- ಎಐಸಿಸಿ ಅಧ್ಯಕ್ಷರ ಕುಟುಂಬದ ವಿರುದ್ಧ ಕೊಲೆ ಸಂಚು
- ಮತ್ತೊಮ್ಮೆ ದಾಖಲಾದ ಬಿಜೆಪಿಯ ದ್ವೇಷ ರಾಜಕಾರಣ
ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾರಥ್ಯದಲ್ಲಿ ಕರ್ನಾಟಕದಲ್ಲಿ ದಿಗ್ವಿಜಯ ಸಾಧಿಸಲು ಹೊರಟಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಆರಂಭಿಸಿದೆ.
ಇಲ್ಲಿಯವರೆಗೂ ಪಕ್ಷದ ಮಟ್ಟದಲ್ಲೇ ಇದ್ದ ಬಿಜೆಪಿ ದ್ವೇಷಾಸೂಯೆ, ಈಗ ಖರ್ಗೆ ಕುಟುಂಬದ ವಿರುದ್ದ ನೇರವಾಗಿ ಕಾಣಿಸಿಕೊಂಡಿದೆ. ಚಿತ್ತಾಪುರದ ಬಿಜೆಪಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಮಣಿಕಂಠ ರಾಥೋಡ್ ದ್ವೇಷದ ಕಿಡಿ ಕಾರಿದ್ದಾನೆ.
ನನಗೇನಾದರೂ ಖರ್ಗೆ ಕುಟುಂಬವೇನಾದರೂ ಸಿಕ್ಕಿದರೆ ಅವರನ್ನು ಸಾಫ್ ಮಾಡುತ್ತೇನೆಂದು ಹೇಳಿಕೊಂಡಿದ್ದಾನೆ. ಆತ ಕಾರ್ಯಕರ್ತನೊಂದಿಗೆ ನಡೆಸಿರುವ ಫೋನ್ ಸಂಭಾಷಣೆ ಈಗ ಎಲ್ಲಡೆ ವೈರಲ್ ಆಗುತ್ತಿದೆ.
ಸಂಭಾಷಣೆಯಲ್ಲೇನಿದೆ ?
ತನ್ನ ಪಕ್ಷದ ಕಾರ್ಯಕರ್ತನೊಂದಿಗೆ ಮಾತನಾಡುವ ವೇಳೆ ಮಣಿಕಂಠ ರಾಥೋಡ್ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾನೆ. ನನ್ನ ವಿರುದ್ದ 44 ಕ್ರಿಮಿನಲ್ ಕೇಸ್ ಇದೆ ಎಂದು ಹೇಳುವ ಖರ್ಗೆ ಅವೆಲ್ಲಿದೆ ಎಂದು ಹೇಳಲಿಕ್ಕೆ ಹೇಳು ಎಂದಿದ್ದಾನೆ.
ಅದಕ್ಕೆ ಆತ, ಅಣ್ಣಾ ನನ್ನ ಬಳಿ ಅವರ ನಂಬರ್ ಇಲ್ಲ ಕೊಡು ಕೇಳುವೆ ಎಂದಾಗ ಮರು ಉತ್ತರ ನೀಡಿದ ಮಣಿಕಂಠ ರಾಥೋಡ್, ನನ್ನ ಬಳಿ ನಂಬರ್ ಇದ್ದಿದ್ದರೆ ನಾನು ಖರ್ಗೆ ಹೆಂಡ್ರು, ಮಕ್ಕಳನ್ನ ಸಾಫ್ ಮಾಡ್ತಿದ್ದೆ. ನನ್ನ ಬಳಿ ಇಲ್ಲ, ನೀನೇ ಮಾತನಾಡು ಎಂದು ಹೇಳಿದ್ದಾನೆ. ಮುಂದುವರೆದು ಖರ್ಗೆ ಕುಟುಂಬದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? :ಖೆಡ್ಡಾಕ್ಕೆ ಬೀಳಬೇಡಿ, ನುಡಿ ನೋಡಬೇಡಿ – ನಡೆ ನೋಡಿ:…
ಇತ್ತ ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಬಿಜೆಪಿ ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿ ಪಾಪದ ಕೃತ್ಯ ಎಸಗಿದೆ.
ಹತ್ಯೆಗೆ ಸಂಚು ನಡೆದಿದ್ದರೂ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ ಎಂದು ಆರೋಪಿಸಿದೆ.
ಮೋದಿ ಹಾಗೂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.