- ರಾಜ್ಯ ವಿಧಾನಸಭೆಯ ಸವಲತ್ತುಗಳು ಮತ್ತು ನೀತಿ ಸಮಿತಿ ಶಾಸಕರಿಗೆ ಶೋಕಾಸ್ ನೋಟಿಸ್
- ಕುಕಿ ಸಮುದಾಯಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಕಲ್ಪಿಸುವಂತೆ ಶಾಸಕರ ಬೇಡಿಕೆ
ಮಣಿಪುರ ರಾಜ್ಯದಲ್ಲಿ ಒಂದು ಸಮುದಾಯಕ್ಕೆ ಪ್ರತ್ಯೇಕ ಆಡಳಿತ ಕಲ್ಪಿಸುವಂತೆ ಕೋರಿ 10 ಮಂದಿ ಶಾಸಕರಿಗೆ ರಾಜ್ಯ ಸರ್ಕಾರ ಗುರುವಾರ (ಜೂನ್ 8) ಶೋಕಾಸ್ ನೋಟಿಸ್ ನೀಡಿದೆ.
ಹಿಂಸಾಚಾರದ ಘಟನೆಗಳು ವರದಿಯಾದ ನಂತರ ಒಂದು ಸಮುದಾಯಕ್ಕೆ ಪ್ರತ್ಯೇಕ ಆಡಳಿತಕ್ಕಾಗಿ ಕುಕಿ-ಝೋಮಿ ಸಮುದಾಯದ 10 ಮಂದಿ ಶಾಸಕರು ಕೋರಿದ್ದಾರೆ.
ಈ ಬೇಡಿಕೆಯನ್ನು ಏಕೆ ಮುಂದಿಟ್ಟಿದ್ದೀರಿ ಎಂದು ಪ್ರಶ್ನಿಸಿ ಶೋಕಾಸ್ ನೋಟಿಸ್ ಅನ್ನು ರಾಜ್ಯ ವಿಧಾನಸಭೆಯ ಸವಲತ್ತುಗಳು ಮತ್ತು ನೀತಿ ಸಮಿತಿಯು ನೀಡಿದೆ. ಜೂನ್ 16ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಬೇಡಿಕೆ ಮುಂದಿಟ್ಟಿರುವ 10 ಮಂದಿ ಶಾಸಕರಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರು ಹಾಗೂ ಬಿರೇನ್ ಸಿಂಗ್ ಸರ್ಕಾರದ ಇಬ್ಬರು ಸಚಿವರೂ ಸೇರಿದ್ದಾರೆ.
ಭಾರತೀಯ ಸಂವಿಧಾನದಡಿ ಪ್ರತ್ಯೇಕ ಆಡಳಿತ ರಚಿಸಿ ತಮ್ಮ ಸಮುದಾಯದ ಜನರು ಶಾಂತಿಯುತವಾಗಿ ಮಣಿಪುರದ ಜನರ ಜೊತೆ ಬಾಳಲು ಅವಕಾಶ ಕಲ್ಪಿಸಬೇಕೆಂದು ಈ ಶಾಸಕರು ಕೇಂದ್ರ ಸರ್ಕಾರವನ್ನು ಕೋರಿದ್ದರು.
ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಕುರಿತು ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಸಹಜೀವನ ಸಂಗಾತಿಯನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ!
ಶೋಕಾಸ್ ನೋಟಿಸ್ ಅನ್ನು ಹಾಕ್ಹೋಲೆಟ್ ಕಿಪ್ಟೆನ್ (ಸ್ವತಂತ್ರ ಶಾಸಕ), ಕಿಮ್ನಿಯೋ ಹಾಕಿಪ್ ಹ್ಯಾಂಗ್ಶಿಂಗ್ (ಕೆಪಿಎ), ಎಲ್.ಎಂ.ಕೌಟೆ (ಬಿಜೆಪಿ), ಚಿನ್ಲುಂಗ್ಥಾಂಗ್ (ಕೆಪಿಎ), ನಮ್ಚಾ ಕಿಕಿಪ್ಗೆನ್ (ಬಿಜೆಪಿ), ನ್ಗುಂರ್ಸಂಗ್ಲೂರ್ ಸನತೆ (ಬಿಜೆಪಿ), ಲೆಟ್ಟಾವೊ ಹಾಕಿಪ್ (ಬಿಜೆಪಿ), ಲೆಟ್ಟಮಾಂಗ್ ಹಾಕಿಪ್ (ಬಿಜೆಪಿ), ಪಾವೊಲಿಯನ್ಲಾಲ್ ಹಾಕಿಪ್ (ಬಿಜೆಪಿ) ಮತ್ತು ವುಂಗ್ಜಗಿನ್ ವಾಲ್ಟೆ (ಬಿಜೆಪಿ) ಶಾಸಕರಿಗೆ ನೀಡಲಾಗಿದೆ.
ಈ ಶಾಸಕರುಗಳ ಪೈಕಿ ವುಂಗ್ಜಗಿನ್ ವಾಲ್ಟೆ ಅವರು ಮೇ 3 ರಂದು ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು.
ಮಣಿಪುರದಲ್ಲಿ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಮೇಟಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಇದು ಹಿಂಸಾರೂಪ ಪಡೆದಿದ್ದು ಅನೇಕ ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಹಿಂಸಾಚಾರ ತಡೆಗಟ್ಟಲು ಕೆಲವು ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.