- ಬಿಎಸ್ ಯಡಿಯೂರಪ್ಪ ಜೊತೆಗೆ ಅಮಿತ್ ಶಾ ಮಾತುಕತೆ
- ಪಕ್ಷದೊಳಗಿನ ದ್ವಂದ್ವ ನೀತಿ, ಟಿಕೆಟ್ ಹಂಚಿಕೆ ಕುರಿತು ಚರ್ಚೆ
ರಾಜ್ಯ ವಿಧಾನಭಾ ಚುನಾವಣಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆ, ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ಶತಾಯಗತಾಯ ರಾಜ್ಯದಲ್ಲಿ ಕಮಲ ಅರಳಿಸಬೇಕು ಎಂದುಕೊಂಡಿರುವ ಬಿಜೆಪಿ, ವಾರಕ್ಕೊಬ್ಬ ಹೈಕಮಾಂಡ್ ನಾಯಕನನ್ನು ಪ್ರಚಾರದ ಭಾಗವಾಗಿ ರಾಜ್ಯಕ್ಕೆ ಕರೆಸುತ್ತಿದೆ.
ಅಮಿತ್ ಶಾ ಕಾರ್ಯಕ್ರಮಗಳು
ಪೂರ್ವ ನಿಯೋಜನೆಯಂತೆ ಕಾರ್ಯಕ್ರಮಗಳು ಮಾರ್ಚ್ 25ರಂದು ನಡೆಯಲಿವೆ. ಆದರೆ ಅದಕ್ಕೂ ಮೊದಲೇ ಒಂದು ದಿನ ಮುಂಚಿತವಾಗಿ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ.
ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ಕಾವೇರಿಯಲ್ಲಿನ ಉಪಾಹಾರ ಕೂಟದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಹಾಗೂ ದೆಹಲಿ ನಾಯಕರಿಬ್ಬರ ಈ ಉಪಾಹಾರ ಮಾತುಕತೆ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಆಪರೇಷನ್ ಕಮಲದ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈಗ ರಿವರ್ಸ್ ಆಪರೇಷನ್ ಭಯ ಎದುರಾಗಿದೆ. ಪಕ್ಷ ಸೇರಿದ ಪ್ರಮುಖ ಸಮುದಾಯದ ನಾಯಕರುಗಳು ಕಾಂಗ್ರೆಸ್ನತ್ತ ಮುಖ ಮಾಡುತ್ತಿರುವುದು ಹಾಗೂ ಸಚಿವ ಸೋಮಣ್ಣ ಅವರ ಕಾಂಗ್ರೆಸ್ ವಲಸೆ ವಿಚಾರವೂ ಸೇರಿದಂತೆ ಇನ್ನು ಕೆಲ ವಿಷಯಗಳ ಬಗ್ಗೆ ನಾಯಕರು ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.
ಉಳಿದಂತೆ ಪಕ್ಷದೊಳಗಿನ ದ್ವಂದ್ವ ನೀತಿ, ಟಿಕೆಟ್ ಹಂಚಿಕೆ, ಸಮುದಾಯಗಳ ಓಲೈಕೆ, ಅನ್ಯಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೆಳೆಯುವ ವಿಚಾರಗಳ ಬಗೆಗೂ ನಾಯಕರು ಮಾತುಕತೆ ನಡೆಸಲಿದ್ದಾರೆ. ಇಂದಿನ ಈ ಸಭೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.
ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೋಟೆಲ್ ತಾಜ್ ವೆಸ್ಟ್ ಎಂಡ್ನಲ್ಲಿ ನಡೆಯುವ ಬೆಂಗಳೂರು ಮಾದಕ ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.
ಅದಾದ ಬಳಿಕ ಕೊಮ್ಮಘಟ್ಟ ಗ್ರಾಮದಲ್ಲಿ ಸಹಕಾರ ಸಮೃದ್ಧಿ ಸೌಧದ ಶಂಕುಸ್ಥಾಪನೆ, ಕರ್ನಾಟಕದ ಸಹಕಾರ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸುತ್ತಾರೆ.
ಮಾರ್ಚ್ 25 ರಂದು ಬೀದರ್ ವಾಯುನೆಲೆ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿರುವ ಅಮಿತ್ ಶಾ, ಮಾರ್ಚ್ 26ರ ಬೆಳಗ್ಗೆ ಗೊರಟಾ ಗ್ರಾಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೊರಟಾ ಹುತಾತ್ಮ ಸ್ಮಾರಕ, ಪಟೇಲ್ ಸ್ಮಾರಕ ಉದ್ಘಾಟಿಸಲಿದ್ದಾರೆ.
ನಂತರ ರಾಯಚೂರಿನ ಗಬ್ಬೂರಿನಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ 26 ರಂದು ಬೆಂಗಳೂರಿಗೆ ಆಗಮಿಸಲಿರುವ ಅವರು ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿರುವ ಗುಜರಾತ್ ಸಮಾಜದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 6.30ಕ್ಕೆ ವಿಧಾನಸೌಧದ ಮುಂಭಾಗದ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಿ, ಬಳಿಕ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ರಾತ್ರಿ 8.30ಕ್ಕೆ ಹೋಟೆಲ್ನಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿರುವ ಅಮಿತ್ ಶಾ, ನಂತರ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಾ.27 ರ ಬೆಳಗ್ಗೆ ಅವರು ದೆಹಲಿಗೆ ಪ್ರಯಾಣಿಸಲಿದ್ದಾರೆ.