- ಭಾರತದ ವ್ಯಾಪ್ತಿಯ ಸಾಗರ ಸಮೀಪ ಚೀನಾ ನೌಕಾಪಡೆ ಹಡಗುಗಳ ಲಂಗರು
- 2047ರ ಹೊತ್ತಿಗೆ ನೌಕಾಪಡೆ ಆತ್ಮನಿರ್ಭರವಾಗಲಿದೆ ಎಂದ ನೌಕಾಸೇನೆ ಮುಖ್ಯಸ್ಥ
ಚೀನಾ ನೌಕಾಪಡೆ ಹಡಗುಗಳು ಭಾರತದ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ವಿಶಾಲ ಉಪಸ್ಥಿತಿ ಹೊಂದಿವೆ ಎಂದು ನೌಕಾಪಡೆಯ ಮುಖ್ಯಸ್ಥ ನೌಕಾಸೇನಾ ಮುಖ್ಯಸ್ಥ ಆರ್ ಹರಿಕುಮಾರ್ ಶನಿವಾರ (ಏಪ್ರಿಲ್ 29) ಹೇಳಿದ್ದಾರೆ.
ಕಡಲ ವಲಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಪ್ರದೇಶದಲ್ಲಿ ಚೀನಾ ನೌಕಾಪಡೆ ನಡೆಸುವ ಕಾರ್ಯಚಟುವಟಿಕೆಗಳು ಮತ್ತು ಇತರ ಬೆಳವಣಿಗಳ ಮೇಲೆ ಭಾರತ ತೀವ್ರ ನಿಗಾ ಇರಿಸಿದೆ ಎಂದು ಹರಿಕುಮಾರ್ ತಿಳಿಸಿದರು.
ಪಿಎಚ್ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಚಾಣಕ್ಯ ಹೆಸರಿನ ಸಂವಾದದಲ್ಲಿ ಚೀನಾ ಕುರಿತ ಪ್ರಶ್ನೆಯೊಂದಕ್ಕೆ ಹರಿಕುಮಾರ್ ಪ್ರತಿಕ್ರಿಯೆ ನೀಡಿದರು.
ಚೀನಾದ ನೌಕಾಪಡೆಯು ತನ್ನ ಹಡಗುಗಳನ್ನು ಪಾಕಿಸ್ತಾನ ಮತ್ತು ಇತರ ದೇಶಗಳ ಬಂದರುಗಳಲ್ಲಿ ಲಂಗರು ಹಾಕುತ್ತಿದೆ ಎಂದು ಭಾರತದ ನೌಕಾಪಡೆ ಗಮನಿಸಿದೆ. ಚೀನಾ ಮತ್ತು ಭಾರತದ ಹಡಗುಗಳ ನಡುವೆ ನಿತ್ಯ ಒಂದು ರೀತಿಯ ಪೈಪೋಟಿ ನಡೆಯುತ್ತಿದೆ. ಇದು ಸಂಘರ್ಷದ ಮಿತಿಗಿಂತ ಕಡಿಮೆ ಇದೆಯಾದರೂ ಯುದ್ಧದ ಸಾಧ್ಯತೆ ತಳ್ಳಿಹಾಕಲಾಗುವುದಿಲ್ಲ ಎಂದು ಹರಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಅಥವಾ ಚೀನಾ ನೌಕಾಪಡೆಯು ಆಧುನೀಕರಣಗೊಳ್ಳುತ್ತಿವೆ. ಇನ್ನು 10-15 ವರ್ಷಗಳಲ್ಲಿ ತನ್ನ ಸಾಮರ್ಥ್ಯ ವೃದ್ಧಿಗೆ ನೂತನ ಯುದ್ಧನೌಕೆಗಳನ್ನು ನೌಕಾಪಡೆಗೆ ಸೇರಿಸಲು ಎದುರು ನೋಡುತ್ತಿವೆ. ಅದರ ಭಾಗವಾಗಿ ಚೀನಾ ಹಲವು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಭಾರತದ ಭೂಪ್ರದೇಶದಲ್ಲಿ ಕಳೆದ ದಶಕದಲ್ಲಿ ನೇಮಿಸಿದೆ. ಮೂರನೇ ವಿಮಾನವಾಹಕ ನೌಕೆಯು ನಿರ್ಮಾಣ ಹಂತದಲ್ಲಿದೆ. ಚೀನಾದ ನೌಕಾಪಡೆಯು ಹೆಚ್ಚು ಸಾಮರ್ಥ್ಯದ ಯುದ್ಧನೌಕೆಗಳನ್ನು ರೂಪಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
“ನಾವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತೀವ್ರ ನಿಗಾ ಇರಿಸುತ್ತಿದ್ದೇವೆ. ಪ್ರದೇಶದಲ್ಲಿ ಯಾರಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎಂದು ತಿಳಿದು ಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಚೀನಾ ಹಡಗುಗಳ ಮೇಲೆ ದಿನಪೂರ್ತಿ ಭಾರತದ ನೌಕಾಪಡೆ ಮೇಲ್ವಿಚಾರಣೆ ನಡೆಸುತ್ತದೆ. ಇದಕ್ಕಾಗಿ ವಿಮಾನಗಳು, ಹಡಗುಗಳು, ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲಾಗುತ್ತದೆ” ಎಂದು ಅವರು ಮಾಹಿತಿ ನೀಡಿದರು.
“ಸದ್ಯ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮೂರರಿಂದ ಆರು ಚೀನಾದ ಯುದ್ಧನೌಕೆಗಳಿವೆ. ಅವುಗಳ ಮೇಲೂ ನಿಗಾ ಇರಿಸಲಾಗಿದೆ. ಎರಡರಿಂದ ನಾಲ್ಕು ಚೀನಾದ ಸಂಶೋಧನಾ ಹಡಗುಗಳು ಈ ಪ್ರದೇಶದಲ್ಲಿ ಯಾವಾಗಲೂ ಇರುತ್ತವೆ. ಇಲ್ಲಿ ಚೀನಾದ ಮೀನುಗಾರಿಕೆ ಹಡಗುಗಳ ಉಪಸ್ಥಿತಿಯೂ ಇದೆ” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದ್ವೇಷ ಭಾಷಣ ಮಾಡುವವರ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ: ಸುಪ್ರೀಂ ಕೋರ್ಟ್
ಚೀನಾ ಸಂಶೋಧನಾ ಹಡಗುಗಳ ಬಗ್ಗೆ ವಿವರಿಸಿದ ಅವರು, ಇವುಗಳು ಎಲೆಕ್ಟ್ರಾನಿಕ್ ಸಂಕೇತಗಳನ್ನು ಪತ್ತೆಹಚ್ಚಿ ಸಂಗ್ರಹಿಸುತ್ತವೆ. ಚೀನಾದ ನೌಕಾಪಡೆ ಇವುಗಳ ಜಾಡು ಹಿಡಿಯುತ್ತವೆ. ಭಾರತದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ಇದನ್ನು ಬಳಸಬಹುದು ಎಂದು ಹರಿಕುಮಾರ್ ಮಾಹಿತಿ ನೀಡಿದರು.
ಭಾರತದ ಸ್ವಾತಂತ್ರ್ಯದ 100ನೇ ವರ್ಷ ಗುರುತಿಸುವ 2027ರ ಹೊತ್ತಿಗೆ ಭಾರತದ ನೌಕಾಪಡೆಯು ಸಂಪೂರ್ಣ ಆತ್ಮನಿರ್ಭರ ಆಗಲಿದೆ ಎಂದು ಎಂದು ನೌಕಾಸೇನಾ ಮುಖ್ಯಸ್ಥ ಹರಿಕುಮಾರ್ ಹೇಳಿದರು.