- ಜನಾರ್ದನ ಭಟ್ ಮತ್ತು ಆರೋಪಿಗಳು ಇಬ್ಬರೂ ಒಂದೇ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು
- ಭಟ್ ಅವರನ್ನು ಸುಲೈಮಾನ್ ಮತ್ತು ರಿಜ್ವಾನ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ
ಬೆಂಗಳೂರಿನ ಶ್ರೀನಿವಾಸಪುರ ಅಪಾರ್ಟ್ಮೆಂಟ್ವೊಂದರಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ವಿಚಾರಕ್ಕೆ ಕಿತ್ತಾಡಿಕೊಂಡು ಖಾಸಗಿ ಸಂಸ್ಥೆಯೊಂದರ ಉದ್ಯೋಗಿ (28)ಯನ್ನು ಸಹೋದ್ಯೋಗಿಗಳು ಹತ್ಯೆ ಮಾಡಿದ್ದಾರೆ.
ಜನಾರ್ದನ್ ಭಟ್ ಕೊಲೆಯಾದ ದುರ್ದೈವಿ. ಇವರು ಯಲಹಂಕ ಸಮೀಪದ ಕೋಗಿಲುನಲ್ಲಿರುವ ಯುನಿಯೋಕ್ಸ್ ಡಿಜಿಟಲ್ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.
ಶ್ರೀನಿವಾಸಪುರದ ಸಾಯಿ ಸಮೃದ್ಧಿ ಅಪಾರ್ಟ್ಮೆಂಟ್ನಲ್ಲಿರುವ ಬಾಡಿಗೆ ಫ್ಲಾಟ್ನಲ್ಲಿ ಯುನಿಯೋಕ್ಸ್ ಡಿಜಿಟಲ್ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರು ತಮ್ಮ ಉದ್ಯೋಗಿಗಳಿಗೆ ವಸತಿ ಒದಗಿಸಿದ್ದಾರೆ. ಜನಾರ್ದನ ಭಟ್ ಮತ್ತು ಆರೋಪಿಗಳು ಇಬ್ಬರೂ ಒಂದೇ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.
ಮಾರ್ಚ್ 29ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆರೋಪಿಗಳು ತಮ್ಮ ಮೋಟಾರ್ ಬೈಕ್ಗಳನ್ನು ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ಬಗ್ಗೆ ಭಟ್ ಅವರೊಂದಿಗೆ ಜಗಳವಾಡಿದ್ದರು. ಪಾಷಾ ಮತ್ತು ಇನ್ನೊಬ್ಬ ಬಾಡಿಗೆದಾರರು ವಾಗ್ವಾದದ ಮಧ್ಯಪ್ರವೇಶಿಸಿ ಆರೋಪಿಗಳನ್ನು ತಮ್ಮ ಕೋಣೆಗೆ ಕರೆದೊಯ್ದಿದ್ದರು.
ಮರುದಿನ, ಬೆಳಗ್ಗೆ 9 ಗಂಟೆ ಸುಮಾರಿಗೆ ಪಾಷಾ ಅವರು ಭಟ್ ಅವರು ಇರುವ ಕೋಣೆಗೆ ತೆರಳಿದ್ದಾರೆ. ಈ ವೇಳೆ, ಕೋಣೆಯಲ್ಲಿ ಭಟ್ ಅವರ ಕೈಕಾಲುಗಳನ್ನು ಕಟ್ಟಿ, ಬಾಯಿಯನ್ನು ಟೇಪ್ನಿಂದ ಮುಚ್ಚಿದ್ದರು. ಕುತ್ತಿಗೆಗೆ ತಂತಿಯನ್ನು ಸುತ್ತಿದ್ದರು. ಭಟ್ ಹಾಸಿಗೆಯ ಕೆಳಗೆ ಬಿದ್ದಿದ್ದರು. ಪಾಷಾ ಅವರು ಕೋಣೆಯಲ್ಲಿ ಮೃತ ಸಹೋದ್ಯೋಗಿಯನ್ನು ಪತ್ತೆ ಮಾಡಿ, ಪೊಲೀಸ್ರಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೇಡಹಳ್ಳಿಯಲ್ಲಿ ಅಗ್ನಿ ಅವಘಡ : ಚಿಕಿತ್ಸೆ ಫಲಿಸದೆ 7 ಕಾರ್ಮಿಕರು ಸಾವು
ಜನಾರ್ದನ್ ಭಟ್ ಅವರನ್ನು ಸುಲೈಮಾನ್ ಮತ್ತು ರಿಜ್ವಾನ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಪರಾರಿಯಾಗಿರುವ ಆರೋಪಿಗಳನ್ನು ಹಿಡಿಯಲು ಯಲಹಂಕ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.
ಸಂಸ್ಥೆಯ ಮಾಲಕಿ ಹೇಮಲತಾ ಅವರು ಸ್ಥಳಕ್ಕೆ ಧಾವಿಸಿ, ಉದ್ಯೋಗಿ ಮೃತಪಟ್ಟಿರುವುದನ್ನು ಕಂಡು ಟಿವಿ ಮತ್ತು ಏರ್ ಕಂಡಿಷನರ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ, ಸುಲೈಮಾನ್ ಮತ್ತು ರಿಜ್ವಾನ್ ಇಬ್ಬರು ಸೇರಿ ಜನಾರ್ದನ್ ಭಟ್ ಅವರನ್ನು ಕೊಂದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸಾವಿನ ಬಗ್ಗೆ ತಮ್ಮ ಉದ್ಯೋಗಿ ಆರೀಫ್ ಪಾಷಾ ಅವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಭಟ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.