- ಟ್ವೀಟ್ ಮೂಲಕ ಜೈರಾಮ್ ರಮೇಶ್ ಟೀಕೆ
- 2016ರಲ್ಲಿ ₹2000 ಮುಖಬೆಲೆಯ ನೋಟು ಪರಿಚಯ
₹2000 ಮುಖಬೆಲೆಯ ನೋಟು ಚಲಾವಣೆಯನ್ನು ಹಿಂತೆಗೆದುಕೊಳ್ಳುವ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಕ್ರಮವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟೀಕಿಸಿದ್ದಾರೆ.
₹2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆಯಲು ಆರ್ಬಿಐ ನಿರ್ಧರಿಸಿದೆ. ಆದರೆ ಈ ನೋಟುಗಳು ಕಾನೂನಾತ್ಮಕವಾಗಿ ಮಾನ್ಯತೆ ಹೊಂದಿರುತ್ತವೆ ಎಂದು ಆರ್ಬಿಐ ಹೇಳಿದೆ.
ಈ ಬೆನ್ನಲ್ಲೇ, ಕೇಂದ್ರ ಸರ್ಕಾರವನ್ನು ಟೀಕಿಸಿರುವ ಜೈರಾಮ್ ರಮೇಶ್, “ಬ್ಯಾಂಕ್ನ ಈ ಕ್ರಮವು, ಮೊದಲು ಕಾರ್ಯನಿರ್ವಹಿಸಿ ನಂತರ ಯೋಚಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಶಿಷ್ಟ್ಯವೆಂದು ತೋರಿಸುತ್ತದೆ” ಎಂದು ರಮೇಶ್ ಲೇವಡಿ ಮಾಡಿದ್ದಾರೆ.
“ಮೊದಲು ಕೆಲಸ ನಂತರ ಯೋಚನೆ (ಎಫ್ಎಎಸ್ಟಿ) ನಮ್ಮ ಸ್ವಯಂ ಘೋಷಿತ ವಿಶ್ವಗುರುವಿನ (ಪ್ರಧಾನಿ ಮೋದಿ) ವೈಶಿಷ್ಟ್ಯವಾಗಿದೆ. 2016ರ ನವೆಂಬರ್ 8 ರಂದು ತುಘಲಕ್ ಶಾಸನದಂತೆ ಭಾರೀ ಅಬ್ಬರದೊಂದಿಗೆ ಪರಿಚಯಿಸಿದ ₹2000 ಮುಖಬೆಲೆಯ ನೋಟುಗಳನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ” ಎಂದು ಕುಟುಕಿದ್ದಾರೆ.
ಜೈರಾಮ್ ರಮೇಶ್ ಅವರಂತೆ ಕಾಂಗ್ರೆಸ್ನ ಇತರ ನಾಯಕರೂ ₹2000 ಮುಖಬೆಲೆಯ ನೋಟು ಹಿಂಪಡೆಯುವಿಕೆಯನ್ನು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜ್ಞಾನವಾಪಿ ಮಸೀದಿ ಪ್ರಕರಣ; ಶಿವಲಿಂಗದ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
“₹2000 ಮುಖಬೆಲೆಯ ನೋಟುಗಳ ಚಲಾವಣೆ ಹಿಂಪಡೆಯಲಾಗುತ್ತಿದೆ. ಈಗ ಅಸ್ತಿತ್ವದಲ್ಲಿರುವ ನೋಟುಗಳನ್ನು ನಾಗರಿಕರು ತಮ್ಮ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಬಹುದು” ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ನವೆಂಬರ್ 8 ರಂದು 500 ಮತ್ತು 1000 ಮುಖಬೆಲೆಯ ನೊಟುಗಳನ್ನು ಅಮಾನ್ಯೀಕರಣಗೊಳಿಸಿತ್ತು ಮತ್ತು ₹2000 ಮುಖಬೆಲೆಯ ನೋಟನ್ನು ಪರಿಚಯಿಸಿತ್ತು.