- ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಕುಸ್ತಿಪಟುಗಳಿಗೆ ಬೆಂಬಲ
- ಜಂತರ್ ಮಂತರ್ನಲ್ಲಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ (ಏಪ್ರಿಲ್ 29) ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರನ್ನು ಸಂತೈಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಕುಸ್ತಿಪಟುಗಳನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದರು. ಮಹಿಳಾ ಕುಸ್ತಿಪಟುಗಳ ಮೂಲಕ ಪ್ರಕರಣ ದಾಖಲಾದರೂ ಅದರ ಪ್ರತಿಯನ್ನು ನೀಡದ ದೆಹಲಿ ಪೊಲೀಸರ ನಡೆಯನ್ನು ಪ್ರಿಯಾಂಕಾ ಅವರು ಖಂಡಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಕುಸ್ತಿಪಟುಗಳ ಅಹವಾಲು ಆಲಿಸಿ, ಅವರನ್ನು ತಬ್ಬಿ ಸಂತೈಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
“ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಗಂಭೀರ ಆರೋಪಗಳಿವೆ. ಅವರು ರಾಜೀನಾಮೆ ನೀಡಬೇಕಿತ್ತು. ಅವರನ್ನು ಸ್ಥಾನದಿಂದ ವಜಾಗೊಳಿಸಬೇಕಿತ್ತು. ಆದರೆ ಅವರು ಈಗಲೂ ಅಧಿಕಾರದ ಸ್ಥಾನದಲ್ಲಿದ್ದಾರೆ. ಬ್ರಿಜ್ ಭೂಷಣ್ ಜನರ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಪ್ರಿಯಾಂಕಾ ಗಾಂಧಿ ಅವರು ಜಂತರ್ ಮಂತರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಈ ವಿಷಯದಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ನಂಬಿಕೆ ಇಲ್ಲ. ಒಂದು ವೇಳೆ ಅವರಿಗೆ ಮಹಿಳಾ ಕುಸ್ತಿಪಟುಗಳ ಮೇಲೆ ಕಾಳಜಿ ಇದ್ದಿದ್ದರೆ ಈವರೆಗೂ ಬ್ರಿಜ್ ಭೂಷಣ್ ಅವರನ್ನು ಕರೆಸಿ ಮಾತನಾಡಿಲ್ಲ. ಕೇಂದ್ರ ಸರ್ಕಾರ ಬ್ರಿಜ್ ಭೂಷಣ್ ರನ್ನು ರಕ್ಷಿಸುತ್ತಿದೆ” ಎಂದು ಪ್ರಿಯಾಂಕಾ ಅವರು ದೂರಿದರು.
“ಈ ಮಹಿಳೆಯರು ಕುಸ್ತಿಯಲ್ಲಿ ಪದಕ ಗೆದ್ದಾಗ ಎಲ್ಲರೂ ಟ್ವೀಟ್ ಮೂಲಕ ಶುಭಾಶಯ ಕೋರಿದರು. ಆದರೆ ಇವರು ಬೀದಿಯಲ್ಲಿ ಕುಳಿತು ನಮ್ಮ ಮಾತು ಕೇಳಿ ಎಂದು ಹೇಳುತ್ತಿರುವಾಗ ಕಿವಿಗೊಡಲು ಯಾರೂ ತಯಾರಿಲ್ಲ. ಪ್ರಕರಣ ದಾಖಲಾಗಿದ್ದರೆ ಇವರಿಗೆ ಅದರ ಪ್ರತಿ ನೀಡಬೇಕಿತ್ತು. ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪ್ರಿಯಾಂಕಾ ಅವರು ಒತ್ತಾಯಿಸಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕುಸ್ತಿಪಟುಗಳಿಗೆ ಧೈರ್ಯ ತುಂಬುತ್ತ, “ಪ್ರತಿಭಟನಾನಿರತ ಕುಸ್ತಿಪಟುಗಳೊಂದಿಗೆ ಇಡೀ ದೇಶ ನಿಂತಿದೆ. ಕುಸ್ತಿಪಟುಗಳು ಇದರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನಗೆ ತುಂಬಾ ಹೆಮ್ಮೆ ಇದೆ” ಎಂದು ಹೇಳಿದರು.
ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಭಾರತದ ಮಾಜಿ ಕ್ರಿಕೆಟ್ ತಾರೆ ಕಪಿಲ್ ದೇವ್ ಸಹ ಬೆಂಬಲ ಘೋಷಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬಿಲಾವಲ್ ಭುಟ್ಟೋ ಜರ್ದಾರಿ ಎಸ್ಸಿಒ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ; ನಿರೀಕ್ಷೆಗಳೇನು?
ಸುಪ್ರೀಂ ಕೋರ್ಟ್ ಆದೇಶದ ನಂತರ ದೆಹಲಿ ಪೊಲೀಸರು ಶುಕ್ರವಾರ ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಕ್ರಮದ ಭರವಸೆಯ ನಂತರವೂ ಕುಸ್ತಿಪಟುಗಳು ತಕ್ಷಣ ಬಂಧನಕ್ಕೆ ಒತ್ತಾಯಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
“ನಾವು ಸುಪ್ರೀಂ ಕೋರ್ಟ್ನ ಆದೇಶವನ್ನು ಗೌರವಿಸುತ್ತೇವೆ. ಆದರೆ ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ. ಈ ಹೋರಾಟ ಕೇವಲ ಎಫ್ಐಆರ್ಗಾಗಿ ಅಲ್ಲ. ಈ ಹೋರಾಟ ಅವರಂತಹವರನ್ನು ಶಿಕ್ಷಿಸಲು. ಅವರು ಜೈಲಿನಲ್ಲಿರಬೇಕು. ಅವರ ಅಧಿಕಾರವನ್ನು ಕಸಿದುಕೊಳ್ಳಬೇಕು” ಎಂದು ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.