ಬೆಂಗಳೂರಿನಲ್ಲಿರುವ ರಾಜ್ಯ ಹೆದ್ದಾರಿ-35ರ (SH-35) ವರ್ತೂರು-ಗುಂಜೂರು ಮಾರ್ಗದಲ್ಲಿ ಸಂಚರಿಸುವ ನೂರಾರು ಶಾಲಾ ಮಕ್ಕಳು ಗುರುವಾರ ತೀವ್ರ ಸಂಚಾರ ದಟ್ಟಣೆಯಿಂದಾಗಿ ಹೈರಾಣಾಗಿದ್ದಾರೆ. ಬೆಳಿಗ್ಗೆ ಶಾಲಾ ಬಸ್ಗಳು 40 ನಿಮಿಷಗಳಷ್ಟು ತಡವಾಗಿ ಬಂದಿದ್ದರೆ, ಸಂಜೆ ಮನೆಗೆ ಮರಳುವಾಗ ವಿದ್ಯಾರ್ಥಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಬೇಸತ್ತಿದ್ದಾರೆ. ಕೇವಲ 4 ಕಿಲೋಮೀಟರ್ ದೂರವನ್ನು ಕ್ರಮಿಸಲು ಬರೊಬ್ಬರಿ 2.5 ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾರೆ.
ಮತೂರ್ತು-ಗುಂಜೂರು ರಸ್ತೆ ಮಾರ್ಗದಲ್ಲಿ ಸುಮಾರು ಸುಮಾರು 18 ರಿಂದ 20 ದೊಡ್ಡ ಶಾಲೆಗಳಿವೆ. ಪ್ರಸ್ತುತ ಹಲವು ಶಾಲೆಗಳಲ್ಲಿ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಶಾಲಾ ಬಸ್ಗಳು ಪಿಕಪ್ ಪಾಯಿಂಟ್ಗಳಿಗೇ ತಡವಾಗಿ ತಲುಪಿದ್ದರಿಂದ ಮತ್ತು ನಂತರ ರಸ್ತೆ ಸಂಚಾರದಲ್ಲಿ ಸಿಲುಕಿಕೊಂಡಿದ್ದರಿಂದ ಮಕ್ಕಳು ತೀವ್ರ ಆತಂಕದಿಂದಲೇ ಪರೀಕ್ಷಾ ಕೊಠಡಿಗಳನ್ನು ತಲುಪಿದ್ದಾರೆ. ಪರಿಸ್ಥಿತಿಯನ್ನು ಅರಿತ ಕೆಲವು ಶಾಲೆಗಳು, ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯವನ್ನು ನೀಡುವ ಮೂಲಕ ಅನುಕೂಲ ಮಾಡಿಕೊಟ್ಟಿವೆ ಎಂದು ಪೋಷಕರು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಸಂಜೆಯ ಪ್ರಯಾಣವಂತೂ ಮತ್ತಷ್ಟು ಭೀಕರವಾಗಿತ್ತು. ಹಲವಾರು ವಿದ್ಯಾರ್ಥಿಗಳು ಮನೆ ತಲುಪಲು ಸಾಮಾನ್ಯ ಸಮಯಕ್ಕಿಂತ 1.5 ಗಂಟೆ ಹೆಚ್ಚುವರಿ ಸಮಯ ಬೇಕಾಗುತ್ತಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (KRDCL) ರಾಜ್ಯ ಹೆದ್ದಾರಿ-35ರ ವರ್ತೂರು-ಗುಂಜೂರು ಮಾರ್ಗದಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ನಡೆಸುತ್ತಿದೆ. ಆದರೆ, ಈ ಮಾರ್ಗದಲ್ಲಿ ಕಿರಿದಾದ ರಸ್ತೆಗಳು, ರಸ್ತೆ ಗುಂಡಿಗಳು ಹಾಗೂ ಅಸಮರ್ಪಕ ಸಂಚಾರ ನಿರ್ವಹಣೆಯು ದಿನನಿತ್ಯದ ಪ್ರಯಾಣವನ್ನು ಅನಿಶ್ಚಿತಗೊಳಿಸಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
This video cannot be played in your browser. Open the video directly
ರಸ್ತೆ ಕಾಮಗಾರಿಗಳಿಂದ ಆಗುತ್ತಿರುವ ಅವ್ಯವಸ್ಥೆ ಮತ್ತು ಸಮಸ್ಯೆಗಳು ಶಾಲಾ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿವೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
“ಪ್ರಸ್ತುತ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದೇ ನಮಗೆ ದೊಡ್ಡ ಚಿಂತೆಯಾಗಿದೆ. ನಗರದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುವ ಪ್ರದೇಶವೊಂದು ಇಂತಹ ಕಳಪೆ ಮೂಲಸೌಕರ್ಯದಿಂದ ಬಳಲುತ್ತಿರುವುದು ನಿಜಕ್ಕೂ ನಂಬಲಾಗುತ್ತಿಲ್ಲ,” ಎಂದು ಕ್ಯಾಂಡರ್ ಲ್ಯಾಂಡ್ಮಾರ್ಕ್ ಅಪಾರ್ಟ್ಮೆಂಟ್ನ ನಿವಾಸಿ ಪ್ರೀತಿ ಸಿಂಗ್ ಹೇಳಿರುವುದಾಗಿ ‘TOI’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!
ಮತ್ತೊಬ್ಬ ನಿವಾಸಿ ಪವಿತ್ರ ಹೊಳ್ಳ, “ಮಕ್ಕಳು ತರಗತಿಗಿಂತ ಹೆಚ್ಚು ಸಮಯವನ್ನು ಟ್ರಾಫಿಕ್ನಲ್ಲೇ ಕಳೆಯುತ್ತಿದ್ದಾರೆ. ಕೆಲವು ಮಕ್ಕಳು ಶಾಲೆಯಿಂದ ಕೇವಲ 4 ಕಿ.ಮೀ ದೂರ ಕ್ರಮಿಸಲು ಸುಮಾರು 2.5 ಗಂಟೆ ರಸ್ತೆಯಲ್ಲೇ ಸಿಲುಕಿದ್ದರು. ಅವರು ಸಂಪೂರ್ಣವಾಗಿ ದಣಿದಿದ್ದಾರೆ, ಪೋಷಕರು ಆತಂಕದಲ್ಲಿದ್ದಾರೆ ಆದರೆ ಇದಕ್ಕೆ ಕೊನೆಯೇ ಕಾಣುತ್ತಿಲ್ಲ. ಸೂಕ್ತ ರಸ್ತೆಗಳಿಲ್ಲ, ಶಾಲಾ ವೇಳೆಯಲ್ಲೇ ಭಾರೀ ವಾಹನಗಳು ಸಂಚರಿಸುತ್ತವೆ, ಟ್ರಾಫಿಕ್ ನಿರ್ವಹಣೆಯೂ ಇಲ್ಲ. ಮಕ್ಕಳು ಗಂಟೆಗಟ್ಟಲೆ ಧೂಳು ಮತ್ತು ಟ್ರಾಫಿಕ್ನಲ್ಲೇ ಪ್ರಯಾಣಿಸಬೇಕಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ಪೋಷಕರಿಗೆ ಶಾಲಾ ಬಸ್ಗಳನ್ನು ನೆಚ್ಚಿಕೊಳ್ಳುವುದನ್ನು ಬಿಟ್ಟು ಸ್ವತಃ ತಾವೇ ಮಕ್ಕಳನ್ನು ಶಾಲೆಗೆ ತಲುಪಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎನ್ನುತ್ತಿದ್ದಾರೆ.
“ನಮ್ಮ ಮಗನ ಶಾಲಾ ಬಸ್ಗಾಗಿ ಸುಮಾರು 45 ನಿಮಿಷ ಕಾಯ್ದು, ಕೊನೆಗೆ ದ್ವಿಚಕ್ರ ವಾಹನದಲ್ಲೇ ಕರೆದೊಯ್ದಿದ್ದೇವೆ. ನನ್ನ ಮಗ ಮನೆಯಿಂದ 2 ಕಿ.ಮೀ ಗಿಂತ ಕಡಿಮೆ ದೂರದಲ್ಲಿರುವ ಶಾಲೆಯಲ್ಲಿ ಓದುತ್ತಿದ್ದಾನೆ. ಮಧ್ಯಾಹ್ನ 2.45ಕ್ಕೆ ಶಾಲೆ ಮುಗಿದರೂ, ಆತ ಸಂಜೆ 4.30 ರ ಸುಮಾರಿಗೆ ಮನೆ ತಲುಪುತ್ತಿದ್ದಾನೆ. ಕಳೆದ ಒಂದು ತಿಂಗಳಿನಿಂದ ಇದೇ ಪರಿಸ್ಥಿತಿ ಇದೆ. ಸ್ಕೂಟರ್ನಲ್ಲಿ ಕೇವಲ 1 ಕಿ.ಮೀ ಕ್ರಮಿಸಲು ನನಗೆ 1 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ” ಎಂದು ಕ್ಯಾಂಡರ್ ಲ್ಯಾಂಡ್ಮಾರ್ಕ್ನ ಮತ್ತೊಬ್ಬ ನಿವಾಸಿ ಸ್ವಾತಿ ಕುಮಾರಿ ಹೇಳಿದ್ದಾರೆ.




