- ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
- ಸಂಚಾರ ನಿಯಮ ಉಲ್ಲಂಘಿಸಿದ ಟಾಟಾ ಏಸ್ ಚಾಲಕನಿಂದ ಬೆದರಿಕೆ
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟಾಟಾ ಏಸ್ ಚಾಲಕನೊಬ್ಬ ಹಾಡಹಗಲೇ ಕೈಯಲ್ಲಿ ಚಾಕು ಹಿಡಿದು ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಜೀವ ಬೆದರಿಕೆ ಹಾಕಿರುವಂತಹ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ ನಗರದಲ್ಲಿ ಟಾಟಾ ಏಸ್ ಚಾಲಕ ರಾಮಮೂರ್ತಿನಗರ ಸೇತುವೆ ಬಳಿ ಮೊಬೈಲ್ನಲ್ಲಿ ಮಾತಾಡಿಕೊಂಡು ವಾಹನ ಚಲಾಯಿಸುತ್ತಿದ್ದನು. ಮೊಬೈಲ್ನಲ್ಲಿ ಮಾತಾಡುತ್ತಾ ಪಕ್ಕದಲ್ಲಿ ಬರುತ್ತಿರುವ ಸ್ಕೂಟರ್ಗೆ ಟಾಟಾ ಏಸ್ ಚಾಲಕ ಡಿಕ್ಕಿ ಹೊಡೆದಿದ್ದಾನೆ.
ಈ ಬಗ್ಗೆ ದ್ವಿಚಕ್ರ ವಾಹನ ಸವಾರರು ಪ್ರಶ್ನೆ ಮಾಡಿದಾಗ ಪ್ರಕಾಶ್ ಎಂಬುವವರಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಪ್ರಕಾಶ್ ವೀಡಿಯೊ ಸಮೇತ ತಮ್ಮ ಟ್ವೀಟರ್ ಖಾತೆಯಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಸದ್ಯ ರಾಮಮೂರ್ತಿನಗರ ಠಾಣಾ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.