- ನನ್ನ ಮನಸ್ಪೂರ್ವಕ ಬೆಂಬಲ ದರ್ಶನ್ ಅವರಿಗಿದೆ
- ಈ ವಿಚಾರದಲ್ಲಿ ದಯಮಾಡಿ ಗೊಂದಲ ಮಾಡಬೇಡಿ
ನಾನು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು ನನ್ನ ಆತ್ಮಸಾಕ್ಷಿಯ ಆಣತಿಯಂತೆ, ನನಗೆ ಮಾನವೀಯತೆ ಮುಖ್ಯ, ಆನಂತರ ರಾಜಕಾರಣ ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿಕೊಂಡಿದ್ದಾರೆ.
ನಂಜನಗೂಡು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಹದೇವಪ್ಪ, “ನಂಜನಗೂಡು ಕ್ಷೇತ್ರದಲ್ಲಿನ ನಮ್ಮ ಬೆಂಬಲಿಗರು ಟಿಕೆಟ್ ವಿಷಯವನ್ನು ಮರು ಪರಿಶೀಲಿಸಿ ಮಹದೇವಪ್ಪನವರಿಗೇ ಟಿಕೆಟ್ ನೀಡಬೇಕೆಂದು ಪತ್ರಿಕಾಗೋಷ್ಠಿ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ. ರಾಜಕೀಯದ ಆಚೆಗೂ ಕೂಡಾ ಮಾನವೀಯತೆ ಎಂಬುದು ಅತಿ ಮುಖ್ಯವಾದ ಸಂಗತಿಯಾಗಿರುವ ಕಾರಣ ಧ್ರುವನಾರಾಯಣ್ ಅವರ ಅಗಲಿಕೆಯ ಈ ಸಂದರ್ಭದಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆ ಮುಖ್ಯವೆಂದು ನಂಜನಗೂಡು ಕ್ಷೇತ್ರದಲ್ಲಿ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸಿರುತ್ತೇನೆ” ಎಂದಿದ್ದಾರೆ.
“ಹೀಗಾಗಿ ದಯಮಾಡಿ ಯಾರೂ ಕೂಡಾ ಗೊಂದಲ ಸೃಷ್ಟಿ ಮಾಡದೇ ಸಮಚಿತ್ತತೆಯಿಂದ ವರ್ತಿಸಬೇಕೆಂದು ಬೆಂಬಲಿಗರಲ್ಲಿ ವಿನಂತಿಸಿಕೊಳ್ಳುತ್ತೇನೆ. ನಂಜನಗೂಡು ಟಿಕೆಟ್ ವಿಷಯದಲ್ಲಿ ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಮಾನವೀಯತೆ ಮೊದಲು ರಾಜಕಾರಣ ನಂತರ” ಎಂದು ಮಹದೇವಪ್ಪ ಹೇಳಿಕೊಂಡಿದ್ದಾರೆ.