(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಸುತ್ಮುತ್ತ ಊರೆಲ್ಲ ಇವನ್ನ ಅಸ್ಟೊಂದ್ ವೊಗುಳ್ತದ – “ಇವ ಮಗಳಗ ಎಷ್ಟು ಕರ್ಚ್ ಮಾಡ್ತಾನ ನೋಡು, ಎಣ್ ಮಗ ಅಂದ್ರ ರಾಸೇಕುರಂಗ ಅದೇನ್ ಪ್ರೀತಿ, ಇದ್ರ ಇಂತ ಅಪ್ಪ ಇರಬೇಕು…” ಅಂತರ ಜನ. ಇವ ನೋಡುದ್ರ ಒಳೊಳಗ ಬಾರಿ ಪ್ಲಾನ್ ಮಾಡನ. ಏನ ತಾನು ಶ್ರೀಮಂತ ಅಂತ ತೋರುಸ್ಕಳಕ್ಕ, ಮುಂದ ಮಗಳ್ಗ ಆಸ್ತಿ ಕೊಡದು ತಪ್ಪುಸ್ಕಳಕ್ಕ ಎಣ್ ಮಗಿಗ ಇಂಗೆಲ್ಲ ಕರ್ಚು ಮಾಡ್ತವ್ನ ಬಾರಿ ಚಾಣಾಕ್ಷ ಇವ!
ಇವತ್ತು ಊರಲ್ಲಿ ಪಕ್ಕದ ಊರ ರಾಸೇಕರಂದೇ ಸುದ್ದಿ. ಮಗಳು ದೊಡ್ಡೋಳಾದ್ಲು (ಋತುಮತಿ) ಅಂತ ಅಸಮಣೆ ಶಾಸ್ತ್ರನ ಪಕ್ಕದ ಸಿಟಿಲಿರ ಚತ್ರದಲ್ಲಿ ದೊಡ್ಡ ಮದವ ಮಾಡಿದಂಗೆ ಮಾಡ್ದ ಅಂತ ಸುದ್ದಿ. ಯಾಪಾಟಿ ಜನ; ಅದೇನ್ ಅದ್ದೂರಿ, ಐಭೋಗ, ಭರ್ಜರಿ ಊಟ್ವಂತ. ಏರ್ಡ್ ಬಸ್ ಜನ ಚತ್ರುಕ್ಕ ವೋಗಿದ್ರಂತ ಅವರೂರಿಂದ. ಸುತ್ಮುತ್ತ ಊರವರ್ನು ಕರ್ದಿದ್ನಂತ. ಆ ಚಿಕ್ ಎಣ್ಗ ಮದ್ವ ಎಣ್ಗ ಅಲಂಕಾರ ಮಾಡದಂಗ ಮಾಡಿದ್ರಂತ. ಮದುವಲಿ ಮುಯ್ ಮಾಡಂಗೆ ಜನ ಮುಯ್ನು ಮಾಡುದ್ರು. ಅಸಮಣೆಲಿ ಎಣ್ಣುನ್ ಪಕ್ಕ ಒಂದು ಗಂಡು ಇಲ್ಲ ಅನ್ನದು ಬುಟ್ರ ಅದು ಮದುವ ಆದಂಗೆ ಆಯ್ತು ಅನ್ನಿ ಅಂತಿದ್ರು ವೋಗಿದ್ದವರು.
ರಾಸೇಕರ ಏರ್ಡ್ ಲಕ್ಷ ಖರ್ಚು ಮಾಡಿನಿ ಪಂಕ್ಷನ್ ಮಾಡಕ ಅಂತ ಒಂದು ವಾರದಿಂದ ಸುತ್ತಮುತ್ತ ಊರಿಗೆಲ್ಲ ಹೇಳಕಂಡು ತಿರ್ಗಾಡ್ತನ. ಅಲ್ಲ… ಕಾಲ ಶಾನೆ ಕೆಟ್ಟೊಯ್ತು ಬುಡಿ; ಒಂದಿಪ್ಪತ್ತು ಮೂವತ್ತು ವರ್ಷದ ಹಿಂದ ಎಣೈಕ ದೊಡ್ಡೋರ್ ಆದ್ರ ನಮ್ ಜನ ಇಷ್ಟೆಲ್ಲ ಕಾಸು ಖರ್ಚು ಮಾಡ್ತಿದ್ರ? ನಾಕ್ ಜನ ನಂಟ್ರು ಕರ್ದು ಸೊಪ್ಪಾಕ ಶಾಸ್ತ್ರ ಮಾಡ್ತಿದ್ರು. ಇಲ್ಲ… ಮದುವ ಮನೆಲಿ ಚಪ್ಪರದ ದಿನ ಸೊಪ್ಪಾಕ ಶಾಸ್ತ್ರ ಮಾಡರು. ಅಟ್ಟಿ ದೊಡ್ಡದಿದ್ರ ಅವರಟ್ಟಿಲಿ ಇಲ್ಲ ಅಂದ್ರ ಪಕ್ಕದ ಅಟ್ಟಿ ದೊಡ್ಡದಿದ್ರ ಅಲ್ಲಿ, ಅದೂ ಬ್ಯಾಡ ಅಂದ್ರ ದೇವಸ್ಥಾನದಲ್ಲಿ ಶಾಸ್ತ್ರಕ್ಕ ಕೂರ್ಸರು. ಶ್ಯಾನೆ ಬಡುರಾದ್ರ ಯಾವ ಶಾಸ್ತ್ರನೂ ಇಲ್ಲ. ದಿನ ಬದ್ಕದೇ ಕಷ್ಟ ಆದವರು ಇದೆಲ್ಲ ಮಾಡಕ ಆದದ? ಏನಿದ್ರು ಇದೆಲ್ಲ ಕಾಸಿರವರ ಆಟ.
ಸಿಟಿ ಜನ ಎಣೈಕಳು ದೊಡ್ಡವರಾದ್ರ ಯಾರಿಗೂ ಹೇಳಲ್ವಂತ. ನಮ್ ಅಳ್ಳಿ ಜನದಂಗ ಬಾಣಂತನನು ಮಾಡಲ್ವಂತ. ಪಾರಿನ್ಲಿ ಇದೆಲ್ಲ ಮಾಡದೇ ಇಲ್ಲ, ಅಲ್ಲಿ ಎಣೈಕ ಚೆನ್ನಾಗಿಲ್ವ? ಇದೆಲ್ಲ ಮಾಡದೆ ಇದ್ರು ಆಯ್ತದ ಅಂದರಂತ. ಆಮೇಲ ಸಿಟಿ ಎಣೈಕ ನಮಗ ಈ ಶಾಸ್ತ್ರಗಿಸ್ತ್ರ ಏನು ಬೇಡ, ನಮಗ ಇಷ್ತಯಿಲ್ಲ ಅಂದ್ರ ದೊಡ್ಡವರು ಚಿಕ್ಕ ಐಕಳ ಮಾತ್ನೂ ಕೇಳಿರಂತ. ನಮ್ ಅಳ್ಳಿಲಿ ಇದೆಲ್ಲ ಆದದ. ಏನ ಹಿಂದಿಂದ ನಡ್ಕಬಂದಿರದ ಮಾಡ್ಬೇಕು, ಅಟ್ಟಿಲಿರ ಎಣೈಕ ದೊಡ್ಡದಾಗವ ಅಂದ್ರತಾನೆ ಗಂಡಿರ ಮನೆಯವರ್ಗ ಗೊತ್ತಾಗದು – ಮುಂದ ನಾಲ್ಕ್ ಗಂಡಿರ ಮನಜನ ಎಣ್ ಕೇಳಕ ಬರದು. ಆದ್ರ ಪಂಕ್ಷನ್ ಮಾಡ್ತೀವಿ ಅಂತ ಹಿಂಗೆಲ್ಲ ಹುಚ್ಚಾಟ ಆಡಬಾರದು ಅಷ್ಟೆಯ.
ಹಿಂದ ಬಡುರ್ ಮನೇಲಿ ಎಣ್ಮಕ್ಕಳು ದೊಡ್ಡವರಾದ್ರು ಅಂದ್ರ ಬಾಣ ಬಂದು ಕವುಸಕಂಡಂಗೆ ಆಗದು. ಮೂರು-ನಾಕು ಎಣೈಕ ಇದ್ರಂತ ಕೇಳಂಗೆ ಇಲ್ಲ. ದೊಡ್ಡವರಾದ್ರು ಬಾಣ್ತನ ಮಾಡಕೆ ಕಾಸಿಲ್ಲ ಅನ್ನದು ಒಂದಾದ್ರ, ಮಗಳು ಮದುಗ ಬಂದ್ಲಲ್ಲ ಅಂತ ಇನ್ನೊಂದು ಚಿಂತ ಸುರು ಆಗದು. ಆ ಎಣ್ಣೆನಾರ ಇಸ್ಕೂಲ್ಗ ವೊಯತಿದ್ರ ಅಲ್ಲಿಗ ಅವಳ ಓದು ಅವತ್ಗ ಮುಗಿತು ಅಂತ ಲೆಕ್ಕ. ನೀರಾಕಂಡಿರ ಎಣೈಕಳ ಪಕ್ಕದ ಊರಿನ ಇಸ್ಕೂಲ್ಗ ಸೇರ್ಸ ಮಾತೆ ಇಲ್ಲ. ನಮ್ಮೂರಲ್ಲಿ ಎಲ್ಲಿಗಂಟ ಇಸ್ಕೂಲ್ ಇರದು ಅಲ್ಲಿಗಂಟ ಮಾತ್ರ ಓದ್ಸರು. ಈಗ ಕಾಲ ಬದ್ಲಾದಂಗ ಎಣೈಕ ಜಾಸ್ತಿ ಓದ್ತವ.
ಇವತ್ತು ವತ್ತಾರ ಗದ್ಗ ಗೊಬ್ಬರ ತರವು ಅಂತ ಉಲ್ಲಳ್ಳಿಗ ವೋಗಿದ್ದಿ. ರಾಸೇಕರಪ್ಪ ಸಿಕ್ಕಿದ್ನ. “ಏನ್ ರಾಸೆಕ್ರಪ್ಪ ಸುತ್ಮುತ್ತ ಅಳ್ಳಿಲಿ ನಿಂದೇ ಸುದ್ದಿ. ಮಗಳ ಅಸೆಮಣ ಶಾಸ್ತ್ರನ ಬಾರಿ ಜೋರಾಗಿ ಮಾಡ್ದಂತಲ್ಲ… ಜನೆಲ್ಲ ಅದೇ ಮಾತಾಡ್ಕತರ. ಮಾಡು-ಮಾಡು… ಒಬ್ಬಳೆ ಮಗ, ಒಬ್ಬನೇ ಮಗ್ಹ ಅಲ್ವಾ? ಇರವ್ರು ಇಬ್ರು, ಇಬ್ರುಗೂ ಒಳ್ಳೆ ಆಸ್ತಿನೇ ಸಂಪಾದನೆ ಮಾಡಿದೈ ತಕ್ಕ. ಇಬ್ಬರಗೂ ಅರ್ಧದ ಆಸ್ತಿ ಕೊಟ್ರಾಯ್ತು; ಈಗೇನ ಎಣೈಕುಳುಗೂ ಅರ್ಧ ಆಸ್ತಿ ಕೊಡಬೇಕು ಅಂತ ಕಾನೂನು ಅದಲ್ಲ?” ಅಂದಿ.
ನನ್ ಮಾತು ರಾಸೆಕ್ರಪ್ಪಂಗ ಯಾಕ ಇಡಿಸ್ನಿಲ್ಲ ಅನ್ಸುತ್ತ ವಸಿ ಕ್ವಾಪ ಮಾಡ್ಕಂಡಂಗೆ ಕಂಡ್ನ. “ಅಲ್ಲ ಕಣಯ್ಯ… ಕಾನೂನು ಅದ ಅಂತ ಅರ್ಧ ಆಸ್ತಿ ಕೊಡದ? ಕಡಗಾಲದಲ್ಲಿ ಗಂಡ್ಮಕ್ಕ ತಾನೆ ಇಟ್ಟಿಕದು? ಎಣೈಕುಳ್ಗ ಏನ ನಾಲ್ಕು ಕಾಸು ಕರ್ಚು ಮಾಡಿ ಮದ್ವ, ಮುಂಜಿ ಇಂತವ ಗ್ರ್ಯಾಂಡಾಗಿ ಮಾಡಿ ಕಳಿಸದು. ಅದ್ಬುಟ್ಟು ಆಸ್ತಿ ಕೊಡಕ್ಕ ಆದದ? ಆಮೇಲ ಈ ಕಾನೂನು ಗೀನೂನು ಏಳಂಗ, ನಮ್ ಎಣೈಕುಳುವ ಆಸ್ತಿ ಗೀಸ್ತಿ ಕೇಳಲ್ಲ ಬುಡಯ್ಯ… ‘ನಮ್ ಅಟ್ಟಿ ಆಸ್ತಿ ಎಲ್ಲ ನನ್ ತಮ್ಮಂಗೆ ಇರಲಿ ನಾ ಸೈನ್ ಹಾಕ್ತಿನಿ ಬುಡಪ್ಪ’ ಅಂತ ನಮ್ಮೆಣ್ಣು ಆಗಲೇ ಎಳದ. ಅವಳ್ಗೂ ಮುಂದ ತೌರ್ಮನ ಬ್ಯಾಡ್ವ, ಅಣ್-ತಮ್ಮಂದ್ರು ಕರ್ದು ಬವುಣ್ಸ ಬ್ಯಾಡ್ವ? ಅವ್ಳಗು ತಮ್ಮನ್ನ ಕಂಡ್ರ ಬಾರಿ ಪ್ರೀತಿ. ನಮ್ಮೆಣ್ಣು ಬಾರಿ ಒಳ್ಳೆದು ಕಣ; ನನ್ ಮಾತ್ನಾಗಲಿ, ಅವರ್ ಅವ್ವನ್ ಮಾತ್ನಾಗ್ಲಿ ತಗ್ದಾಕಲ್ಲ ಅದು…” ಅಂದ.
ಅಯ್ಯೋ ಶಿವನೇ…! ನಂಗ ಅವನ ಮಾತ್ಗ ಏನ್ ಹೇಳಬೇಕು ಅಂತ ಗೊತ್ತೇ ಆಗ್ನಿಲ್ಲ. ಸುತ್ಮುತ್ತ ಊರೆಲ್ಲ ಇವನ್ನ ಅಸ್ಟೊಂದ್ ವೊಗುಳ್ತದ – “ಇವ ಮಗಳಗ ಎಷ್ಟು ಕರ್ಚ್ ಮಾಡ್ತಾನ ನೋಡು, ಎಣ್ ಮಗ ಅಂದ್ರ ರಾಸೇಕುರಂಗ ಅದೇನ್ ಪ್ರೀತಿ, ಇದ್ರ ಇಂತ ಅಪ್ಪ ಇರಬೇಕು…” ಅಂತರ ಜನ. ಇವ ನೋಡುದ್ರ ಒಳೊಳಗ ಬಾರಿ ಪ್ಲಾನ್ ಮಾಡನ. ಏನ ತಾನು ಶ್ರೀಮಂತ ಅಂತ ತೋರುಸ್ಕಳಕ್ಕ, ಮುಂದ ಮಗಳ್ಗ ಆಸ್ತಿ ಕೊಡದು ತಪ್ಪುಸ್ಕಳಕ್ಕ ಎಣ್ ಮಗಿಗ ಇಂಗೆಲ್ಲ ಕರ್ಚು ಮಾಡ್ತವ್ನ ಬಾರಿ ಚಾಣಾಕ್ಷ ಇವ. ಇಂಗಾದ್ರ ಎಣೈಕ ಉಟ್ಸಿರ ಅಪ್ಪನ್ನ ನಂಬದಾದ್ರು ಹೆಂಗೆ ಅಂತ ನಂಗ ಚಿಂತ ಅತ್ಕತು. ಕಡಗ ನಾ ಬಂದ್ ಕೆಲ್ಸ ಗ್ಯಾಪ್ತಿ ಆಯ್ತು; ಗೊಬ್ಬರ ತಕ್ಕಂಡು ನಮ್ಮೂರ್ ದಿಕ್ಕ ಒಂಟಿ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ