- ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದ ಸಿಬಿಐ
- ಪಂಚಾಯತ್ ಚುನಾವಣೆಯ ನಂತರ ವಿಚಾರಣೆಗೆ ಹಾಜರು ಎಂದ ಅಭಿಷೇಕ್
ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ನೀಡಿದ್ದು ಜೂನ್ 13 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ಶುಕ್ರವಾರ (ಜೂನ್ 9) ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲೆಗಳ ಸಿಬ್ಬಂದಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಇ.ಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಭಿಷೇಕ್ ಅವರನ್ನು ಪ್ರಶ್ನಿಸಲು ಇ.ಡಿ ಮುಂದಾಗಿದೆ.
ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಅವರನ್ನು ಕಲ್ಲಿದ್ದಲು ಕಳವು ಪ್ರಕರಣದಲ್ಲಿ ಇ.ಡಿ ಗುರುವಾರ 4 ತಾಸು ವಿಚಾರಣೆಗೆ ಒಳಪಡಿಸಿತ್ತು. ಇದರ ಬೆನ್ನಲ್ಲೇ ಅಭಿಷೇಕ್ ಅವರಿಗೆ ಇ.ಡಿ ಗುರುವಾರ ಸಮನ್ಸ್ ನೀಡಿದೆ.
“ಅಭಿಷೇಕ್ ಅವರನ್ನು ಜೂನ್ 13 ರಂದು ಬೆಳಿಗ್ಗೆ 11 ಗಂಟೆಗೆ ಇ.ಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ” ಎಂದು ಇ.ಡಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
ಕೋಲ್ಕತ್ತದ ದಕ್ಷಿಣ ಭಾಗದಲ್ಲಿರುವ ಹರೀಶ್ ಮುಖರ್ಜಿ ರಸ್ತೆಯಲ್ಲಿ ಇರುವ ಅಭಿಷೇಕ್ ಬ್ಯಾನರ್ಜಿ ಇರುವ ಶಾಂತಿನಿಕೇತನ ನಿವಾಸಕ್ಕೆ ತೆರಳಿ ಸಮನ್ಸ್ ನೀಡಲಾಯಿತು ಎಂದು ಇ.ಡಿ ಅಧಿಕಾರಿ ಹೇಳಿದರು.
‘ವಿಚಾರಣೆಗೆ ಹಾಜರಾಗುವುದಿಲ್ಲ’
ರಾಜ್ಯದಲ್ಲಿ ಪಂಚಾಯತ್ ಚುನಾವಣೆ ಹಿನ್ನೆಲೆ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಪರ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಾಗಿರುವ ಕಾರಣ ಜೂನ್ 13ರ ಇ.ಡಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅಭಿಷೇಕ್ ಶುಕ್ರವಾರ (ಜೂನ್ 9) ಹೇಳಿದ್ದಾರೆ.
ಪಂಚಾಯತಿ ಚುನಾವಣೆಯ ನಂತರ ಇ.ಡಿ ವಿಚಾರಣೆಗೆ ಹಾಜರಾಗುವುದಾಗಿ ಅಭಿಷೇಕ್ ಸುದ್ದಿಗಾರರಿಗೆ ತಿಳಿಸಿದರು.
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯು ಜುಲೈ 8ಕ್ಕೆ ನಿಗದಿಯಾಗಿದೆ.
ಅಭಿಷೇಕ್ ಬ್ಯಾನರ್ಜಿ ಈ ಕುರಿತು ಹೇಳಿಕೆ ನೀಡಿದ್ದಾರೆ. “ಜೂನ್ 13 ರಂದು ಇ.ಡಿ ವಿಚಾರಣೆಗೆ ನಾನು ಹಾಜರಾಗುವುದಿಲ್ಲ. ನಿರ್ಣಾಯಕ ಪಂಚಾಯತ್ ಚುನಾವಣೆ ಜುಲೈ 9 ರ ಹೊತ್ತಿಗೆ ಚುನಾವಣೆ ಕೊನೆಗೊಳ್ಳಲಿದೆ. ಬಳಿಕ ನಾನು ಯಾವ ಸಮಯವಾದರೂ ವಿಚಾರಣೆ ಎದುರಿಸಲು ಸಿದ್ಧ” ಎಂದು ಹೇಳಿದ್ದಾರೆ.
ಅಭಿಷೇಕ್ ಅವರು ಇ.ಡಿ ತಮಗೆ ಸಮನ್ಸ್ ನೀಡಿರುವುದು ಬಿಜೆಪಿ ಉದ್ದೇಶಪೂರ್ವಕ ಕೃತ್ಯ ಎಂದು ಕರೆದಿದ್ದಾರೆ. ತಮ್ಮನ್ನು ಪಂಚಾಯತ್ ಚುನಾವಣೆಯ ಪ್ರಚಾರದಿಂದ ಹೊರಗಿಡಲು ಬಿಜೆಪಿ ಈ ತಂತ್ರ ರೂಪಿಸಿದೆ ಎಂದು ಅಭಿಷೇಕ್ ಆರೋಪಿಸಿದರು.
ಈ ಸುದ್ದಿ ಒದಿದ್ದೀರಾ? ಒಡಿಶಾ | ದುರ್ಗ್-ಪುರಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ; ತಪ್ಪಿದ ಪ್ರಾಣಹಾನಿ
ಪ್ರಾಥಮಿಕ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಮೇ 20 ರಂದು ತಮ್ಮ ಕೋಲ್ಕತ್ತ ಕಚೇರಿಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಸುಮಾರು 9 ತಾಸುಗಳ ಕಾಲ ವಿಚಾರಣೆ ನಡೆಸಿದ್ದರು.
ಕಳೆದ ವರ್ಷ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್ಎಸ್ಸಿ) ಮತ್ತು ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯಿಂದ 2014 ಮತ್ತು 2021ರ ನಡುವೆ ಬೋಧಕೇತರ ಸಿಬ್ಬಂದಿ (ಗುಂಪು ಸಿ ಮತ್ತು ಡಿ) ಮತ್ತು ಬೋಧಕ ಸಿಬ್ಬಂದಿಯ ನೇಮಕಾತಿ ಪರೀಕ್ಷೆ ನಡೆದಿತ್ತು.
ಪರೀಕ್ಷೆಯಲ್ಲಿ ಅನುತ್ತೀರ್ಣದ ನಂತರ ಉದ್ಯೋಗ ಪಡೆಯಲು ಅಭ್ಯರ್ಥಿಗಳಿಂದ ₹5 ಲಕ್ಷದಿಂದ ₹15 ಲಕ್ಷದವರೆಗೆ ಲಂಡ ಪಡೆಯಲಾಗಿದೆ ಎಂದು ಆರೋಪಿಸಲಾಗಿತ್ತು. ಇದನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.