ಸರ್ಕಾರಿ ಅಧಿಕಾರಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವಾಗ ತನ್ನ ಒಂದು ಲಕ್ಷ ರೂ. ಮೌಲ್ಯದ ಮೊಬೈಲ್ ಜಲಾಶಯಕ್ಕೆ ಬಿದ್ದಿತೆಂದು ಡ್ಯಾಂನಿಂದ ಬರೋಬ್ಬರಿ 21 ಲಕ್ಷ ಲೀಟರ್ ನೀರನ್ನು ಪೋಲು ಮಾಡಿದ ಘಟನೆ ಛತ್ತೀಸ್ಗಢ ರಾಜ್ಯದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.
ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್ನ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ಖೇರ್ಕಟ್ಟಾ ಅಣೆಕಟ್ಟಿನಲ್ಲಿ ತನ್ನ ಸ್ನೇಹಿತರೊಂದಿಗೆ ಮೇ 21ರಂದು ರಜೆ ಕಳೆಯಲು ಬಂದಿದ್ದಾನೆ. ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಆತನ ₹ 1 ಲಕ್ಷ ಮೌಲ್ಯದ ಸ್ಮಾರ್ಟ್ಫೋನ್ ಜಲಾಶಯಕ್ಕೆ ಬಿದ್ದಿದೆ. ಮೊಬೈಲ್ 15 ಅಡಿ ಆಳದ ನೀರಿನಲ್ಲಿ ಬಿದ್ದಿದ್ದು, ಸ್ಥಳೀಯರು ಅದನ್ನು ದಿನವಿಡಿ ಹುಡುಕಿದರೂ ಸಿಗಲಿಲ್ಲ.
ಮೊಬೈಲ್ ಸಿಗದ ಕಾರಣಕ್ಕೆ ರಾಜೇಶ್ ವಿಶ್ವಾಸ್ ನಾಲ್ಕು ದಿನಗಳ ಕಾಲ ನಿರಂತರವಾಗಿ ಎರಡು 30 ಎಚ್ಪಿ ಡೀಸೆಲ್ ಪಂಪ್ಗಳನ್ನು ಬಳಸಿ 21 ಲಕ್ಷ ಲೀಟರ್ ನೀರನ್ನು ಹೊರ ಹಾಕಿದ್ದಾರೆ. ಈತ ವ್ಯರ್ಥ ಮಾಡಿದ ನೀರು ಅಂದಾಜು 1500 ಎಕರೆ ಕೃಷಿ ಭೂಮಿಗೆ ಆಧಾರವಾಗುತ್ತಿತ್ತು. ಆದರೆ ಅಧಿಕಾರಿಯ ಮೊಂಡುತನಕ್ಕೆ ಸಂಪೂರ್ಣವಾಗಿ ನೀರು ಪೋಲಾಗಿದೆ. ಇಷ್ಟೆಲ್ಲಾ ಸಾಹಸ ಮಾಡಿದ ನಂತರ ಅಧಿಕಾರಿಗೆ ಕೊನೆಗೂ ಮೊಬೈಲ್ ಸಿಕ್ಕಿದೆ.
ಈ ಸುದ್ದಿ ಓದಿದ್ದೀರಾ? ಗುಜರಾತ್ | ಬಿಜೆಪಿ ವಿರುದ್ಧ ಜನಮಂಚ್; ಜನರ ಬಳಿ ಕಾಂಗ್ರೆಸ್ ನಡಿಗೆ
ಈ ಘಟನೆ ಬೆಳಕಿಗೆ ಬರುತ್ತಿದಂತೆಯೇ ಜಿಲ್ಲಾಧಿಕಾರಿ ಪ್ರಿಯಾಂಕ್ ಶುಕ್ಲಾ ದರ್ಪದ ಅಧಿಕಾರಿಯನ್ನು ಅಮಾನತುಗೊಳಿಸಿ ಜಲ ಸಂಪನ್ಮೂಲ ಇಲಾಖೆಯ ಎಸ್ಡಿಓಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. 24 ಗಂಟೆಯ ಒಳಗಾಗಿ ನೋಟಿಸ್ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.
ತನ್ನ ಮೊಬೈಲ್ನಲ್ಲಿ ಮುಖ್ಯವಾದ ಅಗತ್ಯ ಮಾಹಿತಿ ಇದ್ದ ಕಾರಣ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಆಹಾರ ನಿರೀಕ್ಷಕ ರಾಜೇಶ್ ಬಿಸ್ವಾಸ್ ನೀರು ವ್ಯರ್ಥ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾನೆ.
ಜಲಸಂಪನ್ಮೂಲ ಇಲಾಖೆಯ ಉಪ ಅಧಿಕಾರಿ ರಾಮ್ ಲಾಲ್ ಧಿವರ್ ಪ್ರಕಾರ, ಐದು ಅಡಿ ಆಳದವರೆಗೆ ನೀರು ಹರಿಸಲು ಮೌಖಿಕ ಅನುಮತಿ ನೀಡಲಾಗಿದೆ. ಆದರೆ, ಇಲ್ಲಿಯವರೆಗೆ 10 ಅಡಿಗೂ ಹೆಚ್ಚು ನೀರು ಕಡಿಮೆಯಾಗಿದೆ. ಅಧಿಕಾರಿಗಳು ನೀರಾವರಿಯ ಮೇಲಿನ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ ಮತ್ತು ಪೋಲಾದ ನೀರನ್ನು ಸರಿದೂಗಿಸಲು ಕ್ರಮಗಳನ್ನು ಜರುಗಿಸುತ್ತಿದ್ದಾರೆ.