ಕೆಲಸದ ಸ್ಥಳದಲ್ಲಿ ಕಾರ್ಮಿಕನಿಗೆ ಮಧ್ಯಾಹ್ನದ ಊಟದ ವಿರಾಮದ ವೇಳೆ ಅಪಘಾತ ಸಂಭವಿಸಿದರೂ, ಅದು ಉದ್ಯೋಗದ ಅವಧಿಯಲ್ಲೇ ನಡೆದ ಅಪಘಾತವೆಂದು ಪರಿಗಣಿಸಬೇಕು ಮತ್ತು ಉದ್ಯೋಗಿ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್ vs ಯಶ್ಪಾಲ್ ಮತ್ತು ಇತರರು ಪ್ರಕರಣದಲ್ಲಿ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಈ ಆದೇಶ ನೀಡಿದ್ದಾರೆ. ಊಟಕ್ಕಾಗಿ ತೆಗೆದುಕೊಳ್ಳುವ ತಾತ್ಕಾಲಿಕ ವಿರಾಮವು ಉದ್ಯೋಗ ಮತ್ತು ಅಪಘಾತದ ನಡುವಿನ ಸಂಬಂಧವನ್ನು ಕಡಿದುಹಾಕುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2010ರಲ್ಲಿ ದೆಹಲಿಯ ನಿರ್ಮಾಣ ಸ್ಥಳವೊಂದರಲ್ಲಿ ಮೇಲ್ವಿಚಾರಕರಾಗಿ (ಸೂಪರ್ವೈಸರ್) ಕೆಲಸ ಮಾಡುತ್ತಿದ್ದ ಯಶ್ಪಾಲ್ ಅವರು ಮಧ್ಯಾಹ್ನದ ಊಟದ ವಿರಾಮದ ವೇಳೆ ಸ್ಥಳದಲ್ಲೇ ಇದ್ದಾಗ, ಮೊಬೈಲ್ ಕ್ರೇನ್ ಮೂಲಕ ಸಾಗಿಸಲಾಗುತ್ತಿದ್ದ ಕಬ್ಬಿಣದ ರಾಡ್ ಅವರ ಮೇಲೆ ಬಿದ್ದ ಪರಿಣಾಮ ಎಡಗಾಲು ಕಳೆದುಕೊಂಡಿದ್ದರು.
ಈ ಪ್ರಕರಣದಲ್ಲಿ ಉದ್ಯೋಗಿ ಪರಿಹಾರ ಆಯುಕ್ತರು (Commissioner) ಯಶ್ಪಾಲ್ ಅವರಿಗೆ ಬಡ್ಡಿ ಸಹಿತ ₹7.86 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ವಿಮಾ ಕಂಪನಿ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ವಿಮಾ ಕಂಪನಿ ಪರ ವಕೀಲರು, ಅಪಘಾತ ಸಂಭವಿಸಿದ ವೇಳೆ ಯಶ್ಪಾಲ್ ಊಟದ ವಿರಾಮದಲ್ಲಿದ್ದರು. ಆದ್ದರಿಂದ ಅದು ಉದ್ಯೋಗದ ಅವಧಿಯಲ್ಲಿ ನಡೆದ ಅಪಘಾತವಲ್ಲ ಎಂದು ವಾದಿಸಿದ್ದರು. ಜೊತೆಗೆ ಅವರು ಸೂಪರ್ವೈಸರ್ ಆಗಿದ್ದರಿಂದ ಉದ್ಯೋಗಿಗಳ ಪರಿಹಾರ ಕಾಯ್ದೆ (Employee’s Compensation Act) ಅಡಿಯಲ್ಲಿ “ಉದ್ಯೋಗಿ” ಎಂಬ ವ್ಯಾಖ್ಯಾನಕ್ಕೆ ಬರುವುದಿಲ್ಲ ಎಂದೂ ವಾದ ಮಂಡಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿತು.
“ಅಪಘಾತ ಕೆಲಸದ ಸ್ಥಳದಲ್ಲೇ ಸಂಭವಿಸಿರುವುದು ನಿರ್ವಿವಾದ. ಉದ್ಯೋಗದ ಸಂಬಂಧದಿಂದಲೇ ಅವರು ಅಲ್ಲಿದ್ದರು. ಊಟಕ್ಕಾಗಿ ತೆಗೆದುಕೊಳ್ಳುವ ತಾತ್ಕಾಲಿಕ ವಿರಾಮ ಮಾತ್ರದಿಂದ ಉದ್ಯೋಗ ಮತ್ತು ಅಪಘಾತದ ನಡುವಿನ ಸಂಬಂಧ ಕಳೆದುಹೋಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಕೇವಲ “ಸೂಪರ್ವೈಸರ್” ಎಂಬ ಹುದ್ದೆ ಹೊಂದಿರುವುದರಿಂದ ಯಾರನ್ನಾದರೂ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮೀಸಲಾತಿ ಸವಲತ್ತಲ್ಲ; ಸಂವಿಧಾನಾತ್ಮಕ ಸಾಮಾಜಿಕ ನ್ಯಾಯದ ಭರವಸೆ…
ಹುದ್ದೆಯ ಹೆಸರು ಮುಖ್ಯವಲ್ಲ; ಉದ್ಯೋಗಿ ವಾಸ್ತವವಾಗಿ ಯಾವ ರೀತಿಯ ಕೆಲಸ ನಿರ್ವಹಿಸುತ್ತಿದ್ದಾನೆ ಎಂಬುದೇ ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ಯಶ್ಪಾಲ್ ಅವರು ವ್ಯವಸ್ಥಾಪಕ ಅಥವಾ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಸಾಕ್ಷ್ಯವನ್ನು ವಿಮಾ ಕಂಪನಿ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಈ ಹಿನ್ನೆಲೆಯಲ್ಲಿ ಉದ್ಯೋಗಿ ಪರಿಹಾರ ಆಯುಕ್ತರು ನೀಡಿದ್ದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್, ರಾಷ್ಟ್ರೀಯ ವಿಮಾ ಕಂಪನಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.
ಈ ತೀರ್ಪು, ಕೆಲಸದ ಸ್ಥಳದಲ್ಲೇ ಊಟದ ವಿರಾಮ ಅಥವಾ ಇತರ ತಾತ್ಕಾಲಿಕ ವಿರಾಮದ ವೇಳೆ ಸಂಭವಿಸುವ ಅಪಘಾತಗಳಿಗೂ ಉದ್ಯೋಗಿಗಳ ಪರಿಹಾರ ಕಾಯ್ದೆಯಡಿ ಪರಿಹಾರ ದೊರೆಯಬಹುದು ಎಂಬುದನ್ನು ಸ್ಪಷ್ಟಪಡಿಸಿರುವ ಮಹತ್ವದ ತೀರ್ಪು ಎಂದು ಪರಿಗಣಿಸಲಾಗಿದೆ.




