- ಏಪ್ರಿಲ್ 13ಕ್ಕೆ ಸುದ್ದಿಗೋಷ್ಠಿ ಕರೆದಿರುವ ಸಚಿನ್ ಪೈಲಟ್
- ಜೈಪುರದಲ್ಲಿ ಪ್ರತಿಭಟನೆ ನಂತರ ದೆಹಲಿಗೆ ಪ್ರವಾಸ
ಕಾಂಗ್ರೆಸ್ ವರಿಷ್ಠರ ಎಚ್ಚರಿಕೆಯ ಸಂದೇಶದ ನಂತರ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ (ಏಪ್ರಿಲ್ 11) ಜೈಪುರದಲ್ಲಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿದರು.
ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ನಾಯಕತ್ವ ಎಚ್ಚರಿಸಿತ್ತು. ಆದರೆ ಈಗ ರಾಜಸ್ಥಾನ ಕಾಂಗ್ರೆಸ್ ಬಗ್ಗೆ ಅಸಮಾಧಾನಕ್ಕೆ ಅವರ ಅಭಿಪ್ರಾಯ ಕೇಳಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ.
ಈ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ರಾಜಸ್ಥಾನ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಚಿನ್ ಪೈಲಟ್ ಪ್ರತಿಭಟನೆ ನಡೆಸಿದ್ದಾರೆ.
ಅವರ ಪ್ರತಿಭಟನೆ ಬಗ್ಗೆ ಸೋಮವಾರ (ಏಪ್ರಿಲ್ 10) ಎಚ್ಚರಿಸಿದ್ದ ಕಾಂಗ್ರೆಸ್ ನಾಯಕತ್ವ ಮಂಗಳವಾರದ ಪ್ರತಿಭಟನೆ ವೇಳೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ವರ್ಷದ ಅಂತ್ಯದಲ್ಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಅವರ ವಿರುದ್ಧ ಯಾವುದೇ ಕ್ರಮ ತರವಲ್ಲ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಇತರ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಅವರ ಸಮಸ್ಯೆಯನ್ನೂ ಆಲಿಸಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ನಂತರ ದೆಹಲಿಗೆ ತೆರಳಿದ್ದಾರೆ. ಅವರು ಕಾಂಗ್ರೆಸ್ ನಾಯಕತ್ವದ ಜೊತೆಗೆ ಮಾತುಕತೆ ನಡೆಸಲಿದ್ಧಾರೆ.
ಇಷ್ಟು ದಿನ ತಣ್ಣಗಿದ್ದ ಸಚಿನ್ ಪೈಲಟ್ ಅವರು ಬುಧವಾರ (ಏಪ್ರಿಲ್12) ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆರ್ಎಸ್ಎಸ್ ಮೆರವಣಿಗೆ | ಅವಕಾಶ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂ
ಪೈಲಟ್ ಅವರು ತಮ್ಮ ಪ್ರತಿಭಟನೆಯಲ್ಲಿ ಬಿಜೆಪಿ ಭ್ರಷ್ಟಾಚಾರದ ವಿರುದ್ಧದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ವಿರುದ್ಧ ಹೋರಾಟ ಎನ್ನುವ ಭಾವವನ್ನೂ ಮೂಡಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಪೈಲಟ್ ಅವರು ಶಕ್ತಿ ಪ್ರದರ್ಶನ ಮಾಡಿಲ್ಲ. ನಿಷ್ಠ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಸಾಂಕೇತಿಕ ಪ್ರತಿಭಟನೆ ಮಾತ್ರ ನಡೆಸಿದರು.