ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಬಿಜೆಪಿಯ ರಾಜಕೀಯ ತಂತ್ರಗಳನ್ನು ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್ ತೀಕ್ಷ್ಣವಾಗಿ ಟೀಕಿಸಿದ್ದಾರೆ. ದಿ ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಸಂಜಯ್ ಸಿಂಗ್, “ದಾವೂದ್ ಇಬ್ರಾಹಿಂ ಬಿಜೆಪಿ ಸೇರುವುದೊಂದೇ ಬಾಕಿ” ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಹೆದರಿಸುತ್ತಿದೆ ಮತ್ತು ಪ್ರಾದೇಶಿಕ ಪಕ್ಷಗಳನ್ನು ಇಬ್ಬಾಗ ಮಾಡುತ್ತಿದೆ ಎಂದು ಸಂಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯ ನೂತನ ಸಿಎಂ ಆತಿಶಿ ಮಾರ್ಲೆನಾ ಸಿಂಗ್ ಅವರ ಹಿಂದಿನ ಕುತೂಹಲಕಾರಿ ಕಥೆ
ಹಾಗೆಯೇ, “ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ ವಿರೋಧ ಪಕ್ಷದ ಯಾವ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಇರುತ್ತದೆಯೋ, ಅವರು ಬಿಜೆಪಿ ಸೇರಿದ ತಕ್ಷಣ ‘ಸ್ವಚ್ಛ’ವಾಗುತ್ತಾರೆ. ಇವರ ವಾಷಿಂಗ್ ಮೆಷಿನ್ ರಾಜಕಾರಣವನ್ನು ನೋಡಿದರೆ, ಭವಿಷ್ಯದಲ್ಲಿ ದಾವೂದ್ ಇಬ್ರಾಹಿಂ ಬಿಜೆಪಿ ಸೇರಿದರೂ ಆಶ್ಚರ್ಯವಿಲ್ಲ” ಎಂದು ಮೋಶಾರನ್ನು ಚುಚ್ಚಿದ್ದಾರೆ.
“ದೇಶಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ಇಬ್ಭಾಗ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ (ಮೋಶಾ) ಕಾರಣ. ತನಿಖಾ ಸಂಸ್ಥೆಗಳ ಭಯದಿಂದಾಗಿ ನಾಯಕರು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿಗೆ ಶರಣಾಗುತ್ತಿದ್ದಾರೆ” ಎಂದು ದೂರಿದ್ದಾರೆ.
“ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಮೂಲಕ ದೇಶದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಲು ಬಿಜೆಪಿ ಸಂಚು ರೂಪಿಸುತ್ತಿದೆ. ತಾವೇ ಭ್ರಷ್ಟರು ಎಂದು ಕರೆದ ನಾಯಕರನ್ನು ಆನಂತರ ತಮ್ಮದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ” ಎಂದು ವಾದಿಸಿದ್ದಾರೆ.
ಇನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನದಲ್ಲಿ ಮಾತನಾಡಿದ ಸಂಜಯ್ ಸಿಂಗ್, “ಆರ್ಎಸ್ಎಸ್-ಬಿಜೆಪಿಗರು ಸಿಜೆಪಿಯಿಂದಾಗಿ ಭಯಭೀತರಾಗಿದ್ದಾರೆ ಎಂಬುದು ಸ್ಪಷ್ಟ. ಆದ್ದರಿಂದ ಅಭಿಜೀತ್ ದೀಪ್ಕೆ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ಯಾವುದೇ ಚಳವಳಿ ಎಂದಿಗೂ ಕೆಟ್ಟದ್ದಲ್ಲ, ಅದು ಒಳ್ಳೆಯ ಅಥವಾ ಕೆಟ್ಟ ಗುರಿಗಳನ್ನು ಹೊಂದಿರಬಹುದು. ಸಿಜೆಪಿ ಗುರಿ ಒಳ್ಳೆಯದಾಗಿದೆ. 22 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ನೀಟ್ ಪತ್ರಿಕೆ ಸೋರಿಕೆಗೆ ಪ್ರತಿಕ್ರಿಯೆಯಾಗಿ ಈ ಚಳವಳಿಯನ್ನು ಪ್ರಾರಂಭಿಸಲಾಗಿದೆ. ಈ ಬೇಡಿಕೆಯನ್ನು ಒಪ್ಪುವ ಯಾರಾದರೂ ಸಿಜೆಪಿಗೆ ಬೆಂಬಲಿಸಬೇಕು” ಎಂದು ಅಭಿಪ್ರಾಯಿಸಿದ್ದಾರೆ.




