ರಾತ್ರಿ 7 ಗಂಟೆಯಾಗುತ್ತಿದ್ದಂತೆ ಹೆಣ್ಣುಮಕ್ಕಳ ಹಾಸ್ಟೆಲ್ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ಆದರೆ, ಆ ನಂತರವೇ ಅಲ್ಲಿ ನಿಜವಾದ ಭಯದ ಆಟ ಶುರುವಾಗುತ್ತದೆ! ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗುತ್ತದೆ. ಪ್ರತಿಭಟಿಸಿದರೆ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಹಾಗೂ ಕಾಲೇಜಿನಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಲಾಗುತ್ತದೆ – ಇದು ಬಿಹಾರದ ಛಾಪ್ರಾದಲ್ಲಿರುವ ‘ಲೋಕನಾಯಕ್ ಜಯಪ್ರಕಾಶ್ ತಂತ್ರಜ್ಞಾನ ಸಂಸ್ಥೆ’ಯ (ಛಾಪ್ರಾ ಇಂಜಿನಿಯರಿಂಗ್ ಕಾಲೇಜು) ಹಾಸ್ಟೆಲ್ನ ವಿದ್ಯಾರ್ಥಿನಿಯರ ಅಳಲು, ಆಕ್ರೋಶ, ಆತಂಕ.
ಛಾಪ್ರಾ ಇಂಜಿನಿಯರಿಂಗ್ ಕಾಲೇಜಿನ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಮಧ್ಯರಾತ್ರಿಯಲ್ಲಿ ಪ್ರಿನ್ಸಿಪಾಲ್ ಅವರ ಚಾಲಕ ಮತ್ತು ಭದ್ರತಾ ಸಿಬ್ಬಂದಿಗಳು ಹಾಸ್ಟೆಲ್ಗೆ ಬರುತ್ತಾರೆ. ದುರ್ವರ್ತನೆ ಪ್ರದರ್ಶಿಸುತ್ತಾರೆ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಲ್ಲಿನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಹಾಸ್ಟೆಲ್ ಭದ್ರತೆಯಲ್ಲಿ ಲೋಪ, ಮಾನಸಿಕ ಕಿರುಕುಳ ಮತ್ತು ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರಿನ್ಸಿಪಾಲ್ ಚಾಲಕ ನೀರಜ್ ಕುಮಾರ್ ಹಾಗೂ ಭದ್ರತಾ ಸಿಬ್ಬಂದಿಯೊಬ್ಬರು ಮಧ್ಯರಾತ್ರಿ ಬಾಲಕಿಯರ ಹಾಸ್ಟೆಲ್ ಪ್ರವೇಶಿಸಿ, ಕೊಠಡಿಗಳಿಗೆ ನುಗ್ಗಿದ್ದಾರೆ. ‘ಸಿಂಗಲ್ ರೂಮ್’ನಿಂದ ‘ಡಬಲ್ ರೂಮ್’ಗೆ ಶಿಫ್ಟ್ ಆಗುವಂತೆ ಹೇಳಿ, ಅವರ ಸಾಮಗ್ರಿಗಳನ್ನು ತೆರವುಗೊಳಿಸಲು ಯತ್ನಿಸಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ್ದಾರೆ” ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
“ಪುರುಷ ಸಿಬ್ಬಂದಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕೊಠಡಿಗಳ ಒಳಗಡೆ ಪ್ರವೇಶಿಸಲು ಕಾಲೇಜು ನಿಯಮಗಳಲ್ಲಿ ಅವಕಾಶವೇ ಇಲ್ಲ. ಪೋಷಕರಿಗೇ ಕೊಠಡಿಯೊಳಗೆ ಹೋಗಲು ಅನುಮತಿಯಿಲ್ಲದಿರುವಾಗ, ತಡರಾತ್ರಿ ಪುರುಷ ಸಿಬ್ಬಂದಿ ಒಳಗೆ ಬರಲು ಹೇಗೆ ಸಾಧ್ಯವಾಯಿತು. ಇದಕ್ಕೆಲ್ಲ ಅನುಮತಿ ನೀಡಿರುವವರು ಯಾರು” ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ.
Are Daughters Really Safe in Engineering Colleges?
— Ambedkarite Circle (@AmbedkarCircle_) August 4, 2026
After 7 PM, when the hostel doors are locked, that's when the real game of terror begins!
In the Girls Hostel of Chhapra Engineering College, the Principal's driver breaks every rule and forces his way in.
The girls who… pic.twitter.com/mNWPdHbtlj
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಆರೋಪಿ ಚಾಲಕ ನೀರಜ್ ಕುಮಾರ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಕ್ರಮದ ನಂತರ ಪ್ರತಿಭಟನೆ ಕೊಂಚ ತಣ್ಣಗಾಗಿದೆಯಾದರೂ, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಮತ್ತು ಹಾಸ್ಟೆಲ್ ಭದ್ರತೆ ಹೆಚ್ಚಿಸಲು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಕೂಡ ಈತನ ವಿರುದ್ಧ ದುರ್ವರ್ತನೆಯ ದೂರುಗಳಿದ್ದವು. ಆದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!
ಸುದ್ದಿಗಾರರೊಂದಿಗೆ ವಿದ್ಯಾರ್ಥಿನಿ ಗೀತಾಂಜಲಿ ಮಾತನಾಡಿದ್ದು, “ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ನೆರವು ನೀಡಲಾಗುತ್ತಿಲ್ಲ. ದೂರು ನೀಡಿದರೆ ಉಡಾಫೆಯಾಗಿ ಉತ್ತರಿಸಿ, ಪ್ರತಿಭಟಿಸಿದರೆ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಎಲ್ಲ ಆರೋಪಗಳ ಕುರಿತು ಕಾಲೇಜು ಆಡಳಿತ ಮಂಡಳಿಯು ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.



