ದೆಹಲಿ ಮೂಲದ ಎನ್ಜಿಒವೊಂದರಲ್ಲಿ ಇಂಟರ್ನ್ಶಿಪ್ಗಾಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ರಾಮಸ್ಥರ ಗುಂಪೊಂದು ದಾಳಿ ನಡೆಸಿ, ಆಕೆಯ ಬಗ್ಗೆಗಳನ್ನು ಹರಿದು ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ ಜೊತೆ ಬಂದಿದ್ದ ಆಕೆಯ ಸಹೋದ್ಯೋಗಿ ಮೇಲೆಯೂ ಹಲ್ಲೆ ನಡೆದಿದೆ. ಇತ್ತಿಚೆಗೆ, ತಮ್ಮ ಪ್ರದೇಶದಲ್ಲಿ ಮಕ್ಕಳ ಕಳ್ಳರು ತಿರುಗಾಡುತ್ತಿದ್ದಾಂಬ ವದಂತಿ ಹರಡಿದ್ದರಿಂದ, ಯುವತಿ ಮತ್ತು ಆಕೆಯ ಸಹೋದ್ಯೋಗಿಯನ್ನು ಮಕ್ಕಳ ಕಳ್ಳರೆಂದು ಭಾವಿಸಿ, ಗ್ರಾಮದ ಕೆಲವು ದುಷ್ಕರ್ಮಿಗಳು ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ಜೂನ್ 16ರ ಸಂಜೆ ಈ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಅಪ್ರಾಪ್ತರು ಸೇರಿದಂತೆ ಕನಿಷ್ಠ 20 ಜನರನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ ದೆಹಲಿಯವರಾಗಿದ್ದು, ಯುವಕ ಸೂರತ್ ಮೂಲದವರಾಗಿದ್ದಾರೆ. ಇವರಿಬ್ಬರೂ ಕಳೆದ ವರ್ಷದ ಸೆಪ್ಟೆಂಬರ್ನಿಂದ ಈ ಭಾಗದ ಬುಡಕಟ್ಟು ಪ್ರದೇಶಗಳಲ್ಲಿ ಫೆಲೋಶಿಪ್ ಅಡಿಯಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದರು.
ರಾಯಗಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಪ್ರಸಾದ್ ಅವರು ಮಾಹಿತಿ ನೀಡಿರುವಂತೆ, ಸಂತ್ರಸ್ತರಿಬ್ಬರೂ ಸ್ಕೂಟರ್ನಲ್ಲಿ ಜಿಲ್ಲೆಯಾದ್ಯಂತ ಸುಮಾರು 250 ಕಿ.ಮೀ. ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಆ ಪ್ರದೇಶದ ಮೂಲಕ ಚಲಿಸುತ್ತಿದ್ದಾಗ, ಸ್ಥಳೀಯವಾಗಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ತಪ್ಪು ವದಂತಿ ಹಬ್ಬಿತ್ತು. ಇವರನ್ನು ಕಂಡು ಸಂಶಯಗೊಂಡ ಕೆಲವು ಸ್ಥಳೀಯರು ಮೋಟಾರ್ ಸೈಕಲ್ಗಳಲ್ಲಿ ಇವರನ್ನು ಬೆನ್ನಟ್ಟಿದ್ದಾರೆ. ರಾತ್ರಿ 8:30ರ ಸುಮಾರಿಗೆ ಗದ್ದೆಯೊಂದರ ಬಳಿ ಇವರ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಾಗ, ಅಟ್ಟಿಸಿಕೊಂಡು ಬಂದ ಉದ್ರಿಕ್ತ ಗುಂಪು ಇಬ್ಬರ ಮೇಲೂ ಮುಗಿಬಿದ್ದು ಹಲ್ಲೆ ನಡೆಸಿದೆ. ಅಲ್ಲದೆ ಯುವತಿ ಬಟ್ಟೆಗಳನ್ನು ಹರಿದು ಆಕೆಗೆ ತೀವ್ರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ತಮಗೆ ಈ ಪ್ರದೇಶದ ದಾರಿ ಸರಿಯಾಗಿ ತಿಳಿಯದ ಕಾರಣ ಗೂಗಲ್ ಮ್ಯಾಪ್ ಬಳಸುತ್ತಿದ್ದೆವು ಎಂದು ಸಂತ್ರಸ್ತ ಯುವತಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಾರಿಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಸರಿಯಿಲ್ಲ ಮುಂದೆ ಹೋಗಬೇಡಿ ಎಂದು ತಡೆದಿದ್ದನು. ನಾವು ವಾಪಸ್ ತಿರುಗಲು ಯತ್ನಿಸಿದಾಗ ಆತ ಸ್ಕೂಟರ್ ಕೀ ಕಸಿದುಕೊಳ್ಳಲು ಯತ್ನಿಸಿ ಗುರುತಿನ ಚೀಟಿ ಕೇಳಿದನು. ನಾವು ಗುರುತಿನ ಚೀಟಿಯನ್ನು ತೋರಿಸಿದರೂ ಆತ ನಂಬಲಿಲ್ಲ. ಅಷ್ಟರಲ್ಲೇ ದೊಡ್ಡ ಗುಂಪು ಜಮಾಯಿಸಿತು ಎಂದು ಯುವತಿ ಹೇಳಿಕೊಂಡಿದ್ದಾರೆ.
ತಕ್ಷಣವೇ ಸಹೋದ್ಯೋಗಿ ಸ್ಕೂಟರ್ ಚಲಾಯಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದರೂ, ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಬೆನ್ನಟ್ಟಿ ಹಿಡಿದು ತಮಗೆ ಘೋರ ಕಿರುಕುಳ ನೀಡಿದ್ದಾರೆ. ದುಷ್ಕರ್ಮಿಗಳು ತನ್ನ ಕೂದಲನ್ನು ಎಳೆದು, ಬಟ್ಟೆಗಳನ್ನು ಹರಿದು ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ಕಣ್ಣೀರು ಹಾಕಿದ್ದಾರೆ.
ಈ ಲೇಖನ ಓದಿದ್ದೀರಾ?: BJP ಜತೆಗೆ ಮೈತ್ರಿ: ಅಳಿವಿನ ಹಾದಿ ತಲುಪಿತೇ ಜೆಡಿಎಸ್?
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವು ಸ್ಥಳೀಯರ ನೆರವಿನೊಂದಿಗೆ ಇಬ್ಬರನ್ನೂ ರಕ್ಷಿಸಿದ್ದಾರೆ.
ರಾಯಗಡ ಎಸ್ಪಿ ಅವರ ಪ್ರಕಾರ, ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 20 ಜನರನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತ ಯುವತಿ ಮತ್ತು ಯುವಕನಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಅವರ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಇಬ್ಬರೂ ಸದ್ಯ ತೀವ್ರ ಆಘಾತದಲ್ಲಿ ಇರುವುದರಿಂದ ಯಾರೊಂದಿಗೂ ಮಾತನಾಡಲು ಸಿದ್ಧರಿಲ್ಲ ಎಂದು ಎನ್ಜಿಒ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.



