- ಸ್ಮೃತಿ ಇರಾನಿ ಈಗ ಎಲ್ಲಿದ್ದಾರೆ ಎಂದ ಕಾಂಗ್ರೆಸ್
- ಇಂದೋರ್ನಲ್ಲಿ ಕೈಲಾಶ್ ವಿವಾದಾತ್ಮಕ ಹೇಳಿಕೆ
“ಕೆಟ್ಟ ಬಟ್ಟೆ ಧರಿಸುವ ಯುವತಿಯರು ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಸ್ತ್ರೀ ವಿರೋಧಿ ಹೇಳಿಕೆ ನೀಡಿದ್ದಾರೆ.
ಸ್ತ್ರೀ ವಿರೋಧಿ ಧೋರಣೆ ತಾಳುವುದು ಮತ್ತು ಭಾರತೀಯ ಮಹಿಳೆಯರನ್ನು ಅಪಮಾನಿಸುವುದು ಬಿಜೆಪಿ ನಾಯಕರಿಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ಕೋಲಾರದ ಸಂಸದ ಮುನಿಸ್ವಾಮಿ, ಹಣೆಗೆ ಬೊಟ್ಟು ಇಡದ ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸಿದ್ದರು.
ಯುವತಿಯರ ಇತ್ತೀಚಿನ ಉಡುಪುಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕೈಲಾಶ್ ವಿಜಯವರ್ಗಿಯ, “ಈಗಿನ ಕಾಲದ ಹುಡುಗಿಯರು ಕೆಟ್ಟ ಬಟ್ಟೆಗಳನ್ನು ಹಾಕಿಕೊಂಡರೆ, ರಾಮಾಯಣದಲ್ಲಿ ಬರುವ ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.
ಹನುಮಾನ್ ಮತ್ತು ಮಹಾವೀರ ಜಯಂತಿಯಂದು ಇಂದೋರ್ನಲ್ಲಿ ಮಾತನಾಡಿದ ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ನಾನು ರಾತ್ರಿ ಹೊತ್ತು ಹೊರಗೆ ಬಂದಾಗ ಯುವ ಜನತೆ ಕುಡಿಯುವುದನ್ನು ನೋಡುತ್ತೇನೆ. ತಕ್ಷಣಕ್ಕೆ ಅವರ ಕಪಾಳಕ್ಕೆ ಎರಡು ಬಿಡಬೇಕು ಎನಿಸುತ್ತದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ದ್ವೇಷ ಭಾಷಣ | ಎಫ್ಐಆರ್ ದಾಖಲಾಗಿ ನಾಲ್ಕು ದಿನ ಕಳೆದರೂ ಪತ್ತೆಯಾಗದ ಕಾಜಲ್ ಹಿಂದೂಸ್ಥಾನಿ
“ಮಹಿಳೆಯನ್ನು ನಾವು ದೇವತೆ ಎಂದು ಭಾವಿಸುತ್ತೇವೆ. ಆದರೆ, ಈಗಿನ ಕಾಲದ ಹುಡುಗಿಯರಲ್ಲಿ ಮಹಿಳೆಯರು ಎನ್ನುವ ಯಾವ ಲಕ್ಷಣವೂ ಇಲ್ಲ. ಕೆಟ್ಟ ಬಟ್ಟೆ ಧರಿಸಿ ಥೇಟ್ ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ದೇವರು ನಿಮಗೆ ಒಳ್ಳೆಯ ದೇಹ ಕೊಟ್ಟಿದ್ದಾನೆ. ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ. ನನಗಂತೂ ಇದರ ಬಗ್ಗೆ ಚಿಂತೆಯಾಗಿದೆ” ಎಂದಿದ್ದಾರೆ.
ಬಿಜೆಪಿ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, “ಹುಡುಗಿಯರು ಕೆಟ್ಟದಾಗಿ ಬಟ್ಟೆ ತೊಡುತ್ತಾರೆ ಎನ್ನುವ ಮೂಲಕ ಬಿಜೆಪಿ ನಾಯಕ ಕೈಲಾಶ್, ಶೂರ್ಪನಖಿಗೆ ಹೋಲಿಸಿದ್ದಾರೆ. ಇದು ಈ ದೇಶದ ಪ್ರತಿಯೊಬ್ಬ ಮಹಿಳೆಗೂ ಮಾಡಿದ ಅಪಮಾನ” ಎಂದು ಟ್ವೀಟ್ ಮಾಡಿದ್ದಾರೆ.
“ಈಗ ಸ್ಮೃತಿ ಇರಾನಿ ಎಲ್ಲಿದ್ದಾರೆ? ಬಿಜೆಪಿ ನಾಯಕನ ಹೇಳಿಕೆಗೆ ಅವರು ಆಕ್ಷೇಪ ವ್ಯಕ್ತಪಡಿಸುವರೇ ಅಥವಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುವ ಅಂಶಗಳಿಗಾಗಿ ಹುಡುಕಾಟ ನಡೆಸುವರೇ” ಎಂದು ವ್ಯಂಗ್ಯವಾಡಿದ್ದಾರೆ.
ಶೂರ್ಪನಖಿ
ರಾಮಾಯಣ ಮಹಾಕಾವ್ಯದಲ್ಲಿ ಬರುವ ಪಾತ್ರವೊಂದರ ಹೆಸರು ಶೂರ್ಪನಖಿ. ಈಕೆ ಲಂಕಾ ರಾಜ ರಾವಣನ ಸಹೋದರಿ. ರಾಮನ ಸಹೋದರ ಲಕ್ಷ್ಮಣನನ್ನು ಮೋಹಿಸಿದ ಕಾರಣಕ್ಕೆ ಶೂರ್ಪನಖಿಯ ಮೂಗನ್ನು ಕುಯ್ಯಲಾಗುತ್ತದೆ.