ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಮಸೀದಿಯ ನಿರ್ಮಾಣ ಕಾರ್ಯ ಮೇ ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಯೋಜನೆಗೆ ಸಂಬಂಧಿಸಿದವರು ಹೇಳಿದ್ದಾರೆ. ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ತೀರ್ಪಿನ ಅನ್ವಯ ಮಸೀದಿ ನಿರ್ಮಿಸಬೇಕಿದೆ.
ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿಯನ್ನು ನಿರ್ಮಿಸುವ ಕಾರ್ಯ ನಿರ್ವಹಿಸಲಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್, ವಿವಿಧ ರಾಜ್ಯಗಳಲ್ಲಿ ನಿಧಿ ಸಂಗ್ರಹಿಸಲು ಫೆಬ್ರವರಿಯಿಂದ ಉಸ್ತುವಾರಿಗಳನ್ನು ನೇಮಿಸಲು ಮುಂದಾಗಿದೆ.
ಒಂದು ಶತಮಾನದಷ್ಟು ಹಿಂದಿನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 9, 2019 ರಂದು ಐತಿಹಾಸಿಕ ತೀರ್ಪು ನೀಡಿತ್ತು. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಅಯೋಧ್ಯೆಯ ಮತ್ತೊಂದು ಜಾಗದಲ್ಲಿ ಮಸೀದಿ ನಿರ್ಮಿಸಲು ತಿಳಿಸಿತ್ತು.
ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭ ಜನವರಿ 22, 2024ರಂದು ನಡೆಯುವ ನಿರೀಕ್ಷೆಗಳಿದ್ದರೂ ಮಸೀದಿಯ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.
ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ನ ಮುಖ್ಯ ಟ್ರಸ್ಟಿ ಜುಫರ್ ಫಾರೂಕಿ ಮಾತನಾಡಿ, “ಮಸೀದಿಯ ಅಂತಿಮ ವಿನ್ಯಾಸವು ಫೆಬ್ರವರಿ ಮಧ್ಯದ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ. ನಂತರ ಅದು ಆಡಳಿತಾತ್ಮಕ ಅನುಮೋದನೆಗೆ ಹೋಗುತ್ತದೆ. ಫೆಬ್ರವರಿಯಲ್ಲಿ ಸೈಟ್ ಆಫೀಸ್ ತೆರೆಯಲಾಗುವುದು” ಎಂದಿದ್ದಾರೆ.
“ಮುಂದಿನ ಮೇ ವೇಳೆಗೆ ನಾವು ಮಸೀದಿಯ ನಿರ್ಮಾಣವನ್ನು ಪ್ರಾರಂಭಿಸುವ ಸ್ಥಿತಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ” ಎಂದು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷರೂ ಆಗಿರುವ ಫಾರೂಕಿ, ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.
ಅಯೋಧ್ಯೆ ಮಸೀದಿಯ ವಿನ್ಯಾಸದಲ್ಲಿ ‘ತೀವ್ರವಾದ’ ಬದಲಾವಣೆಗಳನ್ನು ಮಾಡಿದ ನಂತರ ಮತ್ತು ಹಣಕಾಸಿನ ನಿರ್ಬಂಧಗಳ ಬಳಿಕ ಹೊಸ ಔಪಚಾರಿಕೆಗಳಿಂದಾಗಿ ಮಸೀದಿಯ ನಿರ್ಮಾಣವು ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಸೀದಿಯ ಆರಂಭಿಕ ವಿನ್ಯಾಸವು ಭಾರತದಲ್ಲಿ ನಿರ್ಮಿಸಲಾದ ಕಟ್ಟಡಗಳನ್ನು ಆಧರಿಸಿದೆ. ಆದರೆ, ಅದನ್ನು ತಿರಸ್ಕರಿಸಿ ಹೊಸ ವಿನ್ಯಾಸ ಸಿದ್ಧಪಡಿಸಲಾಗಿದೆ. ಹಿಂದಿನ 15,000 ಚದರ ಅಡಿಯ ಬದಲಾಗಿ 40,000 ಚದರ ಅಡಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಕ್ರೌಡ್ಫಂಡಿಂಗ್ ಅಭಿಯಾನದ ಸಾಧ್ಯತೆಯ ಬಗ್ಗೆ ಕೇಳಿದಾಗ, ಫೆಬ್ರವರಿಯೊಳಗೆ ಟ್ರಸ್ಟ್ ಅದರ ಬಗ್ಗೆ ಯೋಚಿಸಲಿದೆ ಎಂದಿದ್ದಾರೆ.
“ಕ್ರೌಡ್ಫಂಡಿಂಗ್ ಒಂದು ದೊಡ್ಡ ಕಾರ್ಯವಾಗಿದೆ. ಅದನ್ನು ನಿರ್ವಹಿಸುವುದು ತುಂಬಾ ಕಷ್ಟ. ಯೋಜನೆಗೆ ಹಣವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ವಿವಿಧ ರಾಜ್ಯಗಳಲ್ಲಿನ ಜನ್ಮ ಜನರಿಗೆ ವಹಿಸಲು ಪ್ರಯತ್ನಿಸಲಾಗುತ್ತಿದೆ. ನಾವು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಎರಡನ್ನೂ ಖಚಿತಪಡಿಸಿಕೊಳ್ಳಲು ಒಂದು ರೀತಿಯಲ್ಲಿ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಟ್ರಸ್ಟ್ಗೆ ಸಂಬಂಧಿಸಿದ ಮುಂಬೈ ತಂಡವು ಈ ನಿಟ್ಟಿನಲ್ಲಿ ಕೆಲಸಈಗ ಮಾಡುತ್ತಿದೆ. ಒಂದೂವರೆ ತಿಂಗಳೊಳಗೆ ನಾವು ಸಾಕಷ್ಟು ಹಣವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಫಾರೂಕಿ ಮಾಹಿತಿ ನೀಡಿದ್ದಾರೆ.
“ಅಗತ್ಯವಿದ್ದರೆ, ದೇಣಿಗೆ ನೀಡಲು ಸಿದ್ಧರಿರುವ ಜನರಿಂದ ಆನ್ಲೈನ್ ದೇಣಿಗೆಯನ್ನು ಪಡೆಯಲಾಗುವುದು. ವಿನ್ಯಾಸದಲ್ಲಿನ ಬದಲಾವಣೆಗಳಿಂದಾಗಿ ಮಸೀದಿಯ ನಿರ್ಮಾಣವು ಹೆಚ್ಚು ವಿಳಂಬವಾಗುತ್ತಿದೆ” ಎಂದು ವಿವರಿಸಿದ್ದಾರೆ.
ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಮಾತನಾಡಿ, “ಸರಕಾರ ನೀಡಿದ ಜಾಗದಲ್ಲಿ ಮಸೀದಿ ಜತೆಗೆ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆ ಕೋಣೆ, ಮ್ಯೂಸಿಯಂ ಅನ್ನು ಟ್ರಸ್ಟ್ ವತಿಯಿಂದ ನಿರ್ಮಿಸಲಾಗುವುದು” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈನ ಗುಂಪಿನೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರನ್ನು ನಿರ್ಮಾಣ ಸಮಿತಿಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಹಣದ ಲಭ್ಯತೆಯ ಮೇಲೆ ನಿರ್ಮಾಣ ಕಾರ್ಯ ಅವಲಂಬಿತವಾಗಿದೆ ಎಂದು ಹುಸೇನ್ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಆದೇಶದ ಮೇರೆಗೆ ಸರ್ಕಾರವು ಅಯೋಧ್ಯೆಯ ಧನ್ನಿಪುರದಲ್ಲಿ ಐದು ಎಕರೆ ಭೂಮಿಯನ್ನು ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ಮಸೀದಿ ನಿರ್ಮಿಸಲು ನೀಡಿತ್ತು.
ಮಸೀದಿ, ಸಮುದಾಯ ಅಡುಗೆಮನೆ, ಸಂಶೋಧನಾ ಸಂಸ್ಥೆ, ಆಸ್ಪತ್ರೆ ಮತ್ತು ವಸ್ತುಸಂಗ್ರಹಾಲಯದಂತಹ ಇತರ ಸೌಲಭ್ಯಗಳ ನಿರ್ಮಾಣಕ್ಕಾಗಿ ಐಐಸಿಎಫ್ ಅನ್ನು ಮಂಡಳಿ ರಚಿಸಿತು.
ಪ್ರಸ್ತಾವಿತ ಮಸೀದಿ ಮತ್ತು ಇತರ ಕಟ್ಟಡಗಳ ನಕ್ಷೆಯನ್ನು 2021 ರಲ್ಲಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಯಿತು. ಇದನ್ನು ಈ ವರ್ಷದ ಮಾರ್ಚ್ನಲ್ಲಿ ಅನುಮೋದಿಸಲಾಗಿದೆ.
ಇದನ್ನೂ ಓದಿರಿ: ಮುಂದುವರಿದ ಇಸ್ರೇಲ್ ಆಕ್ರಮಣ; ಜಬಾಲಿಯದಲ್ಲಿ ಅಪಾರ ಸಾವು- ನೋವು