ಬೆಂಗಳೂರಿನ ವರ್ತೂರು ಸಮೀಪದ ಬೆಳಗೆರೆಯಲ್ಲಿರುವ ಬೆಂಗಳೂರು ಜಲಮಂಡಳಿಯ (BWSSB) ತ್ಯಾಜ್ಯನೀರು ಶುದ್ಧೀಕರಣ ಘಟಕದ ಟ್ಯಾಂಕ್ಗೆ ಬಿದ್ದು ಇಬ್ಬರು ಕಾರ್ಮಿಕರು ನಾಪತ್ತೆಯಾಗಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ. ನಾಪತ್ತೆಯಾದವರ ಶೋಧಕ್ಕಾಗಿ ಕಾರ್ಯಾಚರಣೆ ತೀವ್ರಗೊಂಡಿದೆ.
ತಮಿಳುನಾಡು ಮೂಲದ ಅಗಿಲನ್ ಮೋಹನ್ ಮತ್ತು ಬಿಹಾರ ಮೂಲದ ಬ್ರಿಜೇಶ್ ಕುಮಾರ್ ನಾಪತ್ತೆಯಾದ ಕಾರ್ಮಿಕರು.ಗುರುವಾರ(ಜೂ.19) ಸಂಜೆ 6.30ರ ಸುಮಾರಿಗೆ ತ್ಯಾಜ್ಯನೀರು ಸಂಸ್ಕರಣಾ ವ್ಯವಸ್ಥೆಯ ಮೂರು ಗೇಟ್ಗಳನ್ನು ದುರಸ್ತಿ ಮಾಡಲು ಈ ಕಾರ್ಮಿಕರು ಸುಮಾರು 60 ಅಡಿ ಆಳದ ಟ್ಯಾಂಕ್ನೊಳಗೆ ಇಳಿದಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಇವರೊಂದಿಗೆ ಟ್ಯಾಂಕ್ಗೆ ಇಳಿದಿದ್ದ ಕಾರ್ತಿಕ್ ಎಂಬ ಮತ್ತೊಬ್ಬ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಪಾಯದ ಅರಿವಾಗುತ್ತಿದ್ದಂತೆ ಟ್ಯಾಂಕ್ನಿಂದ ಹೊರಬಂದ ಕಾರ್ತಿಕ್, ಕೂಡಲೇ ಇತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಟ್ಯಾಂಕ್ನೊಳಗಿನ ಪ್ರತಿಕೂಲ ವಾತಾವರಣವು ಕಾರ್ಯಾಚರಣೆಗೆ ತೀವ್ರ ಸವಾಲೊಡ್ಡಿದೆ. “ಘಟನೆ ನಡೆದು ಸಾಕಷ್ಟು ಸಮಯ ಕಳೆದಿರುವುದರಿಂದ ಹಾಗೂ ಟ್ಯಾಂಕ್ನ ಸ್ವರೂಪದ ಕಾರಣದಿಂದಾಗಿ ನಾಪತ್ತೆಯಾದ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆಗಳು ತೀರಾ ಕ್ಷೀಣವಾಗಿವೆ” ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜಕೀಯದಿಂದ ಮೇಲೆದ್ದು, ವಿದ್ಯಾರ್ಥಿಗಳ ಮನಗೆದ್ದ ರಾಹುಲ್ – ಕೋಟದಲ್ಲಿ ಬಿಚ್ಚಿಟ್ಟ ಕರಾಳ ದೃಶ್ಯಾವಳಿ!
ಈ ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳ ವಿರುದ್ಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ದುರ್ಘಟನೆಯ ಕುರಿತು ತನಿಖೆ ನಡೆಸಲು ಬಿಡಬ್ಲ್ಯುಎಸ್ಎಸ್ಬಿ ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿದೆ. ಮುಖ್ಯ ಎಂಜಿನಿಯರ್ ಕೆ.ಎನ್. ರಾಜೀವ್, ಹೆಚ್ಚುವರಿ ಮುಖ್ಯ ಎಂಜಿನಿಯರ್ ಕೆ.ಎಸ್. ರೇಣುಕುಮಾರ್ ಹಾಗೂ ಉಪ ಮುಖ್ಯ ಎಂಜಿನಿಯರ್ ವಿನುತಾ ಡಿ.ಎಸ್. ಅವರು ಈ ಸಮಿತಿಯಲ್ಲಿದ್ದಾರೆ.
ಅಪಘಾತಕ್ಕೆ ಕಾರಣವಾದ ಅಂಶಗಳು ಹಾಗೂ ಇದಕ್ಕೆ ಯಾರು ಹೊಣೆ ಎಂಬುದನ್ನು ಪತ್ತೆಹಚ್ಚಿ, ಜೂನ್ 20ರ ಮಧ್ಯಾಹ್ನ 12 ಗಂಟೆಯೊಳಗೆ ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷರಿಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಈ ಸಮಿತಿಗೆ ಸೂಚನೆ ನೀಡಲಾಗಿದೆ.




