- ಕಳೆದ ವರ್ಷ ಕರ್ನಾಟಕದಲ್ಲಿ ಪ್ರಕರಣ ದಾಖಲು
- ನಾವು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದ ವಿಎಚ್ಪಿ
ಗುಜರಾತಿನ ಉನಾ ಪಟ್ಟಣದಲ್ಲಿ ಗಲಭೆಗೆ ಪ್ರಚೋದಿಸಿದ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ಥಾನಿ ವಿರುದ್ಧ ಎಫ್ಐಆರ್ ದಾಖಲಿಸಿ ನಾಲ್ಕು ದಿನಗಳು ಕಳೆದಿವೆ. ಆದರೆ, ಇನ್ನೂ ಅವರ ಬಂಧನವಾಗಿಲ್ಲ.
ಮಾರ್ಚ್ 30ರಂದು ರಾಮ ನವಮಿಯಂದು ನಡೆದ ವಿಶ್ವ ಹಿಂದೂ ಪರಿಷತ್ ರ್ಯಾಲಿಯಲ್ಲಿ ಕಾಜಲ್ ಹಿಂದೂಸ್ಥಾನಿ ದ್ವೇಷ ಭಾಷಣ ಮಾಡಿದ್ದರು. ಇದರ ಪರಿಣಾಮ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ಉನಾ ಪೊಲೀಸರು ಸುಮಾರು 75 ಗಲಭೆಕೋರರ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಿದ್ದರು. ಏಪ್ರಿಲ್ 2ರಂದು ಕಾಜಲ್ ಹಿಂದೂಸ್ತಾನಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸಲಾಗಿತ್ತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉನಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎನ್ಕೆ ಗೋಸ್ವಾಮಿ, “ಕೋಮು ಹಿಂಸಾಚಾರ ಮತ್ತು ಗಲಭೆಗೆ ಪ್ರಚೋದಿಸಿದ ಆರೋಪದ ಮೇಲೆ ಕಾಜಲ್ ಹಿಂದೂಸ್ಥಾನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಕಾಜಲ್ ಹಿಂದೂಸ್ಥಾನಿ ಅವರು ಇನ್ನೂ ಪತ್ತೆಯಾಗಿಲ್ಲ. ಆಕೆಯ ನಿವಾಸದಲ್ಲೂ ಹುಡುಕಾಟ ನಡೆಸಿದ್ದೇವೆ” ಎಂದು ಗಿರ್ ಸೋಮನಾಥ್ ಜಿಲ್ಲಾ ಉಸ್ತುವಾರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಪಾಲ್ ಶೇಷ್ಮಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮ; ಜನರನ್ನು ಕರೆತರಲು ₹3.90 ಕೋಟಿ ಖರ್ಚು!
“ಭಾನುವಾರ ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿದಾಗ ದೆಹಲಿ ಇಲ್ಲವೇ ನೋಯ್ಡಾದಲ್ಲಿದ್ದರು. ನಾವು ಅವರನ್ನು ಹುಡುಕಲು ಜಾಮ್ನಗರದ ನಿವಾಸಕ್ಕೆ ಹೋಗಿದ್ದೆವು” ಎಂದು ತಿಳಿಸಿದ್ದಾರೆ.
ಕಾಜಲ್ ಹಿಂದೂಸ್ಥಾನಿ ರಾಜಸ್ಥಾನದ ಮೂಲದವರು, ಅವರ ಮೊದಲ ಹೆಸರು ಕಾಜಲ್ ತ್ರಿವೇದಿ. ಅವರು ಎರಡು ದಶಕಗಳ ಹಿಂದೆ ಜಾಮ್ನಗರದ ಉದ್ಯಮಿ ಜ್ವಲಂತ್ ಶಿಂಗಾಲ ಅವರನ್ನು ವಿವಾಹವಾಗಿದ್ದರು. ಕಾಜಲ್ ಅವರು ಇತ್ತೀಚಿನ ಕೆಲ ವರ್ಷಗಳಿಂದ ಬಲಪಂಥೀಯ ಕಾರ್ಯಕರ್ತರೆಂದು ಗುರುತಿಸಿಕೊಂಡಿದ್ದರು.
2015-16 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಕಾಜಲ್ ಹಿಂದೂಸ್ಥಾನಿ ಯೂಟ್ಯೂಬ್ ಇತ್ಯಾದಿಗಳಲ್ಲಿ ತಮ್ಮ ವಿಡಿಯೋ ವೀಕ್ಷಣೆಗಳನ್ನು ಹೆಚ್ಚಿಸಿಕೊಂಡಿದ್ದರು. ಕ್ರಮೇಣ, ವಿಎಚ್ಪಿ ತನ್ನ ಕಾರ್ಯಕ್ರಮಗಳಿಗೆ ಕಾಜಲ್ ಅವರನ್ನು ಆಹ್ವಾನಿಸಿದೆ.
ಕಾಜಲ್ ಹಿಂದೂಸ್ಥಾನಿ ಅವರ ವಿರುದ್ಧ ಎಫ್ಐಆರ್ ದಾಖಲಾದ ಬಳಿಕ ವಿಎಚ್ಪಿ ಅವರಿಂದ ದೂರ ಸರಿದಿದೆ. ರಾಜ್ಯ ವಕ್ತಾರ ಹಿತೇಂದ್ರ ರಜಪೂತ್ ಮಾತನಾಡಿ, “ರಾಮನವಮಿ ಸಭೆಗೆ ಸಂಘಟನೆಯಿಂದ ಆಹ್ವಾನಿಸಿಲ್ಲ” ಎಂದು ಹೇಳಿದ್ದಾರೆ.
ಕಾಜಲ್ ಹಿಂದೂಸ್ಥಾನಿ ವಿರುದ್ಧ ಇಂತಹದ್ದೇ ಪ್ರಕರಣ 2022ರಲ್ಲಿ ಕರ್ನಾಟಕದ ಉಡುಪಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆಪಾದಿತ ಗಲಭೆಕೋರರ ವಿರುದ್ಧ ಐಪಿಸಿ ಸೆಕ್ಷನ್ 323, 427, 143, 147, 148 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.