- ಸಮೀಕ್ಷೆಗಳ ವಿಚಾರಕ್ಕೆ ಮೂಗು ಮುರಿದ ಸಿಎಂ ಬೊಮ್ಮಾಯಿ
- ಮೋದಿಯವರ ಪ್ರಚಾರದಿಂದ ನಮಗೆ ಪ್ಲಸ್ ಆಗಿದೆ ಎಂದ ಸಿಎಂ
ಚುನಾವಣಾ ಸಮೀಕ್ಷೆಗಳು ಬೇಕಾದುದ್ದನ್ನು ಹೇಳಿಕೊಳ್ಳಲಿ. ಆದರೆ ನಾವೇ ಸ್ಪಷ್ಟ ಬಹುಮತ ಪಡೆಯುತ್ತೇವೆ. ಈ ಮಾತಿಗೆ ನಾನು ಈಗಲೂ ಬದ್ಧ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಚಾರದಿಂದ ನಮಗೆ ಪ್ಲಸ್ ಆಗಿದೆ. ನಾವು ಬಹುಮತ ಪಡೆಯುತ್ತೇವೆ ಎಂದರು.
ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆ ಇದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನನಗೆ ವಿಶ್ವಾಸವಿದ್ದು, ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ತಮ್ಮ ಕ್ಷೇತ್ರದ ವಿಚಾರದಲ್ಲಿ ಅಭಿಪ್ರಾಯ ಹಂಚಿಕೊಂಡ ಸಿಎಂ, ಶಿಗ್ಗಾಂವಿ ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ. ಹಬ್ಬದ ರೀತಿಯಲ್ಲಿ ಚುನಾವಣೆ ಆಚರಣೆ ಮಾಡಿದರು. ವಿರೋಧ ಪಕ್ಷದವರು ನನ್ನ ವಿರುದ್ಧ ಷಡ್ಯಂತ್ರ, ಅಪ್ರಚಾರ ಮಾಡಿದರು. ಇವೆಲ್ಲದರ ನಡುವೆ ನಮ್ಮ ಜನ ನನ್ನ ಕೈಹಿಡಿಯುವ ವಿಶ್ವಾಸವಿದ್ದು ಶಿಗ್ಗಾಂವಿಯಲ್ಲಿ ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ ಎಂದರು.
ಇದಕ್ಕೂ ಮುನ್ನ ಸಿಎಂ ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಧರ್ಮಪತ್ನಿ ಚನ್ನಮ್ಮ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ?:ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ
ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ನಮಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ, ನಾವೇ ಗೆಲ್ಲುತ್ತೇವೆ. ಕರ್ನಾಟಕದ ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಬಿಜೆಪಿಗೆ ಬಹುಮತ ಬರುತ್ತೆ, ಸರ್ಕಾರ ರಚನೆ ಮಾಡೇ ಮಾಡುತ್ತೇವೆ. ನಮ್ಮದೇ ಮೆಜಾರಿಟಿ ಬರುವ ಕಾರಣ ಜೆಡಿಎಸ್ ಜೊತೆ ಯಾವುದೇ ಮಾತುಕತೆಯಾಗಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ರಾಜ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಹೆಚ್ಡಿ ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಬುಧವಾರ ರಾತ್ರಿ ಆಪ್ತರ ಜೊತೆ ಬೆಂಗಳೂರಿನಿಂದ ಸಿಂಗಾಪೂರ್ ಹೆಚ್ ಡಿಕೆ ಪ್ರಯಾಣ ಬೆಳೆಸಿದ್ದಾರೆ. ಮೇ 13ರಂದು ರಾಜ್ಯಕ್ಕೆ ಮರಳಲಿರುವ ಅವರು ಸಿಂಗಾಪೂರದಲ್ಲಿ ಎರಡುದಿನಗಳ ವಿಶ್ರಾಂತಿ ಪಡೆಯಲಿದ್ದಾರೆ.