- ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ
- ಡಬಲ್ ಇಂಜಿನ್ ಸರ್ಕಾರದಿಂದಲೇ ಅಭಿವೃದ್ದಿ ಎಂದ ಯುಪಿ ಸಿಎಂ
ನಮ್ಮ ದೇಶವನ್ನು ಧಾರ್ಮಿಕತೆ ಆಧಾರದ ಮೇಲೆ 1947ರಲ್ಲಿ ವಿಭಜಿಸಲಾಯಿತು. ಈಗ ಮತ್ತೊಮ್ಮೆ ಆ ವಿಭಜನೆ ಸಾಧ್ಯವಿಲ್ಲ. ಧರ್ಮ ಆಧಾರಿತ ಮೀಸಲಾತಿಯನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಧರ್ಮ ಆಧಾರಿತ ಮೀಸಲಾತಿಯನ್ನು ಅನುಮೋದಿಸಿ ನಾವು ಇನ್ನೊಂದು ವಿಭಜನೆಗೆ ಸಿದ್ಧರಿಲ್ಲ ಎಂದರು.
ಕಾಂಗ್ರೆಸ್ ವಿರುದ್ದ ಹರಿಹಾಯ್ದ ಯೋಗಿ, ಧರ್ಮಾಧಾರಿತ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.
ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಇಂದು ನಿನ್ನೆಯದಲ್ಲ, ತ್ರೇತಾಯುಗದಿಂದ ಇದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ವನವಾಸದ ಅತ್ಯಂತ ಅವಿಭಾಜ್ಯ ಸಹಾಯಕ ಹನುಮಂತ ಕರ್ನಾಟಕದ ನೆಲದಲ್ಲಿ ಜನಿಸಿದ್ದ ಎಂದರು.
“ಡಬಲ್ ಇಂಜಿನ್ ಸರ್ಕಾರ” ಇರುವುದರಿಂದಾಗಿ ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ಅದೇ ಮಾದರಿ ಆಡಳಿತ ಬೇಕಾದರೆ ಇಲ್ಲೂ ಬಿಜೆಪಿ ಗೆಲ್ಲಿಸಿ ಎಂದು ಯೋಗಿ ಕರೆ ನೀಡಿದರು.
ಕಾಂಗ್ರೆಸ್ ಗೆ ಅಧಿಕಾರ ನೀಡಿದರೆ ಅದು ಪಿಎಫ್ಐ ಅನ್ನು ಸಮಾಧಾನಪಡಿಸುತ್ತದೆ. ಹಾಗೆಯೇ ಧರ್ಮಾಧಾರಿತ ಮೀಸಲಾತಿಯನ್ನು ನೀಡುತ್ತದೆ, ಇದು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ.
ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಪಿಎಫ್ಐ ಅನ್ನು ನಿಷೇಧಿಸಿವೆ ಮತ್ತು ಇಸ್ಲಾಮಿಸ್ಟ್ ಸಂಘಟನೆಯ ಬೆನ್ನು ಮುರಿದಿವೆ.
ಈ ಸುದ್ದಿ ಓದಿದ್ದೀರಾ?: ಹಳೇ ಮೈಸೂರು ಭಾಗದಲ್ಲಿ “ನಾಥ ಪರಂಪರೆ”ಯ ಅಸ್ತ್ರ ಬಿಟ್ಟ ಬಿಜೆಪಿ; ಮಂಡ್ಯದಲ್ಲಿ ಯೋಗಿ ಮತ ಭೇಟೆ
ಇತರ ಹಿಂದುಳಿದ ವರ್ಗಗಳ 2ಬಿ ವರ್ಗದಡಿಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಉಲ್ಲೇಖಿಸಿ, 2ಬಿ ಅನ್ನು ಸರಕಾರವು ನಾಲ್ಕು ಶೇಕಡಾ ಮೀಸಲಾತಿಯನ್ನು ಎರಡು ಸಮಾನ ಭಾಗಗಳಾಗಿ ವಿಭಜಿಸಿತು. ರಾಜ್ಯದ ಎರಡು ಪ್ರಬಲ ಸಮುದಾಯಗಳಾದ 2ಸಿ ಯಲ್ಲಿ ಒಕ್ಕಲಿಗರು ಮತ್ತು 2ಡಿ ವರ್ಗದಲ್ಲಿ ಲಿಂಗಾಯತರಿಗೆ ತಲಾ ಎರಡು ಶೇಕಡಾ ಕೋಟಾವನ್ನು ಹೆಚ್ಚಿಸಿತು ಎಂದರು.
ಬಿಜೆಪಿ ನಂಬಿರುವ ‘ಏಕ್ ಭಾರತ್, ಶ್ರೇಷ್ಠ ಭಾರತ’ ಪರಿಕಲ್ಪನೆಯು ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಆದರೆ ನಾವು ಇತರರನ್ನು ಸಮಾಧಾನಗೊಳಿಸುವ ಲೆಕ್ಕಾಚಾರವನ್ನು ನಂಬುವುದಿಲ್ಲ, ಆದರೆ ಸಬಲೀಕರಣದಲ್ಲಿ ನಂಬಿಕೆ ಇಡುತ್ತೇವೆ ಎಂದರು.