- ಜನರು ಏಕೆ ಈ ವಿಚಾರದಲ್ಲಿ ತಮ್ಮನ್ನು ತಾವು ನಿಗ್ರಹಿಸಿಕೊಳ್ಳಬಾರದು ಎಂದ ನ್ಯಾಯಪೀಠ
- ಮಾಜಿ ಪ್ರಧಾನಿಗಳ ಸೌಹಾರ್ದಯುತ ಭಾಷಣಗಳ ಬಗ್ಗೆ ತಿಳಿಸಿದ ನ್ಯಾಯಾಲಯ
ರಾಜಕೀಯ ಮತ್ತು ಧರ್ಮಗಳನ್ನು ಬೇರ್ಪಡಿಸಿದರೆ ಮತ್ತು ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮವನ್ನು ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣಗಳು ಕಡಿಮೆಯಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠವು, ದ್ವೇಷ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಲು ವಿಫಲವಾಗಿರುವ ವಿವಿಧ ರಾಜ್ಯಗಳ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದ ಕ್ಷಣ, ದ್ವೇಷ ಕೊನೆಗೊಳ್ಳುತ್ತದೆ. ರಾಜಕಾರಣಿಗಳು ಧರ್ಮವನ್ನು ಬಳಸುವುದನ್ನು ನಿಲ್ಲಿಸಿದಾಗ, ಇದೆಲ್ಲವೂ ನಿಲ್ಲುತ್ತದೆ ”ಎಂದು ಪೀಠ ಹೇಳಿದೆ.
“ಜನರು ಏಕೆ ಈ ವಿಚಾರದಲ್ಲಿ ತಮ್ಮನ್ನು ತಾವು ನಿಗ್ರಹಿಸಿಕೊಳ್ಳಬಾರದು. ರಾಜಕಾರಣಿಗಳು ಪ್ರತಿದಿನ ಇತರರನ್ನು ನಿಂದಿಸಲು ಟಿವಿ ಮತ್ತು ಸಾರ್ವಜನಿಕ ವೇದಿಕೆ ಸೇರಿದಂತೆ ಭಾಷಣಗಳನ್ನು ಮಾಡುತ್ತಿರುತ್ತಾರೆ. ಇತರ ನಾಗರಿಕರು ಅಥವಾ ಸಮುದಾಯಗಳನ್ನು ನಿಂದಿಸುವುದಿಲ್ಲ ಎಂದು ಭಾರತದ ಜನರು ಏಕೆ ಪ್ರತಿಜ್ಞೆ ತೆಗೆದುಕೊಳ್ಳಬಾರದು” ಎಂದು ನ್ಯಾಯಪೀಠದ ನೇತೃತ್ವದ ವಹಿಸಿದ್ದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಿರಣ್ ರಿಜಿಜು ಹೇಳಿಕೆ ವಿರುದ್ಧ ಸುಪ್ರೀಂಕೋರ್ಟ್, ಹೈಕೋರ್ಟ್ ವಕೀಲರಿಂದ ಖಂಡನೆ
ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳನ್ನೂ ಉಲ್ಲೇಖಿಸಿದ ನ್ಯಾಯಪೀಠ, ಇವರ ಭಾಷಣಗಳನ್ನು ಕೇಳಲು ಜನರು ದೂರದ ಊರುಗಳಿಂದ ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಂಡಕಾರುವಂತಹ ಭಾಷಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿತು.
ಕೆಲವರು ದ್ವೇಷ ಭಾಷಣಗಳನ್ನು ಮಾಡುವ ಮೂಲಕ ಸಮಾಜದ ಶಾಂತಿ- ಸೌಹಾರ್ದತೆ ಕದಡಲು ಪ್ರಯತ್ನಿಸುತ್ತಿದ್ದಾರೆ. ಜನರು ಇಂಥವುಗಳಿಂದ ತಮ್ಮನ್ನು ತಾವು ನಿಗ್ರಹಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಏತನ್ಮಧ್ಯೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನಿರ್ದಿಷ್ಟ ಸಮುದಾಯದ ವಿರುದ್ಧ ಕೇರಳದಲ್ಲಿ ಮಾಡಿದ ಅವಹೇಳನಕಾರಿ ಭಾಷಣವನ್ನು ಪ್ರಸ್ತಾಪಿಸಿದರು. ಅರ್ಜಿದಾರರಾದ ಶಾಹೀನ್ ಅಬ್ದುಲ್ಲಾ ದ್ವೇಷ ಭಾಷಣಗಳ ಆಯ್ದ ಘಟನೆಗಳನ್ನು ನ್ಯಾಯಾಲಯಕ್ಕೆ ತೋರಿಸಿದ್ದಾರೆ ಎಂದು ತಮ್ಮ ವಾದವನ್ನು ಮಂಡಿಸಿದರು.