- ‘ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹೇಳಿದ್ದೇ ಹೊರತು ವೈಯಕ್ತಿಕ ದ್ವೇಷ ಇಲ್ಲ’
- ‘ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿ ಕಾರ್ಯ ಮಾಡುವತ್ತ ಗಮನ ಕೊಡಿ’
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ತನ್ನ ದ್ವೇಷ ರಾಜಕಾರಣವನ್ನು ಆರಂಭಿಸಿದೆ. ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದಕ್ಕೆ ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಮತ್ತು ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದು ಮಾಜಿ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆ ಮೈಸೂರಿನಲ್ಲಿ ಎಫ್ಐಆರ್ ದಾಖಲಿಸಿರುವ ಕುರಿತು ಗುರುವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿಕೆ ನೀಡಿದ್ದಾರೆ.
“ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ಟಿಪ್ಪು ಸುಲ್ತಾನ್ ಮೇಲೆ ಇದ್ದ ಪ್ರೇಮವನ್ನು ಖಂಡಿಸಿ ನಾನು ಹೇಳಿಕೆಯನ್ನು ಕೊಟ್ಟಿದ್ದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು ಎಂಬ ಚಿಂತನೆಯಲ್ಲಿ ಹೇಳಿದ್ದೇನೆಯೇ ಹೊರತು, ಯಾವುದೇ ದ್ವೇಷದಿಂದಲ್ಲ. ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಪರಸ್ಪರ ಅಪಾರ ಗೌರವ ಇದೆ. ಆದರೆ, ಸೈದ್ಧಾಂತಿಕವಾಗಿ ನಮಗೂ ಅವರಿಗೂ ಬಹಳಷ್ಟು ಭಿನ್ನಾಭಿಪ್ರಾಯವಿದೆ” ಎಂದಿದ್ದಾರೆ.
“ನನ್ನ ಇಡೀ ರಾಜಕೀಯ ಜೀವನದಲ್ಲಿ ಯಾವ ಒಬ್ಬ ವ್ಯಕ್ತಿಗೂ ಹಾನಿ ಮಾಡಿಲ್ಲ, ಮಾಡುವ ಉದ್ದೇಶವೂ ಇಲ್ಲ. ನಾನು ಕಾನೂನು ಗೌರವಿಸುತ್ತೇನೆ ಮತ್ತು ಪಾಲನೆ ಮಾಡುತ್ತೇನೆ. ನನ್ನ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸದನದಲ್ಲಿಯೂ ಹೇಳಿದ್ದೇನೆ. ಆ ವಿಚಾರ ಆಗಲೇ ಮುಗಿದುಹೋಗಿತ್ತು. ಕಾಂಗ್ರೆಸ್ನಿಂದ ಯಾರು ಈ ವಿಷಯವನ್ನು ಪ್ರಸ್ತಾಪಿಸಿದ್ದರೋ ಅವರೂ ಒಪ್ಪಿ ಸದನದ ಕಲಾಪ ನಡೆದಿದೆ” ಎಂದು ಹೇಳಿದ್ದಾರೆ.
“ಆದರೆ, ಇಂದು ಅಧಿಕಾರಕ್ಕೆ ಬಂದ ತಕ್ಷಣ ಇದ್ದಕ್ಕಿದ್ದಂತೆ ದ್ವೇಷ, ಅಸೂಯೆ, ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಮೊನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡೆಸಿದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಯಾಕೆ ಕೇಸು ದಾಖಲಿಸಿಲ್ಲ ಎಂದು ಪ್ರಶ್ನಿಸಿ ಈಗ ಹಳೆಯ ಪ್ರಕರಣವನ್ನು ಕೈಗೆತ್ತಿಕೊಂಡು ಕೊಲೆ ಯತ್ನ ಎಂಬಂತೆ ಬಿಂಬಿಸಿ, ಅವರ ಕಾರ್ಯಕರ್ತರ ಮೂಲಕ ದೂರು ಕೊಡಿಸಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಪಂದಿಸಿ ದೂರು ದಾಖಲು ಮಾಡಿರುವುದು ಖಂಡನೀಯ” ಎಂದು ಕಿಡಿಕಾರಿದರು.
“ಜನ ರಾಜ್ಯದಲ್ಲಿ ಅವರಿಗೆ ಮತ್ತೊಮ್ಮೆ ಅಧಿಕಾರ ಕೊಟ್ಟಿದ್ದಾರೆ. ಜನಪರವಾಗಿ ಉತ್ತಮ ಕಾರ್ಯಗಳನ್ನು ಮಾಡುವುದು ಬಿಟ್ಟು, ತಾನು ಭರವಸೆ ಕೊಟ್ಟಿರುವ ಗ್ಯಾರಂಟಿಗಳನ್ನು ಜಾರಿ ಮಾಡುವುದು ಬಿಟ್ಟು, ಸಮಯವನ್ನು ಈ ರೀತಿಯ ದ್ವೇಷದ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಹತ್ಯೆ ಪ್ರಚೋದಿಸುವ ಹೇಳಿಕೆ; ಅಶ್ವಥ್ ನಾರಾಯಣ್ ವಿರುದ್ಧ ಎಫ್ಐಆರ್
“ನನ್ನ ಮೇಲೆ ಮತ್ತು ನಮ್ಮ ಪಕ್ಷದ ಮೇಲೆ ಇವರು ಕೆಂಡ ಕಾರುತ್ತಿರುವುದು ಒಳ್ಳೆಯದಲ್ಲ. ನಾವು ಯಾವತ್ತೂ ಇವರ ಮೇಲೆ ದ್ವೇಷದ ರಾಜಕಾರಣ ಮಾಡಿಲ್ಲ. ಆದರೆ, ಇವರು ಕಾನೂನನ್ನು ದುರ್ಬಳಕೆ ಮಾಡಿಕೊಂಡು ಕೇಸು ದಾಖಲಿಸಿ ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಮಾಡಲಿ, ಜನ ಉತ್ತರ ಕೊಡುತ್ತಾರೆ. ನಾವು ಉತ್ತರ ಕೊಡುತ್ತೇವೆ. ಒಂದು ರಾಜಕೀಯ ಪಕ್ಷವಾಗಿಯೂ ಉತ್ತರ ಕೊಡುತ್ತೇವೆ” ಎಂದು ತಿರುಗೇಟು ನೀಡಿದ್ದಾರೆ.
“ಇವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಈಗಾಲಾದರೂ ಬುದ್ಧಿ ಕಲಿತಿದ್ದಾರೆ, ಒಳ್ಳೆಯದು ಮಾಡುತ್ತಾರೆ ಎಂದು ರಾಜ್ಯದ ಜನ ಅವಕಾಶ ಕೊಟ್ಟಿದ್ದಾರೆ. ಆದರೆ, ಇವರ ಬಾಲ ಅದೇ ರೀತಿ ಸೊಟ್ಟವಾಗಿದೆ. ಅದೇ ಬುದ್ಧಿ, ಅದೇ ಆಲೋಚನೆಗಳು, ಅದೇ ಕಾರ್ಯಗಳು ಪುನರಾವರ್ತನೆ ಆಗುತ್ತಿವೆ. ಇದನ್ನೆಲ್ಲ ಬಿಟ್ಟು ಒಳ್ಳೆಯ ಕೆಲಸಗಳನ್ನು ಮಾಡಿ. ಇಂತಹ ಅಧಿಕಾರ ದುರ್ಬಳಕೆಯಿಂದ ಹೊರಗೆ ಬನ್ನಿ” ಎಂದು ಹೇಳಿದ್ದಾರೆ.