- 2008ರಿಂದ ಸತತ ಗೆಲುವು ದಾಖಲಿಸಿರುವ ಆರ್ ಅಶೋಕ್
- ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ಮತದಾರರ ಸಂಖ್ಯೆ ಹೆಚ್ಚು
ಮಾಜಿ ಉಪಮುಖ್ಯಮಂತ್ರಿ, ಹಾಲಿ ಸಚಿವ ಆರ್ ಅಶೋಕ್ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಮುಂದಾಗಿದೆ. ಸೋಲಿಲ್ಲದ ಸರದಾರನ ಪದ್ಮನಾಭನಗರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಹಿರಿಯ ಅನುಭವಿ, ಸಿದ್ದರಾಮಯ್ಯ ಜೊತೆಗಾರ ಪಿಜಿಆರ್ ಸಿಂಧ್ಯಾ ಸ್ಪರ್ಧಿಸುವ ಸಾಧ್ಯತೆ ಇದೆ. ಒಂದು ವೇಳೆ ಅವರು ಕಣಕ್ಕಿಳಿದಲ್ಲಿ, ಇದೇ ಮೊದಲ ಬಾರಿಗೆ ಆರ್ ಅಶೋಕ್ ತೀವ್ರ ಪೈಪೋಟಿಯೊಂದಿಗೆ ಚುನಾವಣೆ ಎದುರಿಸಲಿದ್ದಾರೆ.
ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಸಿಂಧ್ಯಾ ಅವರನ್ನ ಅಭ್ಯರ್ಥಿಯಾಗಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಿಡಬ್ಲ್ಯೂಸಿ ಸಭೆ ವೇಳೆ ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠರು ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷದ ಕಳಪೆ ಸಾಧನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಕೆಪಿಸಿಸಿ ಅದ್ಯಕ್ಷರು, ರಾಜ್ಯ ಉಸ್ತುವಾರಿ ನಾಯಕರು ಹಾಗೂ ವಿಪಕ್ಷ ನಾಯಕರು ಹೊಸ ಅಭ್ಯರ್ಥಿ ಹುಡುಕಾಟಕ್ಕೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಸಿಂಧ್ಯಾ ಅವರ ಹೆಸರನ್ನು ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದು, ಸಿಂಧ್ಯ ರನ್ನು ಅಖಾಡಕ್ಕಿಳಿಸುವ ಸಲಹೆ ನೀಡಿದ್ದರೆಂದು ತಿಳಿದುಬಂದಿದೆ. ಅದರಂತೆ, ಸಿಂಧ್ಯಾ ಅವರೇ ಅಶೋಕ್ ಎದುರು ಸ್ಪರ್ಧಾಳುವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ವೇಳೆ ಈ ಘೋಷಣೆ ಹೊರಬೀಳುವ ಸಾದ್ಯತೆ ಇದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿ ಎರಡು ಸೀಟು ತರಲಿ; ಎಚ್ಡಿಕೆ ಸವಾಲು
1998ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಸತತ ಗೆಲುವು ದಾಖಲಿಸುತ್ತಿರುವ ಅಶೋಕ್, ಎಲ್ಲ ಪಕ್ಷಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಈ ಕಾರಣದಿಂದಲೇ ಅವರಿಗೆ ಗೆಲುವು ಸಿಗುತ್ತಿತ್ತು ಎನ್ನುವುದು ಅವರನ್ನು ಬಲ್ಲವರ ಮಾತು. ಆದರೆ, ಈ ಬಾರಿ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲೇಬೇಕೆನ್ನುವ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಯತ್ನ ಮಾಡುತ್ತಿದೆ. ತೀವ್ರ ಪೈಪೋಟಿವೊಡ್ಡುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ.