ನಮ್ಮ ಸಚಿವರು | ಹೈಕಮಾಂಡ್‌ ಆಪ್ತ ಬೋಸರಾಜು

Date:

ಬೋಸರಾಜು 1999 ಮತ್ತು ನಂತರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಧರಂಸಿಂಗ್ ಅವರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಂಡು ರಾಜ್ಯ ರಾಜಕೀಯದಲ್ಲಿ ಪ್ರಭಾವಿ ಎನಿಸಿಕೊಂಡರು. ತಮ್ಮ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಜಾರಿಗೆಗೊಳಿಸಿ, ಜನರ ವಿಶ್ವಾಸ ಗಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಚ್ಚರಿಯ ರೀತಿಯಲ್ಲಿ ಸಚಿವರಾದವರು ಮಾಜಿ ಶಾಸಕ ಎನ್‌.ಎಸ್‌ ಬೋಸರಾಜು. ಶಾಸಕರೂ ಅಲ್ಲದ, ವಿಧಾನ ಪರಿಷತ್ ಸದಸ್ಯರೂ ಅಲ್ಲದ ಬೋಸರಾಜುಗೆ ಮಂತ್ರಿಗಿರಿಯ ಜಾಕ್‌ಪಾಟ್ ಹೊಡೆದಿದೆ. ಅವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ ಬೋಸರಾಜು, ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ಆಂಧ್ರದಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜೀನೂರಿಗೆ ವಲಸೆ ಬಂದು ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡಿದ್ದರು. ಕೋಳಿ ಸಾಕಾಣಿಕೆಯನ್ನು ಬೃಹತ್ ಪ್ರಮಾಣದ ಉದ್ಯಮವಾಗಿ ಮಾಡಿ, ಉದ್ಯಮಿಯಾದರು. ಅದೇ ಹೊತ್ತಿನಲ್ಲಿ ಕವಿತಾಳ ರಾಜಶೇಖರಪ್ಪ ಸಂಗಡ 1971ರಲ್ಲಿ ಕಾಂಗ್ರೆಸ್‌ ಸೇರಿ, ರಾಜಕಾರಣಿಯಾದರು.

1980ರ ದಶಕದಲ್ಲಿ ರಾಯಚೂರಿನಲ್ಲಿ ಕಾಂಗ್ರೆಸ್‌ನ ಪ್ರಬಲ ನಾಯಕರಾಗಿದ್ದ ಅಂದಿನ ಸಚಿವ ಸುಧೀಂದ್ರರಾವ್ ಕಸ್ಬೆ ಮತ್ತು ಅಂದಿನ ಕೊಪ್ಪಳ ಸಂಸದ ಎಚ್.ಜಿ ರಾಮುಲು ಅವರ ನಿಕಟವರ್ತಿಯಾಗಿ, ರಾಯಚೂರಿನಲ್ಲಿ ರಾಜಕೀಯವಾಗಿ ಬೆಳೆದರು. 1985ರಲ್ಲಿ ಮಾನ್ವಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಅವರು, ಜನತಾ ಪಕ್ಷದ ತಿಮ್ಮನಗೌಡ ಅನ್ವರಿ ವಿರುದ್ಧ ಸೋಲುಂಡರು. ಬಳಿಕ 15 ವರ್ಷಗಳ ಕಾಲ ಚುನಾವಣೆಗಳಿಂದ ದೂರ ಉಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಸ್‌ ಬಂಗಾರಪ್ಪ ಕಾಲದಲ್ಲಿ ತುಂಗಭದ್ರಾ ಎಡದಂಡೆ ನಾಲೆ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಪರಿಣಾಮ, ಗಣೇಕಲ್ ಬಳಿ 7 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣವಾಯಿತು. ಬಳಿಕ ಅವರು ತುಂಗಭದ್ರಾ ಕಾಡಾ ಅಧ್ಯಕ್ಷರಾಗಿಯೂ ನೇಮಕಗೊಂಡರು.

1999ರಲ್ಲಿ ಮತ್ತೆ ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಜೊತೆಗೆ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಅಧ್ಯಕ್ಷರೂ ಆದರು. 1999 ಮತ್ತು ನಂತರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಧರಂಸಿಂಗ್ ಅವರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಂಡು ರಾಜ್ಯ ರಾಜಕೀಯದಲ್ಲಿ ಪ್ರಭಾವಿ ಎನಿಸಿಕೊಂಡರು. ತಮ್ಮ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಜನರ ವಿಶ್ವಾಸ ಗಳಿಸಿದರು. 2004ರ ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆದ್ದರು.

ಆಗ, ಅತಂತ್ರ ವಿಧಾನಸಭೆ ಎದುರಾಗಿದ್ದರಿಂದಾಗಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗಿತ್ತು. ಧರಂಸಿಂಗ್ ಮುಖ್ಯಮಂತ್ರಿಯಾದರು. ಅವರ ಸಂಪುಟದಲ್ಲಿ ಬೋಸರಾಜುಗೆ ಮಂತ್ರಿಯಾಗುವ ಸಾಧ್ಯತೆ ಇತ್ತು. ಆದರೆ, ಕೆಲವು ಕಾರಣಗಳಿಂದಾಗಿ ಅದು ಕೈತಪ್ಪಿತು. ಬಳಿಕ, ಬೋಸರಾಜು ಅವರನ್ನು ಧರಂಸಿಂಗ್‌ ಅವರು ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ, 2008ರಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರ ಎಸ್‌ಟಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಪರಿಣಾಮ, ಬೋಸರಾಜು ಕ್ಷೇತ್ರ ತೊರೆಯಬೇಕಾಯಿತು. ಆದರೆ, ಕ್ಷೇತ್ರದ ರಾಜಕಾರಣದಿಂದ ದೂರ ಸರಿಯದ ಅವರು ತಮ್ಮ ಆಪ್ತರನ್ನು ಕಣಕ್ಕಿಳಿಸಿ ಸತತ ಎಡು ಬಾರಿ ಗೆಲ್ಲಿಸಿಕೊಂಡರು. ಬೋಸರಾಜು ಅವರ ಆಪ್ತರಾಗಿದ್ದ ಹಂಪಯ್ಯ ನಾಯಕ ಮಾನ್ವಿ ಕ್ಷೇತ್ರದಲ್ಲಿ 2008 ಮತ್ತು 2013ರಲ್ಲಿ ಗೆಲುವು ಸಾಧಿಸಿದರು. ಮಾತ್ರವಲ್ಲದೆ, ಮಾನ್ವಿಯಲ್ಲಿ ಬೋಸರಾಜು ನಂತರ ಪ್ರಮುಖ ನಾಯಕನಾಗಿ ಬೆಳೆದರು. ಈಗ (2023) ಮೂರನೇ ಬಾರಿಗೆ ಹಂಪಯ್ಯ ನಾಯಕ ಶಾಸಕರಾಗಿದ್ದಾರೆ.

ಕ್ಷೇತ್ರ ತೊರೆದರೂ, ಇಂದಿಗೂ ಮಾನ್ವಿ ಕ್ಷೇತ್ರದ ಮೇಲೆ ಬೋಸರಾಜು ಹಿಡಿತ ಹೊಂದಿದ್ದಾರೆ. ಮಾತ್ರವಲ್ಲದೆ, ಅವಿಭಜಿತ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲೂ ಪ್ರಭಾವ ಬೆಳೆಸಿಕೊಂಡಿದ್ದಾರೆ. ಮಾನ್ವಿ, ರಾಯಚೂರು ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ಬೋಸರಾಜು ಪ್ರಾತ ಮಹ್ವತದ್ದಾಗಿದೆ ಎಂದು ಜಿಲ್ಲೆಯ ಜನರು ಹೇಳುತ್ತಾರೆ.

ಅವರ ರಾಜಕೀಯ ಬೆಳವಣಿಗೆ ಮತ್ತು ಪ್ರಭಾವವನ್ನು ಗಮನಿಸಿದ ಕಾಂಗ್ರೆಸ್‌ ಹೈಕಮಾಂಡ್‌, ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿತು. ಆ ಮೂಲಕ ಅವರು ಕಾಂಗ್ರೆಸ್‌ ವರಿಷ್ಠರ ನಿಕಟವರ್ತಿಯಾಗಿದ್ದರು. ಅವರನ್ನು 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಪ್ರಸ್ತುತ ಅವರು ಎಐಸಿಸಿ ಕಾರ್ಯದರ್ಶಿಯೂ ಆಗಿದ್ದಾರೆ. ಜೊತೆಗೆ, ಅವರಿಗೆ ತೆಲಂಗಾಣ ಕಾಂಗ್ರೆಸ್‌ನ ಉಸ್ತುವಾರಿಯನ್ನೂ ನೀಡಲಾಗಿದೆ. ಬೋಸರಾಜು ರಾಜು ಕ್ಷತ್ರಿಯ ಸಮುದಾಯಕ್ಕೆ ಸೇರಿದವರು. ಈ ಸಮುದಾಯ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಗಣನೀಯ ಪ್ರಭಾವ ಹೊಂದಿರುವುದರಿಂದ ಅವರನ್ನು ಎರಡೂ ರಾಜ್ಯಗಳಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುವ ಆಶಯ ಹೈಕಮಾಂಡ್‌ನದ್ದು.

ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ‘ಅಂದರಿಕಿ ಮಂಚಿವಾಳ್ಳು’ ರೆಡ್ಡಿ: ಉಗ್ರ ಪಕ್ಷ ನಿಷ್ಠೆ; ವಿರೋಧಿಗಳೊಂದಿಗೂ ‘ಸ್ನೇಹ’   

ಸದ್ಯ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಬೋಸರಾಜು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್ ನೀಡದಿದ್ದರೆ, ತಮ್ಮ ಮಗ ರವಿ ಬೋಸರಾಜು ಅವರಿಗಾದರೂ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಿದ್ದರು. ಅದಕ್ಕಾಗಿ, ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಗೂ ಮುನ್ನ ರಾಹುಲ್‌ ಗಾಂಧಿ ಅವರನ್ನೂ ಭೇಟಿ ಮಾಡಿದ್ದರು.

ಆದರೆ, ವಿಧಾನಸಭೆಯಲ್ಲಿ ಮುಸ್ಲಿಂ ಪ್ರತಿನಿಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದರಿಂದ, ಮುಸ್ಲಿಮರಿಗೆ ಅವಕಾಶ ನೀಡಬೇಕೆಂದು ಸಮುದಾಯದ ಮುಖಂಡರು ಒತ್ತಡ ಹೇರಿದ್ದರು. ಮುಸ್ಲಿಂ ಬಾಹುಳ್ಯವುಳ್ಳ ರಾಯಚೂರು ನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಒತ್ತಾಯಿಸಿದ್ದರು.

ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಹೈಕಮಾಂಡ್‌, ಬೋಸರಾಜು ಅವರಿಗೆ ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ, ಉನ್ನತ ಸ್ಥಾನ ನೀಡುವುದಾಗಿ’ ಭರವಸೆ ನೀಡಿತ್ತು. ಅದರಂತೆ, ಬೋಸರಾಜು ಅವರಿಗೆ ಮಂತ್ರಿಗಿರಿ ನೀಡಲಾಗಿದೆ.

ಆದರೆ, ಅವರ ಮಂತ್ರಿಗಿರಿ ಶಾಶ್ವತವಾಗಿ ಉಳಿಯಬೇಕಾದರೆ, ಇನ್ನು ಆರು ತಿಂಗಳೊಳಗೆ ಅವರು ಎಂಎಲ್‌ಎ ಅಥವಾ ಎಂಎಲ್‌ಸಿ ಆಗಬೇಕು. ಇಲ್ಲವಾದಲ್ಲಿ, ಅವರ ಮಂತ್ರಿಗಿರಿ ಕೈ ಜಾರುತ್ತದೆ. ಹೀಗಾಗಿ, ಶೀಘ್ರದಲ್ಲೇ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರನ್ನು ಎಂಎಲ್‌ಸಿ ಮಾಡುವ ಸಾಧ್ಯತೆ ಇದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...

ಬೀದರ್‌ | ಕೇಂದ್ರ ಸಚಿವ ಭಗವಂತ ಖೂಬಾಗೆ ಇದು ಕೊನೆ ಚುನಾವಣೆ: ಸಚಿವ ಈಶ್ವರ ಖಂಡ್ರೆ

ಕೇಂದ್ರ ಸಚಿವ ಭಗವಂತ ಖೂಬಾ ಅವರ ದುರಂಕಾರ, ಅಧಿಕಾರದ ದರ್ಪ ಹಾಗೂ...

ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ...

‘ಈಸ್ಟರ್ ಭಾನುವಾರ’ ಕೆಲಸದ ದಿನವೆಂದು ಘೋಷಣೆ; ಮಣಿಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಕ್ರೈಸ್ತರ ಪ್ರಮುಖ ಹಬ್ಬವಾದ 'ಈಸ್ಟರ್ ಭಾನುವಾರ'ವನ್ನು (ಮಾರ್ಚ್‌ 31) ಕೆಲಸದ ದಿನವಾಗಿ...