ್ಥಾನ: ಮರಾಠಾ ಸಮಾಜ ವಿಜಯೋತ್ಸವ
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಡಾ.ಜ್ಞಾನೇಶ್ವರ ಪಾಟೀಲ್, ಡಾ.ಶ್ರೀನಿವಾಸ್, ಡಾ.ಪ್ರಶಾಂತ್ ಹೊಸಮನಿ, ಡಾ.ಮಂಜುನಾಥ್ ಮಂಗಲಗಿ ಸೇರಿದಂತೆ ನವೋದಯ ವಿದ್ಯಾಲಯದ ಶಿಕ್ಷಕರಾದ ಸತೀಶಕುಮಾರ್ ಸ್ವಾಮಿಮದನ್ ಲಾಮತುರೆ, ಲಕ್ಷ್ಮಿಕಾಂತ್ ದುದ್ದಣಿಗಿ, ಕಿರಣ ಪತ್ತಾರ್, ಚೇತನ್ ಜಂಬಗಿ, ಸಂಜು ರಾಠೋಡ್, ಅಲ್ಕಾ ಮುಂತಾದವರು ಭಾಗವಹಿಸಿದ್ದರು. ಶ್ರೀಶೈಲಪ್ಪ, ಧರ್ಮಣ್ಣ ಚಿಟ್ಟಾ ಸ್ವಾಗತಿಸಿದರು. ಕೆ.ರಾಜೇಶ ವಂದಿಸಿದರು




