- ಮಂಡ್ಯದ ಚುನಾವಣಾ ಕಣದಲ್ಲಿ ಯೋಗಿ ಆದಿತ್ಯನಾಥ ಪ್ರಚಾರ
- ಹಳೇ ಮೈಸೂರು ಗೆಲ್ಲಲು ಒಕ್ಕಲಿಗ ಸಮುದಾಯದ ಬೆನ್ನುಬಿದ್ದ ಬಿಜೆಪಿ
ಕರುನಾಡ ರಾಜಕೀಯ ಸಿಂಹಾಸನ ಉಳಿಸಿಕೊಳ್ಳಲು ಕಮಲಪಕ್ಷ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಕರಾವಳಿ ನಾಡಿನಲ್ಲಿ ಪ್ರಯೋಗಿಸಿದ ಕೋಮು ಅಸ್ತ್ರ, ಮುಸಲ್ಮಾನ ಮೀಸಲಾತಿ ರದ್ದತಿಯ ಧಾರ್ಮಿಕ ಅಸ್ತ್ರ, ಮೋದಿ, ಅಮಿತ್ ಶಾ ರಂತಹ ಬ್ರಾಂಡ್ ನೇಮ್ ಅಸ್ತ್ರಗಳೂ ರಾಜ್ಯ ಬಿಜೆಪಿಯ ಕೈ ಹಿಡಿಯುವ ಲಕ್ಷಣಗಳು ಇಲ್ಲವಾಗಿದೆ.
ಇದ್ದುದರಲ್ಲಿ ಏನೋ ಮ್ಯಾಜಿಕ್ ಮಾಡಬಹುದೆನ್ನುವ ದೂರಾಲೋಚನೆಯಲ್ಲಿ ನಿಂತಿದ್ದ ಪಕ್ಷಕ್ಕೆ ಶೆಟ್ಟರ್ – ಸವದಿ ಜೋಡಿ ಕೊಟ್ಟ ಲಿಂಗಾಯತ ವಿರೋಧಿ ಹಣೆಪಟ್ಟಿ ಗಾಯದ ಮೇಲೆ ಬರೆ ಎಳೆದಂತಾಗಿಸಿದೆ.
ಇದರ ನಡುವೆ ಹೊಸ ಪ್ರಯೋಗದ ಹೆಸರಿನಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷನಿಷ್ಠರನ್ನು ಕಡೆಗಣಿಸಿದ್ದೂ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ.
ಹೀಗೆ ಬಳಲಿ ನಿಂತಿರುವ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಹೊಸ ಅಕೌಂಟ್ ಓಪನ್ ಮಾಡುವ ಅಸ್ತ್ರವನ್ನು ಅಮಿತ್ ಶಾ ಕೊಟ್ಟಿದ್ದೂ ಅಲ್ಲದೆ, ಅದನ್ನು ಪ್ರಯೋಗಕ್ಕೊಡ್ಡಲು ಉತ್ತರ ಪ್ರದೇಶದ ಆದಿತ್ಯನಾಥರನ್ನು ಕಣಕ್ಕಿಳಿಸಿದ್ದಾರೆ.
ಹೌದು.. ಹತ್ತಾರು ಲೆಕ್ಕಾಚಾರಗಳಲ್ಲಿ ಸೋತ ಬಿಜೆಪಿಯು ಸಕ್ಕರೆ ನಾಡು ಮಂಡ್ಯದ ಒಡಲಲ್ಲಿ ಜಾತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಅಂದರೆ “ಒಕ್ಕಲಿಗರ ಸೀಮೆಯೋಳಗೆ ನಾಥ ಪರಂಪರೆ”ಯ ಅಂಬು ಹೂಡಲು ಮುಂದಾಗಿದೆ.
ಬಿಜೆಪಿಯ ಈ ಹೊಸ ಪ್ರಯೋಗದ ಫಲವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಂಡ್ಯದಲ್ಲಿ ಬಿಜೆಪಿ ಪರ ಮತಬೇಟೆ ನಡೆಸಲಿದ್ದಾರೆ.
ಬಿಜೆಪಿ ಲೆಕ್ಕಾಚಾರವಿದು
ಹಿಂದಿನ ಹತ್ತಾರು ವರ್ಷಗಳ ಕಾಲ ಪಕ್ಷದ ಕೈ ಹಿಡಿದಿದ್ದ ಕೋಮು, ಧಾರ್ಮಿಕ ಭಾವನೆ ಕೆದಕುವ ವಿಚಾರಗಳು ಪಕ್ಷಕ್ಕೆ ನಿರೀಕ್ಷಿತ ಫಲ ಕೊಡದಿದ್ದ ಕಾರಣ ಬಿಜೆಪಿ ನಿಧಾನವಾಗಿ ತನ್ನ ಅಜೆಂಡಾವನ್ನು ಬದಲಾಯಿಸಿ ಜಾತಿ ವ್ಯವಸ್ಥೆ ಕೊಳಕ್ಕೆ ಕಲ್ಲು ಹಾಕುವ ಯೋಜನೆ ಮಾಡಿದೆ. ಕಾಂಗ್ರೆಸ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಆದ ದಲಿತ, ಅಲ್ಪಸಂಖ್ಯಾತ ವರ್ಗಗಳನ್ನು ಬಿಟ್ಟು, ಪಕ್ಷಕ್ಕೆ ಬಲ ತುಂಬಲು ಅಗತ್ಯವಾಗಿರುವ ಸಮುದಾಯವನ್ನು ಬಿಜೆಪಿ ಓಲೈಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಲು ಮುಂದಾಗಿದೆ.
ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕರು ಲಿಂಗಾಯತರು ಮತ್ತು ಒಕ್ಕಲಿಗರು. ಈಗಾಗಲೇ ಬಿಜೆಪಿಯೊಂದಿಗಿದ್ದ ಲಿಂಗಾಯತ ಸಮುದಾಯ, ಯಡಿಯೂರಪ್ಪ, ಶೆಟ್ಟರ್ ಹಾಗೂ ಸವದಿ ವಿಚಾರದಲ್ಲಿ ನಡೆದುಕೊಂಡ ನಡೆ ಗಮನಿಸಿ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಸುಳಿವು ಸಿಕ್ಕಿತು. ಹೀಗಾಗಿ ಈಗ ಒಕ್ಕಲಿಗ ಸಮುದಾಯದ ಮನವೊಲಿಕೆ ಬಿಜೆಪಿಯ ಮುಂದಿನ ಕಾರ್ಯತಂತ್ರ. ಇದನ್ನೇ ಮಂಡ್ಯದ ಮಣ್ಣಲ್ಲಿ ಬಿಜೆಪಿ ಆದಿತ್ಯನಾಥರ ಮೂಲಕ ಮಾಡಿಸ ಹೊರಟಿದೆ.
ಆರಂಭದಲ್ಲಿ ಇಲ್ಲಿನ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳ ಮೂಲಕವೇ ಬಿಜೆಪಿ ಇಲ್ಲಿ ನೆಲೆ ಕಾಣಬಯಸಿದರೂ, ಅದಕ್ಕೆ ಜೆಡಿಎಸ್ ಅವಕಾಶ ಮಾಡಿಕೊಡದೆ ಅವರನ್ನು ಸಮುದಾಯದ ಶ್ರೇಯೋಭಿವೃದ್ದಿಗೆ ಮಾತ್ರ ಸೀಮಿತಗೊಳಿಸಲು ಕಟ್ಟಿ ಹಾಕಿತ್ತು. ಹೀಗಾಗಿ ಇದ್ದೊಂದು ಅವಕಾಶ ಕಳೆದುಕೊಂಡ ಬಿಜೆಪಿ ಅದಕ್ಕಾಗಿ ಹುಡುಕಿಕೊಂಡ ಮತ್ತೊಂದು ಪರ್ಯಾಯ ಮಾರ್ಗವೇ ಯೋಗಿ ಆಧಿತ್ಯನಾಥ.
ನಾಥಪರಂಪರೆ ನಂಟು
ಉತ್ತರ ಪ್ರದೇಶದಲ್ಲಿ ಯೋಗಿ ಮಾಡೆಲ್ನ ಆಡಳಿತ ಜಾರಿ ಮಾಡಿ ದೇಶದಲ್ಲಿ ಹೆಸರು ಮಾಡಿದ ಯೋಗಿಯನ್ನೇ ಬಿಜೆಪಿ ಸಕ್ಕರೆ ನಾಡಿನಲ್ಲಿ ಪ್ರಚಾರ ಕಣಕ್ಕೆ ತಂದಿಳಿಸಲು ನಿರ್ಧರಿಸಿತು. ಪಕ್ಷದ ಈ ನಡೆಗೆ ಕಾರಣವಾಗಿದ್ದು, ಯೋಗಿ ಹಾಗೂ ಮಂಡ್ಯ ನಾಡಿಗಿರುವ ನಾಥ ಪರಂಪರೆಯ ಮೂಲ.
ಚುಂಚಶ್ರೀ ಪೀಠವೂ ಆದಿತ್ಯನಾಥರ ಮೂಲವೂ ನಾಥ ಪರಂಪರೆಯ ಕೊಂಡಿಯಲ್ಲಿ ತಳುಕು ಹಾಕಿಕೊಂಡಿವೆ. ಅಂದರೆ ಇಲ್ಲಿನ ಮಠ, ಕಾಲಬೈರವೇಶ್ವರ ಹಾಗೂ ಯೋಗಿ ಆದಿತ್ಯನಾಥರ ಮೂಲ ಗೋರಖಪುರ ಮೂಲದ್ದು.
ಸರಳವಾಗಿ ಹೇಳುವುದಾದರೆ ಚುಂಚಶ್ರೀ ಪೀಠವೂ ಯೋಗಿಯ ಪೀಠವೂ ಭೈರವನನ್ನು ಆರಾಧಿಸುವ ನಾಥ ಪರಂಪರೆಗೆ ಸೇರಿದವರು. ಹೀಗೆ ಒಕ್ಕಲಿಗರ ಭೂಮಿಗೆ ನಾಥ ಪರಂಪರೆಯ ಮೂಲಕ ಬಿಜೆಪಿ ಈ ಭಾಗದಲ್ಲಿ ಮತಭಿಕ್ಷೆ ಬೇಡಲಿದೆ.
ಈ ಸುದ್ದಿ ಓದಿದ್ದೀರಾ? : ಬಸವಣ್ಣ, ಕುವೆಂಪು ಅವರ ನಾಡಿಗೆ ಮೋದಿಯ ಆಶೀರ್ವಾದ ಅಗತ್ಯವಿಲ್ಲ: ಪ್ರಿಯಾಂಕಾ ಗಾಂಧಿ
ನಿರ್ಮಾನಂದನಾಥ ಮತ್ತು ಆದಿತ್ಯನಾಥ
ಹಿಂದೊಮ್ಮೆ ಹಾಲಿ ಚುಂಚಶ್ರೀ ನಿರ್ಮಲಾನಂದನಾಥರೇ, ಆದಿತ್ಯನಾಥರ ಗುರುಗಳಾದ ಅವೈದ್ಯನಾಥರು ಹಾಗೂ ನಮ್ಮ ಗುರುದೈವರಾದ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಪರಮ ಆಪ್ತರಾಗಿದ್ದರು. ಇಬ್ಬರೂ ಒಂದೇ ದಾರಿಯಲ್ಲಿ ನಡೆದು ಗುರು ಪರಂಪರೆಗೆ ಶ್ರೇಷ್ಠತೆಯ ಮೆರುಗು ನೀಡಿದರು.
ಅದೇ ರೀತಿಯಲ್ಲಿ ಆದಿತ್ಯನಾಥರು ಮತ್ತು ನಾನು ಸಮಕಾಲೀನರು. ಕರ್ನಾಟಕಕ್ಕೆ ಬಂದಾಗ ನಮ್ಮ ಮಠಕ್ಕೆ ಅವರು ಬರುತ್ತಾರೆ. ನಾವು ಉತ್ತರ ಪ್ರದೇಶಕ್ಕೆ ಹೋದಾಗ ಗೋರಖ್ನಾಥ ಮಠಕ್ಕೆ ಭೇಟಿ ನೀಡುತ್ತೇವೆ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನಂಟಿನ ಮೂಲದ ಹಿನ್ನೆಲೆ
ಗೋರಖಪುರದ ಗೋರಖ್ನಾಥ ಶ್ರೀಗಳು ಚುಂಚನಗಿರಿಯಲ್ಲಿ ತಪಸ್ಸು ಮಾಡಿ, ಮಠ ಸ್ಥಾಪಿಸಿ ಸಿದ್ಧ ಶಕ್ತಿಯನ್ನು ಕಲ್ಪಿಸಿಕೊಟ್ಟಿದ್ದರಿಂದ ನಾಥ ಪರಂಪರೆಯಲ್ಲೇ ಚುಂಚನಗಿರಿ ಮಠವೂ ಮುಂದುವರೆದಿದೆ ಎನ್ನುವ ಮಾತಿದೆ.