- ಚಾಕುವಿನಿಂದ ಇರಿದು ಮಹಿಳೆ ಹತ್ಯೆ
- ನಾಲ್ಕೈದು ಬಾರಿ ಇರಿತದಿರುವ ದುಷ್ಕರ್ಮಿಗಳು
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಒಬ್ಬಂಟಿ ಮಹಿಳೆಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದ ಟಿ.ಸಿ ಪಾಳ್ಯದಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಅಂಬಿಕಾ (40) ಮೃತ ಮಹಿಳೆ. ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೃತ ಅಂಬಿಕಾ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಎಚ್.ಹೊಸಹಳ್ಳಿ ಗ್ರಾಮದವರು. ಬೆಂಗಳೂರಿನ ಟಿ.ಸಿ.ಪಾಳ್ಯದ ಗಾರ್ಡನ್ ಸಿಟಿ ಕಾಲೇಜು ಸಮೀಪ ನೆಲೆಸಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೃತ ಮಹಿಳೆಯ ಪತಿ ಕೆಲವು ತಿಂಗಳ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ ಹಿರಿಯ ಮಗ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದಾನೆ.
ಮೃತ ಮಹಿಳೆ ಏ.3ರಂದು ತನ್ನ ನೆರೆಮನೆಯ ಮಹಿಳೆಯನ್ನು ಭೇಟಿಯಾಗಿ ಮಾತನಾಡಿದ್ದರು. ನಂತರ ಆಕೆ ಎಲ್ಲಿಯೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಏ.4 ಮತ್ತು ಏ.5ರಂದು ಆಕೆಯ ಮನೆಗೆ ಬಂದಿದ್ದ ಅಪರಿಚಿತರೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮೃತಳ ದೇಹದಲ್ಲಿ ನಾಲ್ಕೈದು ಬಾರಿ ಚೂರಿ ಇರಿದಿರುವ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರಗಕ್ಕೆ ಕರಗಿದ ಬಿಬಿಎಂಪಿ ಅನುದಾನ
ಮೃತಳ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಾಗಿಲು ಮುರಿದು ಪರಿಶೀಲಿಸಿದ್ದಾರೆ. ಈ ವೇಳೆ, ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನದ ಹಿಂದೆಯೇ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಘಟನೆ ಬಳಿಕ ಮೃತ ಮಹಿಳೆಯ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.