ಪರೀಕ್ಷಾ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತು ಗೂಂಡಾಗಳ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 15 ವರ್ಷದ ಬಾಲಕಿಯೊಬ್ಬಳಿಂದ ಬಲವಂತವಾಗಿ ಕ್ಷಮಾಪಣೆ ಪಡೆಯಲಾಗಿದೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವಕರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಶೈಕ್ಷಣಿಕ ವ್ಯವಸ್ಥೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದನಿ ಎತ್ತಿದ ಯುವಕರ ಮೇಲೆ ಸರ್ಕಾರ ಹಿಂಸಾಚಾರ ಮತ್ತು ಕಿರುಕುಳದ ಹಾದಿ ಹಿಡಿದಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ನಮ್ಮ ಬೆನ್ನು ಹತ್ತಿ ಬೇಟೆಯಾಡುವುದನ್ನು ಇನ್ನಾದರೂ ನಿಲ್ಲಿಸಿ: ಪ್ರಧಾನಿ ನಿಂದನೆ ಆರೋಪ ಹೊತ್ತ ಬಾಲೆಯ ತಾಯಿ ಕಳಕಳಿ
ಸುದ್ದಿಗೋಷ್ಠಿಯಲ್ಲಿ ದೆಹಲಿ, ಮುಂಬೈ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶದ ಪ್ರಮುಖ ವಿದ್ಯಾರ್ಥಿ ನಾಯಕರು ಮತ್ತು ಸಂತ್ರಸ್ತರು ಉಪಸ್ಥಿತರಿದ್ದರು. ಜುಲೈ 20 ರಂದು ನಡೆದ ಸಂಸತ್ ಚಲೋ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಗಾಯಕ್ಕೆ ಒಳಗಾದ 32 ವರ್ಷದ ಮಹಿಳಾ ಪ್ರತಿಭಟನಾಕಾರರು ತಮ್ಮ ಅನುಭವ ಹಂಚಿಕೊಂಡರು.
“ಪರೀಕ್ಷಾ ಅಕ್ರಮ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಧರಣಿಯಲ್ಲಿ ಭಾಗವಹಿಸಿದ್ದ 15 ವರ್ಷದ ಬಾಲಕಿಯ ಮೇಲೆ ಎಫ್ಐಆರ್ ದಾಖಲಿಸಿ, ಆಕೆಯಿಂದ ಬಲವಂತವಾಗಿ ಕ್ಷಮಾಪಣೆ ವೀಡಿಯೋ ಪಡೆಯಲಾಗಿದೆ. ಇದು ಸಂಪೂರ್ಣ ಅಸಂಬದ್ಧ” ಎಂದು ರಾಹುಲ್ ಕರೆದಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳು ಯಾವುದೇ ಅಪರಾಧ ಮಾಡಿಲ್ಲ ಹಾಗೂ ಅವರು ಕ್ಷಮೆ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ.
ಜುಲೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಜನರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ಬೆದರಿಕೆ ಹಾಕಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆನ್ಲೈನ್ ಕಿರುಕುಳ ನೀಡಲಾಗುತ್ತಿದೆ ಎಂದೂ ರಾಹುಲ್ ಗಾಂಧಿ ದೂರಿದ್ದಾರೆ.
“ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಹಾಗೂ ಪೆಲೆಟ್ ಗನ್ ಬಳಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ. ಮಾಧ್ಯಮಗಳ ಮುಂದೆ ಬಂದು ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗಿಲ್ಲ” ಎಂದು ರಾಹುಲ್ ಟೀಕಿಸಿದರು.




