ವಶಪಡಿಸಿಕೊಂಡ ವಸ್ತುವಿನ ಒಂದು ಸಣ್ಣ ಭಾಗವನ್ನು ಸುಟ್ಟು ನೋಡುವುದರಿಂದ ಮಾತ್ರವೇ ಅದು ಮಾದಕ ವಸ್ತುವಾದ ‘ಚರಸ್’ ಎಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ 2004ರಲ್ಲಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ದಾಖಲಾಗಿದ್ದ ಸುದೀರ್ಘ 22 ವರ್ಷಗಳ ಹಳೆಯ ಮಾದಕ ದ್ರವ್ಯ ಪ್ರಕರಣದಲ್ಲಿ ಅಪರಾಧಿಗಳೆಂದು ಶಿಕ್ಷೆಗೊಳಗಾಗಿದ್ದ ಇಬ್ಬರು ವ್ಯಕ್ತಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ನ್ಯಾಯಮೂರ್ತಿ ಮನ್ಮೋಹನ್ ಅವರನ್ನೊಳಗೊಂಡ ದ್ವಿಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
2004ರ ನವೆಂಬರ್ 29ರಂದು ಜಬಲ್ಪುರದ ಬಂದರಿಯಾ ತಿರಾಹಾ ಬಳಿ ಅಬ್ದುಲ್ ರಜಿಕ್ ಹಾಗೂ ಗೋವಿಂದ್ ಎಂಬ ಇಬ್ಬರು ವ್ಯಕ್ತಿಗಳು ಬ್ಯಾಗ್ಗಳಲ್ಲಿ ಚರಸ್ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಇದನ್ನೂ ಓದಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತರುಣ್ ತೇಜ್ಪಾಲ್
ಪರಿಶೀಲನೆ ವೇಳೆ ಅವರಿಂದ ಕಪ್ಪು ಬಣ್ಣದ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಸ್ಥಳದಲ್ಲಿದ್ದ ತನಿಖಾಧಿಕಾರಿಯು ಆ ವಸ್ತುವಿನ ಸಣ್ಣ ತುಂಡನ್ನು ಸುಟ್ಟು ನೋಡಿ, ಅದು ‘ಚರಸ್’ ಇರಬಹುದು ಎಂದು ಶಂಕಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದವು.
ತನಿಖಾಧಿಕಾರಿಯು ವಸ್ತುವನ್ನು ಸುಟ್ಟು ನೋಡಿ ಚರಸ್ ಎಂದು ಗುರುತಿಸಿರುವುದನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. “ಕೇವಲ ವಸ್ತುವನ್ನು ಸುಡುವುದರಿಂದಷ್ಟೇ ಅದು ಚರಸ್ ಹೌದೋ ಅಲ್ಲವೋ ಎಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಕೇವಲ ತನಿಖಾಧಿಕಾರಿಯ ಶಂಕೆಯು ಕಾನೂನುಬದ್ಧ ಸಾಕ್ಷ್ಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ವಶಪಡಿಸಿಕೊಂಡ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸುವ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಲೋಪಗಳಾಗಿವೆ. ಕಳುಹಿಸಲಾದ ಮಾದರಿ ಪ್ಯಾಕೆಟ್ಗಳ ಮೇಲೆ ಆರೋಪಿಗಳ ಅಥವಾ ಪಂಚರ ಸಹಿ ಇಲ್ಲದಿರುವುದು, ಸಾಕ್ಷ್ಯಗಳ ಭದ್ರತೆಯಲ್ಲಿ ಲೋಪವಾಗಿರುವುದು ಕಂಡುಬಂದಿದೆ.
ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಡಿಸೆಂಬರ್ 1, 2004ರಂದು ರವಾನೆಯಾದ ಮಾದರಿಗಳು ಎಫ್ಎಸ್ಎಲ್ ತಲುಪಿದ್ದು ಡಿಸೆಂಬರ್ 6ರಂದು. ಈ ಮಧ್ಯದ 5 ದಿನಗಳ ಕಾಲ ಮಾದರಿಗಳು ಎಲ್ಲಿ ಮತ್ತು ಯಾರ ವಶದಲ್ಲಿದ್ದವು ಎಂಬುದಕ್ಕೆ ಸೂಕ್ತ ವಿವರಣೆ ನೀಡಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಮಾದಕ ದ್ರವ್ಯ ಕಾಯ್ದೆ (NDPS Act) ನಿಯಮಾವಳಿಗಳ ಪ್ರಕಾರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮಾದರಿಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಎಫ್ಎಸ್ಎಲ್ ವರದಿಯ ನಂಬಿಕಾರ್ಹತೆ ನಷ್ಟವಾಗಿರುವುದರಿಂದ ಮತ್ತು ವಶಪಡಿಸಿಕೊಂಡ ವಸ್ತು ಚರಸ್ ಎಂದು ನಿರೂಪಿಸಲು ಬೇರೆ ಯಾವುದೇ ವೈಜ್ಞಾನಿಕ ಅಥವಾ ಕಾನೂನುಬದ್ಧ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಅನುಮಾನದ ಲಾಭ ನೀಡಿದ್ದು, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ್ದ ಶಿಕ್ಷೆಯ ಆದೇಶಗಳನ್ನು ರದ್ದುಗೊಳಿಸಿ ಇಬ್ಬರನ್ನೂ ಮುಕ್ತಗೊಳಿಸಿದೆ.




