ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ 52ನೇ ಜನ್ಮದಿನದ (ಜೂನ್ 22) ಪ್ರಯುಕ್ತ, ಜೂನ್ 21 ಮತ್ತು 22ರಂದು ರಾಜ್ಯದ ಮೂರು ಪ್ರಮುಖ ಮೃಗಾಲಯಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಕುರಿತು ಅರಣ್ಯ ಸಚಿವ ಆರ್.ವಿ. ರಂಜಿತ್ಕುಮಾರ್ ಅಧಿಕೃತ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚೆನ್ನೈ ಬಳಿಯ ವಂಡಲೂರಿನ ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನ, ವೆಲ್ಲೂರು ಜಿಲ್ಲೆಯ ಅಮೀರ್ತಿ ಮೃಗಾಲಯ ಹಾಗೂ ಸೇಲಂನ ಕುರುಂಬಪಟ್ಟಿ ಮೃಗಾಲಯಗಳಲ್ಲಿ ಈ ಉಚಿತ ಪ್ರವೇಶದ ಸೌಲಭ್ಯ ಲಭ್ಯವಿರಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಆನ್ಲೈನ್ ಮೂಲಕ ಮುಂಚಿತವಾಗಿ ಟಿಕೆಟ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಸ್ಥಳಾಭಾವದ ಕಾರಣದಿಂದ ಗಿಂಡಿ ಚಿಲ್ಡ್ರನ್ಸ್ ಪಾರ್ಕ್ ಅನ್ನು ಈ ಯೋಜನೆಯಿಂದ ಕೈಬಿಡಲಾಗಿದೆ.
ಈ ಎರಡು ದಿನಗಳ ಉಚಿತ ಪ್ರವೇಶದಿಂದ ಮೃಗಾಲಯಗಳ ನಿರ್ವಹಣೆಗೆ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಟಿಕೆಟ್ನ ಸಂಪೂರ್ಣ ವೆಚ್ಚವನ್ನು (ಅಂದಾಜು 1 ಕೋಟಿ ರೂ.) ಸಚಿವರ ಕೌಟುಂಬಿಕ ಟ್ರಸ್ಟ್ ಭರಿಸಲಿದೆ. ಜನ್ಮದಿನದ ವಿಶೇಷ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಗಿಡ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್ಗೆ ನುಂಗಲಾರದ ತುತ್ತು
ಪ್ರಸ್ತುತ ಬೇಸಿಗೆಯ ತಾಪಮಾನ ಇರುವುದರಿಂದ ವಂಡಲೂರು ಮೃಗಾಲಯದಲ್ಲಿ ವಿಪರೀತ ಜನಸಂದಣಿ ಉಂಟಾಗುವ ಆತಂಕವನ್ನು ವನ್ಯಜೀವಿ ತಜ್ಞರು ವ್ಯಕ್ತಪಡಿಸಿದ್ದರು. ಕೇವಲ 15,000 ಜನರ ಸಾಮರ್ಥ್ಯದ ಮೃಗಾಲಯಕ್ಕೆ ಏಕಾಏಕಿ ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದರೆ, ವನ್ಯಜೀವಿಗಳಿಗೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ತೊಂದರೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ತಜ್ಞರ ಕಳವಳಕ್ಕೆ ಸ್ಪಂದಿಸಿರುವ ಅರಣ್ಯ ಇಲಾಖೆ, ಜನದಟ್ಟಣೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಂಡಲೂರು ಮೃಗಾಲಯಕ್ಕೆ ದಿನಕ್ಕೆ ಗರಿಷ್ಠ 50,000 ಆನ್ಲೈನ್ ಟಿಕೆಟ್ಗಳನ್ನು ಮಾತ್ರ ವಿತರಿಸಲು ಮಿತಿ ಹೇರಲಾಗಿದೆ. ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಖ್ಯ ವನ್ಯಜೀವಿ ವಾರ್ಡನ್ ನೇತೃತ್ವದಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.




